ಬೆಂಗಳೂರು: ಅಮೆರಿಕಾದಲ್ಲಿ ಸೈಕಲ್ ಸವಾರಿ ವೇಳೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ನಗರದ ವೈದ್ಯರು ಚಿಕಿತ್ಸೆ ನೀಡಿದ್ದು, ಹೊಸ ಜೀವನ ನೀಡಿದ್ದಾರೆ.
ಅಮೆರಿಕಾದಲ್ಲಿ ನೆಲೆಯೂರಿದ್ದ ಪ್ರವೀಣ್ ರಾಜ್ ರಾಧಾ (36) ಅವರು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. 2022ರ ಡಿಸೆಂಬರ್ ತಿಂಗಳಿನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದ ಅಲ್ಲಿನ ವೈದ್ಯರು, ಅವರು ಬದುಕುಳಿಯುವ ಸಾಧ್ಯತೆ ಶೇ.1 ಎಂದ ಹೇಳಿದ್ದರು.
ಪ್ರವೀಣ್ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ದೇಹದಲ್ಲಿ ಚಲನಶೀಲತೆಗಳಿರಲಿಲ್ಲ. ಅಮೆರಿಕಾದಲ್ಲಿ 3-4 ವಾರಗಳ ಕಾಲ ವೆಂಟಿಲೇರ್ ನಲ್ಲಿ ಸಪೋರ್ಟ್ ನಲ್ಲಿದ್ದರು. ಆದರೂ ಆರೋಗ್ಯ ಸ್ಥಿತಿ ಮಾತ್ರ ಸುಧಾರಿಸಿರಲಿಲ್ಲ. ಚಿಕಿತ್ಸೆ ನೀಡಿದ್ದ ವೈದ್ಯರು ಬದುಕುಳಿಯುವ ಸಾಧ್ಯತೆ ಶೇ.1 ರಷ್ಟಿದೆ ಎಂದು ಹೇಳಿದ್ದರು.
ವೈದ್ಯರ ಈ ಮಾತುಗಳನ್ನು ಕೇಳಿದ್ದ ಕುಟುಂಬಸ್ಥರು ಆತಂಕಕ್ಕೊಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಗರಕ್ಕೆ ಕರೆತಂದು, ಸಕ್ರಾ ವರ್ಲ್ಡ್ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಗೆ ದಾಖಲಾಗುವ ವೇಳೆ ಪ್ರವೀಣ್ ಹಾಸಿಗೆ ಹಿಡಿದ ಸ್ಥಿತಿಯಲ್ಲಿದ್ದರು. ನ್ಯೂರೋ ರಿಹ್ಯಾಬಿಲಿಟೇಷನ್'ಗಾಗಿ ಡಾ.ಮಹೇಶ್ವರಪ್ಪ ಬಿ.ಎಂ ಅವರು ಪರಿಶೀಲನೆ ನಡೆಸಿದರು. ವೈದ್ಯರ ಪರೀಕ್ಷೆ ಬಳಿಕ ಪ್ರವೀಣ್ ಅವರಿಗೆ ನ್ಯೂರೋ ರಿಹ್ಯಾಬಿಲಿಟೇಷನ್ (ನರಗಳ ಪುನರ್ವಸತಿ ಚಿಕಿತ್ಸೆ) ನೀಡಲಾಯಿತು. ಇದೀಗ 5 ತಿಂಗಳ ಯಶಸ್ವಿ ಚಿಕಿತ್ಸೆ ಬಳಿಕ ಪ್ರವಾಣ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿರುವ ಡಾ.ಮಹೇಶ್ವರಪ್ಪ ಅವರು, ಗಂಭೀರ ಮಿದುಳು ಗಾಯಗಳಿಗ ಒಳಗಾದವರ ಗುಣಪಡಿಸುವಲ್ಲಿ ನ್ಯೂರೋ ರಿಹ್ಯಾಬಿಲಿಟೇಷನ್ ಚಿಕಿತ್ಸೆ ಮಹತ್ವದ ಪಾತ್ರ ವಹಿಸುತ್ತದೆ. ರೋಗಿಯ ಸ್ಥಿತಿಯನ್ನು ಆಧರಿಸಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ವ್ಯಕ್ತಿಯಲ್ಲಿ ಆರೋಗ್ಯದಲ್ಲಿ ಸುಧಾರಣೆ ತರಲು ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಗಮನಾರ್ಹ ರೀತಿಯಲ್ಲಿ ಸುಧಾರಿಸಿದೆ. ಇದೀಗ ನಿಲ್ಲಲು ಹಾಗೂ ಮಾತನಾಡುವ ಸ್ಥಿತಿಗೆ ತಲುಪಿದ್ದಾರೆ. ಚಿಕಿತ್ಸೆ ಇನ್ನೂ ಮುಂದುವರೆದಿದೆ ಎಂದು ಹೇಳಿದ್ದಾರೆ.
Advertisement