ಕುಡಿದ ಮತ್ತಿನಲ್ಲಿ ಶಾಲಾ ವಾಹನ ಅಡ್ಡಾದಿಡ್ಡಿ ಚಾಲನೆ: ಓರ್ವ ವ್ಯಕ್ತಿ ಬಲಿ, ಚಾಲಕ ಬಂಧನ

ಕುಡಿದ ಮತ್ತಿನಲ್ಲಿ ಶಾಲಾ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ, ವೃದ್ಧ ವ್ಯಕ್ತಿ ಪ್ರಾಣ ಬಲಿಪಡೆದುಕೊಂಡ ಚಾಲಕನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕುಡಿದ ಮತ್ತಿನಲ್ಲಿ ಶಾಲಾ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ, ವೃದ್ಧ ವ್ಯಕ್ತಿ ಪ್ರಾಣ ಬಲಿಪಡೆದುಕೊಂಡ ಚಾಲಕನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಆರೋಪಿಯ್ನು ನ್ಯೂ ಬಾಲ್ಡ್‌ವಿನ್ ಇಂಟರ್‌ನ್ಯಾಶನಲ್ ಸ್ಕೂಲ್‌'ನ ಬಸ್ ಚಾಲಕ ಸುಭಾಷ್ ಎಂದು ಗುರ್ತಿಸಲಾಗಿದೆ. ಮೃತ ವ್ಯಕ್ತಿಯನ್ನು ಬಾಣಸವಾಡಿ ನಿವಾಸಿ ಅಂಜನಪ್ಪ (60) ಎಂದು ಗುರ್ತಿಸಲಾಗಿದೆ.

ಅ.10ರಂದು ನ್ಯೂ ಬಾಲ್ಡ್ ವಿನ್ ಇಂಟರ್ ನ್ಯಾಷನಲ್ ಸ್ಕೂಲ್'ನ ಸ್ಕೂಲ್ ನ ಬಸ್ಸನ್ನು ಚಾಲಕ ಸುಭಾಷ್ ರಾಮಮೂರ್ತಿ ನಗರ ಕಡೆಯಿಂದ ಹೊರಮಾವು ಜಂಕ್ಷನ್ ಕಡೆಗೆ ಚಲಾಯಿಸುತ್ತಿದ್ದ. ದೊಡ್ಡಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಈ ವೇಲೆ ಬಸ್ ನಿಯಂತ್ರಣ ತಪ್ಪಿ ಪಾದಾಚಾರಿ ಅಂಜನಪ್ಪ ಹಾಗೂ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಅಂಜನಪ್ಪ, ದ್ವಿಚಕ್ರ ವಾಹನ ಸವಾರರಾದ ಮಂಜುನಾಥ್ ಮತ್ತು ಶಕ್ತಿ ಎಂಬುವವರಿಗೆ ಗಾಯವಾಗಿತ್ತು. ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಂಜನಪ್ಪ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

ಆರೋಪಿ ಸುಭಾಷ್ ಅಕ್ಟೋಬರ್ 10 ರಂದು ರಜೆಯಲ್ಲಿದ್ದ. ಆದರೆ, ಅಂದು ನಿಯೋಜನೆಗೊಂಡಿದ್ದ ಚಾಲಕ ಸೇವೆಗೆ ಹಾಜರಾಗಿರಲಿಲ್ಲ. ಹೀಗಾಗಿ ಸುಭಾಷ್ ಅವರನ್ನು ತುರ್ತು ಸಮಯ ಹಿನ್ನೆಲೆಯಲ್ಲಿ ಶಾಲೆಗೆ ಬರುವಂತೆ ಸೂಚಿಸಲಾಗಿತ್ತು. ಬಾಣಸವಾಡಿ ವ್ಯಾಪ್ತಿಯಲ್ಲಿ ನೆಲೆಯೂರಿರುವ ವಿದ್ಯಾರ್ಥಿಗಳನ್ನು ಡ್ರಾಪ್ ಮಾಡುವಂತೆ ಸೂಚಿಸಿದ್ದರು.

ತರಾತುರಿಯಲ್ಲಿದ್ದ ಹಿನ್ನೆಲೆಯಲ್ಲಿ ಶಾಲೆಯ ಅಧಿಕಾರಿಗಳು ಸುಭಾಷ್ ಅಮಲಿನಲ್ಲಿದ್ದಾನೆಯೇ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪರಿಶೀಲಿಸಿಲ್ಲ ಎಂದು ತಿಳಿದುಬಂದಿದೆ.

ಬಸ್ ಸಾಮಾನ್ಯವಾಗಿ ಮಧ್ಯಾಹ್ನ 3.30ರ ಸುಮಾರಿಗೆ ಶಾಲೆಗೆ ಹೊರಡುತ್ತಿತ್ತು. ಆದರೆ, ಪರೀಕ್ಷೆ ಹಿನ್ನೆಲೆಯಲ್ಲಿ ಶಾಲೆಯು ಮಧ್ಯಾಹ್ನ 1 ಗಂಟೆಗೆ ಮುಗಿದಿತ್ತು. ಕುಡಿದ ಮತ್ತಿನಲ್ಲಿದ್ದ ಸುಭಾಷ್, ಬಸ್ ನ್ನು ಅಡ್ಡಾದಿಡ್ಡಿ ಚಲಾಯಿಸಿದ್ದ.  ಈ ವೇಳೆ ಪಾದಚಾರಿ ವ್ಯಕ್ತಿ ಹಾಗೂ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ವೇಳೆ ಶಾಲಾ ಬಸ್ ನಲ್ಲಿ 25 ಮಂದಿ ವಿದ್ಯಾರ್ಥಿಗಳಿದ್ದರು ಎಂದು ತಿಳಿದುಬಂದಿದೆ,

ಘಟನೆ ಬಳಿಕ ಶಾಲೆಯ ಆಡಳಿತ ಮಂಡಳಿ ಕೂಡಲೇ ವಿದ್ಯಾರ್ಥಿಗಳನ್ನು ಇಳಿಸಿ, ಮತ್ತೊಂದು ಬಸ್ ವ್ಯವಸ್ಥೆ ಮಾಡಿಸಿ ಕಳುಹಿಸಿದ್ದಾರೆ. ಬಳಿಕ ಪೋಷಕರಿಗೂ ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಶಾಲೆಯು ಸುಭಾಷ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ಘಟನೆ ಸಂಬಂಧ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಸುಭಾಷ್ ನ್ನು ಬಂಧನಕ್ಕೊಳಪಡಿಸಿ, ಶಾಲಾ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com