ಬೆಂಗಳೂರು: ಅತಿವೇಗವಾಗಿ ಬೈಕ್ ಓಡಿಸಬೇಡಿ ಎಂದು ಬುದ್ದಿ ಮಾತು ಹೇಳಿದ ಪ್ರೊಬೇಷನರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ನಲ್ಲಿ ಡಿಕ್ಕಿ ಹೊಡೆದು, ಪುಂಡಾಟ ನಡೆಸಿದ ಘಟನೆ ನಡೆದಿದೆ.
ಪಿಎಸ್ಐ ಅವರ ಸ್ಕೂಟರ್'ಗೆ ಬುಲೆಟ್ ಗುದ್ದಿಸಿದ ಆರೋಪಿ, ಅವರನ್ನು ಕೆಳಗೆ ಬೀಳಿಸಿ, ಬಟ್ಟೆ ಹಿಡಿದು ಎಳೆದಾಡಿ, ಏಕವನದಲ್ಲಿ ನಿಂದಿಸಿದ್ದಾನೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತನನ್ನು ಮಾಳಗಾಳದ ಪಂಚಶೀಲನಗರದ ಭರತ್ ಎಂದು ಗುರ್ತಿಸಲಾಗಿದೆ.
ಮೂರು ದಿನಗಳ ಹಿಂದೆ ವಿಜಯನಗರದ ಸುಬ್ಬಣ್ಣ ಗಾರ್ಡನ್ ಬಳಿ ಗೋವಿಂದರಾಜನಗರ ಠಾಣೆಯ ಪಿಎಸ್ಐ ಅಶ್ವಿನಿ ಹಿಪ್ಪರಸಿ ಗಸ್ತಿನಲ್ಲಿದ್ದಾಗ ಈ ಘಟನೆ ನಡೆದಿದೆ.
ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಗೋವಿಂದರಾಜನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ವಿರುದ್ಧ ಇದೀಗ ರೌಡಿಶೀಟರ್ ತೆರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.
Advertisement