ಬೆಂಗಳೂರು: ತರಕಾರಿಗಳಲ್ಲಿ ಭಾರದ ಲೋಹ, ಪರೀಕ್ಷೆ ನಡೆಸುವಂತೆ NGT ಸೂಚನೆ

ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ವಿಷಕಾರಿ ಭಾರದ ಲೋಹದ ಅಂಶಗಳು ಪತ್ತೆಯಾಗುತ್ತಿವೆ ಎಂಬ ಆರೋಪದ ಬೆನ್ನಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (National Green Tribunal) ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ತರಕಾರಿ ಮಾರಾಟ
ಬೆಂಗಳೂರಿನಲ್ಲಿ ತರಕಾರಿ ಮಾರಾಟ

ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ವಿಷಕಾರಿ ಭಾರದ ಲೋಹದ ಅಂಶಗಳು ಪತ್ತೆಯಾಗುತ್ತಿವೆ ಎಂಬ ಆರೋಪದ ಬೆನ್ನಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (National Green Tribunal) ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.

ಹೌದು.. ಬೆಂಗಳೂರಿನಲ್ಲಿ ಮಾರಾಟವಾಗುತ್ತಿರುವ ತರಕಾರಿಗಳಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರದ ಲೋಹಗಳ ಅಂಶ ಪತ್ತೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಇವುಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಸಮಗ್ರ ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ನೇತೃತ್ವದ ಪ್ರಧಾನ ಪೀಠ, ‘ಪರಿಸರಕ್ಕೆ ಸಂಬಂಧಿಸಿ ಇದೊಂದು ಗಂಭೀರ ಪ್ರಕರಣ’ ಎಂದು ಹೇಳಿದೆ. ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆಯ (ಎಂಪ್ರಿ) ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನ್ಯಾಯಮಂಡಳಿಗೆ ಕಿರು ವರದಿ ಸಲ್ಲಿಸಿದೆ. ತರಕಾರಿಗಳ ಮಾಲಿನ್ಯದ ಪ್ರಮಾಣವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದರ ಮೂಲದ ಕುರಿತು ರಾಜ್ಯ ಮಟ್ಟದಲ್ಲಿ ಆಳ ಹಾಗೂ ಸಮಗ್ರವಾದ ತನಿಖೆ ನಡೆಸಬೇಕು ಹಾಗೂ ಇದಕ್ಕೆ ವಿವಿಧ ಇಲಾಖೆಗಳ ಸಹಯೋಗ ಪಡೆಯಬೇಕು ಎಂದು ಮಂಡಳಿಯು ವರದಿಯಲ್ಲಿ ತಿಳಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಂಪ್ರಿಯನ್ನು ಪ್ರತಿವಾದಿಗಳನ್ನಾಗಿ ಪೀಠ ಸೇರ್ಪಡೆ ಮಾಡಿದೆ. 

ಈ ವಿಷಯದ ಬಗ್ಗೆ ತಳಮಟ್ಟದ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಬೇಕು ಹಾಗೂ ಎಂಪ್ರಿ ವರದಿಯನ್ನು ಸಮರ್ಪಕವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. ಪ್ರಕರಣವನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿರುವ ಪ್ರಧಾನ ಪೀಠವು ವಿಚಾರಣೆಯನ್ನು 2024ರ ಜನವರಿ 10ಕ್ಕೆ ಮುಂದೂಡಿದೆ.

ರಾಜ್ಯಾದ್ಯಂತ ಸಮೀಕ್ಷೆ
ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲು ಅಕ್ಟೋಬರ್ 25 ರಂದು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದ ಎಫ್‌ಎಸ್‌ಎಸ್‌ಎಐ (FSSAI) (Food Safety and Standards Authority of India) ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಸಾಮಾನ್ಯ ಮಾರ್ಗಸೂಚಿಗಳ ಪ್ರಕಾರ ಈ ವಿಷಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ. 

“ಮಾಧ್ಯಮ ವರದಿಯ ದಿನಾಂಕದಂದು ನಾವು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದೇವೆ. ಇಲ್ಲಿಯವರೆಗೆ, 199 ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಪರೀಕ್ಷೆ ನಡೆಯುತ್ತಿದೆ. ಬೆಂಗಳೂರನ್ನು ಒಳಗೊಂಡು, ಇಡೀ ಕರ್ನಾಟಕ ರಾಜ್ಯಕ್ಕೆ ಕಾರ್ಯಾಚರಣೆಯನ್ನು ವಿಸ್ತರಿಸಲು ನಾವು ನೋಡುತ್ತಿದ್ದೇವೆ ಎಂದು ಆಹಾರ ಸುರಕ್ಷತಾ ಆಯುಕ್ತ ನಾಗರಾಜ ಎನ್ ಎಂ ತಿಳಿಸಿದ್ದಾರೆ.

ಏತನ್ಮಧ್ಯೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಜೊತೆಗೆ ಕೃಷಿ, ತೋಟಗಾರಿಕೆ ಮತ್ತು ಪರಿಸರ ಇಲಾಖೆಗಳ ಅಧಿಕಾರಿಗಳು ತರಕಾರಿಗಳ ಮಾಲಿನ್ಯದ ಬಗ್ಗೆ ಚರ್ಚಿಸಿದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com