ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಜಟಿಲವಾಗಿದ್ದ ಪ್ರಕರಣದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರೋಪಿ ಅನ್ನಪೂರ್ಣ (28) ಎಂಬುವವರಿಗೆ 'ಬ್ರೈನ್ ಮ್ಯಾಪಿಂಗ್' ನಡೆಸಿದ್ದಾರೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಪ್ರಕರಣ ತನಿಖೆ ತಾರ್ಕಿಕ ಅಂತ್ಯ ಕಂಡಿದೆ.
ಆರೋಪಿಯನ್ನು ಗದಗದ ಅಸುಂಡಿ ನಿವಾಸಿ ಅನ್ನಪೂರ್ಣ ಈಶ್ವರಪ್ಪ ಆನೆಪ್ಪನವರ್ ಎಂದು ಗುರುತಿಸಲಾಗಿದೆ. ಆಕೆ 8-10 ತಿಂಗಳಿಂದ ವೃದ್ಧ ದಂಪತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ತನ್ನ ಊರಿಗೆ ಹೋಗಬೇಕು ಎಂದು ಹೇಳಿ ಹೋದವಳು ವಾಪಸ್ ಬಂದಿರಲಿಲ್ಲ. ದಂಪತಿ ಕರೆ ಮಾಡಿ ಹಿಂತಿರುಗುವಂತೆ ಕೇಳಿದಾಗ, ಅವಳು ಹಿಂತಿರುಗುವುದಿಲ್ಲ ಎಂದು ಹೇಳಿದಳು. ಏತನ್ಮಧ್ಯೆ, ಕಬೋರ್ಡ್ಗಳಲ್ಲಿ ಇರಿಸಲಾಗಿದ್ದ ಬೆಲೆಬಾಳುವ ಚಿನ್ನಾಭರಣ ಕಾಣೆಯಾಗಿರುವುದು ದಂಪತಿ ಗಮನಕ್ಕೆ ಬಂದಿದೆ. ಈ ಕಳ್ಳತನದ ಹಿಂದೆ ಅನ್ನಪೂರ್ಣ ಕೈವಾಡವಿದೆ ಎಂದು ಶಂಕಿಸಿ ಮಾರ್ಚ್ 22, 2022 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಆರೋಪಿಯನ್ನು ಹಲವು ಬಾರಿ ವಿಚಾರಣೆಗೆ ಕರೆಸಲಾಯಿತು, ಆದರೆ ಹೆಚ್ಚಿನ ವಿವರ ಬಹಿರಂಗಪಡಿಸಲಿಲ್ಲ. ನ್ಯಾಯಾಲಯದ ಅನುಮತಿಯೊಂದಿಗೆ, ಆಕೆಯನ್ನು ಪಾಲಿಗ್ರಫಿಗೆ ಒಳಪಡಿಸಲಾಯಿತು, ಅದು ಅವಳು ಸುಳ್ಳು ಹೇಳುತ್ತಿದ್ದಾಳೆ ಎಂದು ತಿಳಿಸಿತು ಅವಳನ್ನು ಮತ್ತೆ ಪ್ರಶ್ನಿಸಲಾಯಿತು, ಆದರೆ ಆ ಸಮಯದಲ್ಲೂ ಕೂಡ ತಾನು ನಿರಪರಾಧಿ ಎಂದು ಹೇಳಿಕೊಂಡಳು.
ಆಕೆಯನ್ನು ಬ್ರೈನ್ ಮ್ಯಾಪಿಂಗ್ಗೆ ಒಳಪಡಿಸಲು ಮತ್ತೊಮ್ಮೆ ನ್ಯಾಯಾಲಯದ ಅನುಮತಿ ಪಡೆಯಲಾಯಿತು., ಈ ವೇಳೆ ಆಕೆ ಕದ್ದ ಚಿನ್ನಾಭರಣಗಳನ್ನು ಸಂಬಂಧಿಕರಿಗೆ ನೀಡಿದ್ದಾಳೆ ಎಂಬ ಸುಳಿವು ಸಿಕ್ಕಿದೆ. ಅದರ ಆಧಾರದ ಮೇಲೆ ಆಕೆಯನ್ನು ಮತ್ತೊಮ್ಮೆ ವಿಚಾರಣೆ ನಡೆಸಿದಾಗ ಹಲವು ಬಾರಿ ಚಿನ್ನಾಭರಣ ಕದ್ದು ಸೋದರ ಮಾವನಿಗೆ ನೀಡಿರುವುದು ಪತ್ತೆಯಾಗಿದೆ.
ಅವು ಕದ್ದ ಆಭರಣ ಎಂದು ತಿಳಿಯದ ಆಕೆಯ ಸೋದರ ಮಾವ, ಅವುಗಳನ್ನು ಒತ್ತೆಯಿಟ್ಟು ಅವಳಿಗೆ ಹಣ ನೀಡಿದ್ದನು. ಪ್ರಕರಣ ವರದಿಯಾದ ಒಂದೂವರೆ ವರ್ಷಗಳ ನಂತರ ಆಕೆಯನ್ನು ಬಂಧಿಸಲಾಗಿದ್ದು, ಒತ್ತೆ ಇಟ್ಟಿದ್ದ 6.5 ಲಕ್ಷ ಮೌಲ್ಯದ 131 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement