ಬೆಂಗಳೂರು: ಬ್ಯಾಡರಹಳ್ಳಿ ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಓರ್ವ ಆರೋಪಿಯನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದೆ.
ಬಂಧಿತ ಆರೋಪಿಯನ್ನು ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿ ವಿಮಾನದ ಮೂಲಕ ಹೈದರಾಬಾದ್ಗೆ ಪರಾರಿಯಾಗಲು ಮುಂದಾಗಿತ್ತ. ಟಿಕೆಟ್ ಕೂಡ ಬುಕ್ ಮಾಡಿದ್ದ. ಆದರೆ, ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು ಪರಾರಿಯಾಗುವುದಕ್ಕೂ ಮುನ್ನವೇ ಬಂಧನಕ್ಕೊಳಪಡಿಸಿದ್ದಾರೆ.
ಗುರುವಾರ ಬೆಳಿಗ್ಗೆ ಚಿನ್ನದಂಡಗಿಗೆ ನುಗ್ಗಿದ್ದ ನಾಲ್ವರು ದರೋಡೆಕೋರರು, ಅಂಗಡಿ ಮಾಲೀಕ ಮನೋಹರ್ ಲೋಹರ್ ಮೇಲೆ ಗುಂಡಿನ ದಾಳಿ ನಡೆಸಿ ಅರ್ಧ ಕೆಜಿ ಚಿನ್ನ ದೋಚಿ ಪರಾರಿಯಾಗಿದ್ದರು. ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು, ದರೋಡೆಕೋರರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಇತರೆ ಮೂವರು ಆರೋಪಿಗಳಾದ ಸಿಕಂದರ್, ಶಿವ ಅಲಿಯಾಸ್ ಕಳ್ಳ ಶಿವ, ಮತ್ತು ವಿಕಾಸ್ ಗಾಗಿ ಹುಡುಕಾಟ ಮುಂದುವರೆದಿದೆ. ಈಗಾಗಲೇ ನಾಲ್ವರ ವಿರುದ್ಧವೂ ಪ್ರಕರಣಗಳಿದ್ದು, ಜೈಲಿನ ರುಚಿ ನೋಡಿದ್ದಾರೆಂದು ತಿಳಿದುಬಂದಿದೆ.
ಶಿವ ಸ್ಥಳೀಯ ನಿವಾಸಿಯಾಗಿದ್ದು, ಸಿಕಂದರ್ ಮತ್ತು ವಿಕಾಸ್ ಹೈದರಾಬಾದ್ ಮೂಲದವರಾಗಿರುವುದರಿಂದ ಶಿವನ ಸಹಾಯದಿಂದ ಕೃತ್ಯವೆಸಗಿದ್ದಾರೆನ್ನಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
Advertisement