ಟೊಮೇಟೊಗೆ ಚಿನ್ನದ ಬೆಲೆ; ಕಳ್ಳತನ ಪ್ರಕರಣದ ಬಳಿಕ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲು!

ಮಾರುಕಟ್ಟೆಯಲ್ಲಿ ಟೊಮೇಟೊಗೆ ಈ ಭಾರಿ ಭರ್ಜರಿ ಬೆಲೆ ಲಭ್ಯವಾಗುತ್ತಿದ್ದು, ಕರ್ನಾಟಕದ ರೈತರು ತಮ್ಮ ಕೃಷಿ ಭೂಮಿಯಲ್ಲಿನ ಬೆಳೆಯನ್ನು ದುಷ್ಕರ್ಮಿಗಳಿಂದ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಟೊಮೇಟೊ ಬೆಲೆ 100 ರೂಪಾಯಿ ದಾಟಿದ್ದು, ಒಂದು ಕೆಜಿಗೆ 150 ರೂಪಾಯಿಗೆ ಮಾರಾಟವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಾರುಕಟ್ಟೆಯಲ್ಲಿ ಟೊಮೇಟೊಗೆ ಈ ಭಾರಿ ಭರ್ಜರಿ ಬೆಲೆ ಲಭ್ಯವಾಗುತ್ತಿದ್ದು, ಕರ್ನಾಟಕದ ರೈತರು ತಮ್ಮ ಕೃಷಿ ಭೂಮಿಯಲ್ಲಿನ ಬೆಳೆಯನ್ನು ದುಷ್ಕರ್ಮಿಗಳಿಂದ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಟೊಮೇಟೊ ಬೆಲೆ 100 ರೂಪಾಯಿ ದಾಟಿದ್ದು, ಒಂದು ಕೆಜಿಗೆ 150 ರೂಪಾಯಿಗೆ ಮಾರಾಟವಾಗುತ್ತಿದೆ.

ಕಳ್ಳತನದಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಮಲಗಲು ಮುಂದಾಗುತ್ತಿದ್ದಾರೆ ಮತ್ತು ಕಟಾವಿಗೆ ಸಿದ್ಧವಾಗಿರುವ ಬೆಳೆಯನ್ನು ಕಾವಲು ಕಾಯುತ್ತಿದ್ದಾರೆ. ಮುಂಗಾರು ಮಳೆಯಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈ ಸನ್ನಿವೇಶವು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯುವ ದಕ್ಷಿಣ ಕರ್ನಾಟಕದ ಕೋಲಾರ, ಹಾಸನ ಜಿಲ್ಲೆಗಳಲ್ಲಿ ಕಂಡುಬರುತ್ತದೆ. 

ಕಳ್ಳತನ ಪ್ರಕರಣದಿಂದ ಜನರು ಮತ್ತು ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ತಮ್ಮ ಜಮೀನಿನಲ್ಲಿ ಟೆಂಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ನಸುಕಿನಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ರೈತರು ವಿವರಿಸುತ್ತಾರೆ. ಒಂದು ಬಾಕ್ಸ್ ಟೊಮೇಟೊ ಬೆಲೆ 2,500 ರಿಂದ 3,000 ರೂ. ವರೆಗೆ ಇದ್ದು, ಉತ್ತಮ ಫಸಲು ಪಡೆದ ರೈತರು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

ರೈತರು ಬೆಳೆದ ಬೆಳೆಗೆ ಹಲವು ವರ್ಷಗಳಿಂದ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಟೊಮೇಟೊ ಬೆಲೆ ತೀವ್ರವಾಗಿ ಕುಸಿತದಿಂದ ಕಂಗೆಟ್ಟಿದ್ದ ಅವರು ಪ್ರತಿಭಟಿಸಿ ತಾವು ಬೆಳೆದಿದ್ದ ಬೆಳೆಗಳನ್ನು ರಸ್ತೆ ಮತ್ತು ಹೆದ್ದಾರಿಗಳಲ್ಲಿ ಸುರಿದಿದ್ದರು. ಬಹುತೇಕ ಬಾರಿ ಸಾಗಣೆ ವೆಚ್ಚವೂ ಕೂಡ ರೈತರಿಗೆ ಸಿಗುತ್ತಿರಲಿಲ್ಲ. ಈಗ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವಾಗ ಕಳ್ಳತನದ ಭೀತಿ ಅವರನ್ನು ಕಾಡುತ್ತಿದೆ.

ಹಾಸನ ಜಿಲ್ಲೆಯ ತಮ್ಮ ಜಮೀನಿನಲ್ಲಿ ರಾತ್ರೋರಾತ್ರಿ 3 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನವಾಗಿದೆ ಎಂದು ಆರೋಪಿಸಿ ರೈತರೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹಾಸನದ ಹಳೇಬೀಡು ಸಮೀಪದ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಜುಲೈ 6 ರಂದು ಘಟನೆ ನಡೆದಿದೆ. ಈ ಸಂಬಂಧ ಹಳೇಬೀಡು ಪೊಲೀಸರಿಗೆ ಧರಣಿ ಅಲಿಯಾಸ್ ಸೋಮಶೇಖರ್ ಎಂಬುವವರು ದೂರು ನೀಡಿದ್ದರು.

3 ಲಕ್ಷ ಮೌಲ್ಯದ 90 ಬಾಕ್ಸ್ ಟೊಮೇಟೊಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಮೊದಲ ಗುಣಮಟ್ಟದ ಟೊಮೇಟೊ ಬೆಲೆ 150 ರೂ. ದಾಟಿದ್ದು, ಎರಡು ಎಕರೆ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. 

ದೂರುದಾರರು, ಚಿಕ್ಕಮಗಳೂರು ಮಾರುಕಟ್ಟೆಗೆ ತೆರಳಿ ಬೆಳೆಯನ್ನು ಮಾರಲು ನಿರ್ಧರಿಸಿದ್ದರು. ಆದರೆ, ಮಂಗಳವಾರ ರಾತ್ರಿ ಇವರ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಬಹುತೇಕ ಎಲ್ಲಾ ಟೊಮೇಟೊಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಟೊಮೇಟೊ ಗಿಡಗಳಿಗೂ ಕಳ್ಳರು ಹಾನಿ ಮಾಡಿದ್ದಾರೆ. ಮರುದಿನ ಬೆಳಗ್ಗೆ ಧರಣಿ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಏಳೆಂಟು ವರ್ಷಗಳಿಂದ ಟೊಮೇಟೊ ಬೆಳೆಯುತ್ತಿದ್ದೇನೆ. ಬೆಳೆಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಈ ವರ್ಷ ಸಮೃದ್ಧ ಫಸಲು ಬಂದಿದ್ದು, ಬೆಲೆಯೂ ಚೆನ್ನಾಗಿದೆ. ಸಾಲ ತೀರಿಸಲು ಯೋಚಿಸಿದ್ದೆ ಆದರೆ ಘಟನೆ ನನ್ನ ಸಂತೋಷವನ್ನೇ ಹಾಳು ಮಾಡಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com