ಬೆಂಗಳೂರಿನಲ್ಲಿ ಮೀನುಗಳ ಸಾಮೂಹಿಕ ಸಾವಿನಿಂದ ಲಕ್ಷಾಂತರ ರೂ. ನಷ್ಟ, ಮಾಲಿನ್ಯ: ಬಿಬಿಎಂಪಿ ಮೇಲೆ ಮೀನುಗಾರರ ಆಕ್ರೋಶ

ರಾಜಧಾನಿ ಬೆಂಗಳೂರಿನಲ್ಲಿ ಮೀನುಗಳನ್ನು ಸಾಮೂಹಿಕವಾಗಿ ಮೃತಪಟ್ಟಿರುವುದು ಮೀನುಗಾರಿಕೆ ನಡೆಸುವವರಿಗೆ ಭಾರೀ ಆಘಾತವನ್ನುಂಟುಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಕಂಡಿದ್ದಾರೆ. ಜಲ ಮಾಲಿನ್ಯದಿಂದ ಮೀನುಗಳು ಸಾಯುತ್ತಿದ್ದು ಇದಕ್ಕೆ ಮಹಾ ನಗರಪಾಲಿಕೆ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ಆರೋಪಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೀನುಗಳನ್ನು ಸಾಮೂಹಿಕವಾಗಿ ಮೃತಪಟ್ಟಿರುವುದು ಮೀನುಗಾರಿಕೆ ನಡೆಸುವವರಿಗೆ ಭಾರೀ ಆಘಾತವನ್ನುಂಟುಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಕಂಡಿದ್ದಾರೆ. ಜಲ ಮಾಲಿನ್ಯದಿಂದ ಮೀನುಗಳು ಸಾಯುತ್ತಿದ್ದು ಇದಕ್ಕೆ ಮಹಾ ನಗರಪಾಲಿಕೆ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

ಈ ವರ್ಷಾರಂಭದಿಂದ ಇಲ್ಲಿಯವರೆಗೆ ಮಹದೇವಪುರ ವಲಯದ ಕೆಳ ಅಂಬಲಿಪುರದಲ್ಲಿ ಜಲಮಾಲಿನ್ಯದಿಂದಾಗಿ ಹೆಚ್ಚಿನ ಸಂಖ್ಯೆಯ ಮೀನುಗಳು ಸತ್ತಿವೆ ಎಂದು ಹೇಳಲಾಗುತ್ತಿದೆ. ಮೀನು ಗುತ್ತಿಗೆದಾರ ಕೆ.ನಾರಾಯಣ್ ಪ್ರಕಾರ, ಕಳೆದ ಆರು ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಮೀನುಗಳು ಮೃತಪಟ್ಟಿವೆ. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೆರೆಯಲ್ಲಿ ಮೀನುಗಾರಿಕೆಗೆ ಹೂಡಿಕೆ ಮಾಡಿದ್ದು ಇದು ನಾಲ್ಕನೇ ಬಾರಿಯಾಗಿದ್ದು, ಇದೇ ಮೊದಲ ಬಾರಿಗೆ ಭಾರಿ ನಷ್ಟವಾಗಿದೆ. 3.60 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೆ. ಬಹುತೇಕ ಮೀನುಗಳು ಸತ್ತಿರುವುದರಿಂದ ನನಗೆ ಒಂದು ರೂಪಾಯಿ ಅಸಲೂ ಸಿಕ್ಕಿಲ್ಲ. ಅಧಿಕಾರಿಗಳು ಪರಿಶೀಲಿಸಿ ಕೆರೆ ಮಾಲಿನ್ಯವನ್ನು ನಿವಾರಿಸಬೇಕು ಎಂದು ನಾರಾಯಣ ಹೇಳುತ್ತಾರೆ. ಅಧಿಕಾರಿಗಳು ನೀರಿನ ಗುಣಮಟ್ಟ ಮತ್ತು ಮಳೆನೀರು ಹೋಗುವ ಚರಂಡಿಗಳ ಸರಿಯಾದ ಪರಿಶೀಲನೆ ನಡೆಸಬೇಕು. ಹಾಗಾದರೆ ಈ ಸಮಸ್ಯೆಯನ್ನು ನಿವಾರಿಸಬಹುದು ಎಂದು ಅವರು ಹೇಳುತ್ತಾರೆ. 

ದಶಕದ ಹಿಂದೆ ಬಿಬಿಎಂಪಿ ವತಿಯಿಂದ ಕೆರೆಗೆ ಕಾಯಕಲ್ಪ ನೀಡಲಾಗಿದ್ದು, ಸ್ಥಳೀಯ ನಿವಾಸಿಗಳು ಜಲಮೂಲವನ್ನು ಕಾಪಾಡಿಕೊಂಡು ಬಂದಿದ್ದಾರೆ. ಸ್ಥಳೀಯರ ಪ್ರಕಾರ, ಕೆಳ ಅಂಬಲಿಪುರ ಕೆರೆಯಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು.

ಏಳು ಎಕರೆ ವಿಸ್ತೀರ್ಣದ ಕೆರೆಯು ಐದು ದೊಡ್ಡ ಅಪಾರ್ಟ್‌ಮೆಂಟ್ ಸಮುಚ್ಚಯಗಳಿಂದ ಸುತ್ತುವರಿದಿದ್ದು, ಎಲ್ಲ ಕಡೆಯೂ ಕೊಳಚೆ ನೀರು ಸಂಸ್ಕರಣಾ ಘಟಕಗಳಿರುವುದರಿಂದ ಹಸಿ ಕೊಳಚೆ ನೀರು ಹರಿದು ಬಂದಿಲ್ಲ. ಮಳೆನೀರು ಚರಂಡಿಯಲ್ಲಿ ರಾತ್ರಿ ವೇಳೆ ಚರಂಡಿ ನೀರು ಹರಿದು ಬರುತ್ತಿದೆ. ಮೇಲ್ಭಾಗದ ಹೊಳೆಯಲ್ಲಿ, ಮೇಲಿನ ಅಂಬಲಿಪುರ ಕೆರೆಗೆ ಕೊಳಚೆ ನೀರು ಬರುತ್ತಿದೆ. ಇದು ಕೂಡ ಮೀನುಗಳ ಸಾಯುವಿಕೆಗೆ ಕಾರಣವಾಗಿರಬಹುದು. ಬಿಬಿಎಂಪಿಗೆ ಮಾಹಿತಿ ನೀಡಲಾಗಿದೆ. ಕೆರೆ ಸಂರಕ್ಷಣಾ ಗುಂಪು ನೀರಿನ ಮಾದರಿ ತೆಗೆದುಕೊಂಡು ಖಾಸಗಿ ಏಜೆನ್ಸಿಯಲ್ಲಿ ಪರೀಕ್ಷೆಗೆ ಕಳುಹಿಸಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಕೆರೆ ಕಾರ್ಯಕರ್ತೆ ಕವಿತಾ ಕಿಶೋರ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸುತ್ತಮುತ್ತ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಕೆಲ ಸ್ಥಳೀಯರ ಅಭಿಪ್ರಾಯ. ಹೋಟೆಲ್‌ಗಳು ಮತ್ತು ಅಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಭಾಗಗಳು ತಮ್ಮ ಚರಂಡಿ ನೀರನ್ನು ಎಲ್ಲಿಗೆ ಬಿಡುತ್ತಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಬಹುಶಃ ಹೋಟೆಲ್‌ಗಳು ಮತ್ತು ಅಂಗಡಿ ಮಾಲೀಕರು ರಾತ್ರಿಯಲ್ಲಿ ಚರಂಡಿಗೆ ಕಲುಷಿತ ನೀರು ಬಿಡುತ್ತಾರೆ. ಇದು ಮಾಲಿನ್ಯಕ್ಕೆ ಕಾರಣವಾಗಬಹುದು ಎಂದು ಕಾರ್ಯಕರ್ತರೊಬ್ಬರು ಹೇಳುತ್ತಾರೆ. 

ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್ ಘಟನೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ನಾವು ತಪಾಸಣೆ ನಡೆಸುತ್ತೇವೆ, ನೀರಿನ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com