ಉರಿಗೌಡ, ನಂಜೇಗೌಡರ ವಿಚಾರ ಕೆದಕುವುದನ್ನು ನಿಲ್ಲಿಸಲು ನಿರ್ಮಲಾನಂದ ಸ್ವಾಮೀಜಿ ಕರೆ; ಬಿಜೆಪಿಗೆ ಹಿನ್ನಡೆಯಲ್ಲ ಎಂದ ಸಿಎಂ

ಉರಿಗೌಡ ಮತ್ತು ನಂಜೇಗೌಡರ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಕ್ತ ಸಂಶೋಧನೆ ನಂತರ ಸತ್ಯ ಹೊರಬೀಳುವ ದಿನ ಜಯ ಸಿಗಲಿದೆ ಎಂದು ಮಂಗಳವಾರ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಹುಬ್ಬಳ್ಳಿ: ಉರಿಗೌಡ ಮತ್ತು ನಂಜೇಗೌಡರ ವಿಚಾರಕ್ಕೆ ಸಂಬಂಧಿಸಿದಂತೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳು  ಮದ್ಯ ಪ್ರವೇಶಿಸಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಕ್ತ ಸಂಶೋಧನೆ ನಂತರ ಸತ್ಯ ಹೊರಬೀಳುವ ದಿನ ಜಯ ಸಿಗಲಿದೆ ಎಂದು ಮಂಗಳವಾರ ಹೇಳಿದ್ದಾರೆ.

ಹಿಂದಿನ ಮೈಸೂರು ದೊರೆ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ಸಾಯಲಿಲ್ಲ. ಆದರೆ, ಇಬ್ಬರು ಒಕ್ಕಲಿಗ ಮುಖಂಡರಾದ ಉರಿಗೌಡ ಮತ್ತು ನಂಜೇಗೌಡರಿಂದ ಕೊಲ್ಲಲ್ಪಟ್ಟರು ಎಂದು ಹಳೆ ಮೈಸೂರು ಭಾಗದ ಕೆಲವು ಜನರು ಮತ್ತು ಕೆಲವು ಆಡಳಿತಾರೂಢ ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ. ಇದನ್ನು ಪ್ರಮುಖ ಇತಿಹಾಸಕಾರರು ವಿರೋಧಿಸಿದ್ದಾರೆ.

ಈ ವಿವಾದದಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಪಕ್ಷಕ್ಕೆ ಯಾವುದೇ ಹಿನ್ನಡೆಯ ಪ್ರಶ್ನೆಯೇ ಇಲ್ಲ. ಸಂಶೋಧನೆ ನಡೆದು ಸತ್ಯ ಹೊರಬೀಳುವ ದಿನ ಜಯ ಸಿಗುತ್ತದೆ ಎಂದು ಹೇಳಿದರು.

ವಿರೋಧ ಪಕ್ಷಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ನಾನು ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಮಾತ್ರ ಮಾತನಾಡುವುದಿಲ್ಲ. ಸ್ವಾತಂತ್ರ್ಯಾ ನಂತರ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಹಲವಾರು ಐತಿಹಾಸಿಕ ಸತ್ಯಗಳನ್ನು ಹತ್ತಿಕ್ಕಲಾಗಿದೆ ಮತ್ತು ಇತಿಹಾಸವನ್ನು ತಿರುಚಲಾಗಿದೆ. ಆಗ ಅದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಸತ್ಯ ಹೇಳಿದರೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಉರಿಗೌಡ ಮತ್ತು ನಂಜೇಗೌಡರ ಅಸ್ತಿತ್ವವೇ ಇಲ್ಲ, ಅವರು ಕೇವಲ ಕಾಲ್ಪನಿಕ ಪಾತ್ರಗಳಾಗಿರಬಹುದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಮರ್ಥಿಸಿಕೊಂಡಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯವಿರುವ 'ಹಳೆ ಮೈಸೂರು' ಭಾಗದಲ್ಲಿ ಕಾಲಿಡಲು ಪ್ರಯತ್ನಿಸುತ್ತಿರುವ ಬಿಜೆಪಿ, ಈ ಜೋಡಿಯನ್ನು ತಮ್ಮ ಇತ್ತೀಚಿನ ಪ್ರಚಾರದ ಸರಕಾಗಿ ಬಳಸಿಕೊಳ್ಳುತ್ತಿದೆ.

ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಭಾವಿ ಮಠಾಧೀಶರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸೋಮವಾರ ಗೌಡರ ಅಸ್ತಿತ್ವಕ್ಕೆ ಐತಿಹಾಸಿಕ ಪುರಾವೆಗಳ ಕೊರತೆಯನ್ನು ಉಲ್ಲೇಖಿಸಿ ಸಮಸ್ಯೆಗೆ ಅಂತ್ಯ ಹಾಡುವಂತೆ ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com