ಅಪ್ರಾಪ್ತ ಬಾಲಕಿಯ ಧೈರ್ಯದಿಂದ ಇಬ್ಬರು ದರೋಡೆಕೋರರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಇಬ್ಬರು ದರೋಡೆಕೋರರಿಗೆ ಮಕ್ಕಳ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಪಡಿಸಿದ್ದು, ಈ ದರೋಡೆಕೋರರನ್ನು ಜೈಲಿಗೆ ಕಳುಹಿಸುವಲ್ಲಿ ಧೈರ್ಯಶಾಲಿ ಅಪ್ರಾಪ್ತ ಬಾಲಕಿಯೊಬ್ಬಳು ಕಾರಣಳಾಗಿದ್ದಾಳೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಇಬ್ಬರು ದರೋಡೆಕೋರರಿಗೆ ಮಕ್ಕಳ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಪಡಿಸಿದ್ದು, ಈ ದರೋಡೆಕೋರರನ್ನು ಜೈಲಿಗೆ ಕಳುಹಿಸುವಲ್ಲಿ ಧೈರ್ಯಶಾಲಿ ಅಪ್ರಾಪ್ತ ಬಾಲಕಿಯೊಬ್ಬಳು ಕಾರಣಳಾಗಿದ್ದಾಳೆ.

2022ರ ಮಾರ್ಚ್ 15ರಂದು ನಗರದ ಯಶವಂತಪುರದ ಮನೆಯಲ್ಲಿ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಇದ್ದ 17 ವರ್ಷದ ಹುಡುಗಿಗೆ ಅದೊಂದು ಸಾಮಾನ್ಯ ದಿನವಾಗಿತ್ತು. ಚಿನ್ನದ ವ್ಯಾಪಾರಿಯಾಗಿದ್ದ ಆಕೆಯ ತಂದೆ ತನ್ನ ಆಭರಣದ ಅಂಗಡಿಗೆ ಹೋಗಿದ್ದರು.

ಮಧ್ಯಾಹ್ನ 1.20ರ ಸುಮಾರಿಗೆ ನಾಲ್ವರು ದರೋಡೆಕೋರರಲ್ಲಿ ಒಬ್ಬರು ಬಾಗಿಲು ಬಡಿದಿದ್ದಾರೆ. ಈ ವೇಳೆ ಬಾಲಕಿ ಬಾಗಿಲನ್ನು ಸ್ವಲ್ಪ ತೆರೆದಾಗ ಅವರಲ್ಲಿ ಒಬ್ಬಾತ ಒಳಗೆ ನುಗ್ಗಿದ್ದಾನೆ ಮತ್ತು ಇನ್ನಿಬ್ಬರು ಮನೆಗೆ ಪ್ರವೇಶಿಸಿದ್ದಾರೆ. ಒಬ್ಬಾತ ಗೇಟ್‌ನಲ್ಲಿ ಕಾವಲು ಕಾಯುತ್ತಿದ್ದನು.

ದರೋಡೆಕೋರರಲ್ಲಿ ಒಬ್ಬಾತ ಬಾಲಕಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ ಮತ್ತು ಚಿನ್ನಾಭರಣ ನೀಡುವಂತೆ ಆಕೆಯ ತಾಯಿಯನ್ನು ಕೇಳಿದ್ದಾನೆ. ಅವರು ಚಿನ್ನದ ನೆಕ್ಲೇಸ್, ಕಿವಿಯೋಲೆಗಳು ಮತ್ತು ಉಂಗುರಗಳನ್ನು ನೀಡಿದ್ದಾರೆ. ಅಜ್ಜಿ ತನ್ನ ಮೊಬೈಲ್ ಬಳಸಿ ಕರೆ ಮಾಡಲು ಪ್ರಯತ್ನಿಸಿದಾಗ ದರೋಡೆಕೋರರು ಅದನ್ನು ಕಿತ್ತುಕೊಂಡಿದ್ದಾರೆ. ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಒಬ್ಬಾತ ಆಕೆಯನ್ನು ಹಿಡಿದು ಗೋಡೆಗೆ ತಲೆ ಬಡಿದಿದ್ದಾನೆ. ಬಳಿಕ ನಾಲ್ವರೂ ದರೋಡೆಕೋರರು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ. ಕೂಡಲೇ ಬಾಲ್ಕನಿಗೆ ಬಂದ ತಾಯಿ ಅಜ್ಜಿ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ.

ಪಕ್ಕದಲ್ಲಿದ್ದ ತರಕಾರಿ ಮಾರಾಟಗಾರರು ಪರಾರಿಯಾಗುತ್ತಿದ್ದ ದರೋಡೆಕೋರರಲ್ಲಿ ಒಬ್ಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಮೂವರು ಪರಾರಿಯಾಗಿದ್ದಾರೆ.

ದ್ವಿತೀಯ ಪಿಯು ಓದುತ್ತಿದ್ದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಪರೇಡ್‌ನಲ್ಲಿ ಆರೋಪಿಗಳನ್ನು ಗುರುತಿಸಿದ್ದಾಳೆ.

ವಿಭಜಿತ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು ಮತ್ತು ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಮೊದಲ ಇಬ್ಬರು ಆರೋಪಿಗಳಾದ ಅಮಿತ್ ಕುಮಾರ್ ಶುಕ್ಲಾ ಮತ್ತು ಮನೋಹರ್ ಸಿಂಗ್ ವಿರುದ್ಧ ವಿಚಾರಣೆಯನ್ನು ನಡೆಸಲಾಯಿತು. ಇಬ್ಬರೂ ತಲಾ 50,000 ರೂ. ದಂಡವನ್ನು ಪಾವತಿಸಬೇಕು ಎಂದು ನ್ಯಾಯಾಧೀಶ ಸಂತೋಷ್ ಸಿಬಿ ಅವರು ಜೂ. 24ರ ಆದೇಶದಲ್ಲಿ ತಿಳಿಸಿದ್ದಾರೆ.

ನಾಲ್ವರಲ್ಲಿ ಇಬ್ಬರು ಆರೋಪಿಗಳು ಕಳ್ಳತನ ಘಟನೆ ನಡೆಯುವ ಕೆಲ ದಿನಗಳ ಹಿಂದೆ ಅಪಘಾತ ಮಾಡಿ ಮನೆಗೆ ಡ್ರಾಪ್ ಮಾಡುವಾಗ ಪರಿಚಯ ಮಾಡಿಕೊಂಡಿದ್ದರು ಎಂದು ಬಾಲಕಿಯ ತಂದೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರ ಹಿನ್ನೆಲೆ ಮತ್ತು ಆರ್ಥಿಕ ಸಾಮರ್ಥ್ಯದ ಬಗ್ಗೆ ಅವರು ತಿಳಿದುಕೊಂಡರು. ಅದರಂತೆ ಅವರ ಮನೆಯನ್ನು ದರೋಡೆ ಮಾಡಲು ಯೋಜನೆ ರೂಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com