17 ಅಧಿಕಾರಿಗಳ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ: 35 ಕೋಟಿ ರೂ. ಆಸ್ತಿ ಪತ್ತೆ

ಭ್ರಷ್ಟ ಅಧಿಕಾರಿಗಳ ವಿರುದ್ಧ ತಮ್ಮ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಸೋಮವಾರ ಏಕಕಾಲದಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ 11 ಜಿಲ್ಲೆಯಲ್ಲಿನ 17 ಸರ್ಕಾರಿ ಅಧಿಕಾರಿಗಳ ಕಚೇರಿ ಮತ್ತು ಸಂಬಂಧಿಕರ ನಿವಾಸ ಸೇರಿ 69 ಕಡೆ ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಕೆ.ಬಿ.ಚಂದ್ರಪ್ಪ ಅವರ ನಿವಾಸದಲ್ಲಿ ವಶಪಡಿಸಿಕೊಂಡಿರುವ ನಗದು ಹಾಗೂ ಆಭರಣ.
ಕೆ.ಬಿ.ಚಂದ್ರಪ್ಪ ಅವರ ನಿವಾಸದಲ್ಲಿ ವಶಪಡಿಸಿಕೊಂಡಿರುವ ನಗದು ಹಾಗೂ ಆಭರಣ.

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ತಮ್ಮ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಸೋಮವಾರ ಏಕಕಾಲದಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ 11 ಜಿಲ್ಲೆಯಲ್ಲಿನ 17 ಸರ್ಕಾರಿ ಅಧಿಕಾರಿಗಳ ಕಚೇರಿ ಮತ್ತು ಸಂಬಂಧಿಕರ ನಿವಾಸ ಸೇರಿ 69 ಕಡೆ ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 17 ಸರ್ಕಾರಿ ಅಧಿಕಾರಿಗಳ ಕಚೇರಿ, ನಿವಾಸ ಸೇರಿದಂತೆ 69 ಕ್ಕೂ ಹೆಚ್ಚು ಕಡೆ ಆಯಾ ನ್ಯಾಯಾಂಗ ವ್ಯಾಪ್ತಿಯ ಪೊಲೀಸರ ನೆರವಿನೊಂದಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಉಡುಪಿ, ಹಾಸನ, ಬಳ್ಳಾರಿ, ರಾಯಚೂರು, ಕಲಬುರಗಿ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದು, ತಡರಾತ್ರಿವರೆಗೆ ಈ ತಪಾಸಣೆ ನಡೆಸಿದ್ದಾರೆ. ಈ ವೇಳೆ , ಲಕ್ಷಾಂತರ ರೂ. ನಗದು, ಚಿನ್ನಾಭರಣ ಸೇರಿ 35.54 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಯಾವ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ?

  • ಟಿ.ಎಂ.ಶಶಿಕುಮಾರ್ - ಕಾರ್ಯನಿರ್ವಾಹಕ ಇಂಜಿನಿಯರ್, ಪಟ್ಟಣ ಯೋಜನೆ, ಕೆಐಎಡಿಬಿ, ಬೆಂಗಳೂರು. 2 ಸ್ಥಳಗಳ ಮೇಲೆ ಶೋಧ ಕಾರ್ಯ. 65 ಲಕ್ಷ ರೂ. ಮೌಲ್ಯದ ಚರಾಸ್ತಿ , 6 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 6.66 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.322 ಆಸ್ತಿ ಪತ್ತೆಯಾಗಿದೆ.
  • ಎನ್.ಪಿ. ಬಾಲರಾಜು - ಮುಖ್ಯ ಎಂಜಿನಿಯರ್, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಬೆಂಗಳೂರು 4 ಸ್ಥಳಗಳ ಮೇಲೆ ಶೋಧ ಕಾರ್ಯ. 10 ಲಕ್ಷ ರೂ. ಮೌಲ್ಯದ ಚರಾಸ್ತಿ, 1.12 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 1.12 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.254.08 ಆಸ್ತಿ ಪತ್ತೆಯಾಗಿದೆ.
  • ಎಚ್.ರಾಜೇಶ್ - ಸಹಾಯಕ ಆಯುಕ್ತ ವಾಣಜ್ಯ ತೆರಿಗೆ, ಉಡುಪಿ. ಮೂರು ಸ್ಥಳಗಳಲ್ಲಿ ತಪಾಸಣೆ. 1.10 ಕೋಟಿ ರೂ. ಮೌಲ್ಯದ ಚರಾಸ್ತಿ, 1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 2.10 ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯ. ಶೇ.143.66 ಆದಾಯ ಮೀರಿದ ಆಸ್ತಿ ಗಳಿಕೆ ಪತ್ತೆಯಾಗಿದೆ.
  • ಕೆ.ಬಿ.ಚಂದ್ರಪ್ಪ - ಎಆರ್‌ಒ, ಹೆಗ್ಗನಹಳ್ಳಿ ಉಪ-ವಿಭಾಗ, ದಾಸರಹಳ್ಳಿ ವಲಯ, ಬಿಬಿಎಂಪಿಯ ಮೂರು ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಸಿ, 2.09 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 6.50 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು 2.15 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಶೇ.156.09 ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.
  • ಎಸ್.ಆರ್.ಶ್ರೀನಿವಾಸ್ - ಉಪ ನಿರ್ದೇಶಕ ಬಾಯ್ಲರ್ ಮತ್ತು ಕಾರ್ಖಾನೆ, ದಾವಣಗೆರೆ. 10 ಸ್ಥಳಗಳಲ್ಲಿ ತಪಾಸಣೆ ನಡೆಸಿ. 2.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 59 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು 2.89ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯವಾಗಿದ್ದು, ಶೇ. 290 ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.
  • ಎಂ.ಪಿ.ನಾಗೇಂದ್ರ ನಾಯ್ಕ - ಎಸಿಎಫ್ ಅರಣ್ಯ ಇಲಾಖೆ, ಚಿತ್ರದುರ್ಗ. ಮೂರು ಸ್ಥಳಗಳಲ್ಲಿ ಶೋಧ ನಡೆಸಿ. 51.08 ಲಕ್ಷ ರೂ. ಮೌಲ್ಯದ ಚರಾಸ್ತಿ, 1.37 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು1.88 ಕೋಟಿ ರೂ. ಮೌಲ್ಯದ ಆಸ್ತಿಯ ದಾಖಲೆಗಳು ಲಭ್ಯ. ಶೇ. 201.02 ಆದಾಯಕ್ಕಿಂತ ಹೆಚ್ಚಿನ ಆಸ್ತಿ ಲಭ್ಯವಾಗಿದೆ.
  • ವಿ.ಕೃಷ್ಣಮೂರ್ತಿ - ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ. ಎರಡು ಜಾಗದಲ್ಲಿ ಶೋಧ ನಡೆಸಿ. 24.12 ಲಕ್ಷ ರೂ.ಮೌಲ್ಯದ ಚರಾಸ್ತಿ, 1.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು 1.68 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. ಶೇ. 214.60 ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆ
  • ಎಂ.ನಾಗೇಂದ್ರಪ್ಪ - ಸಹಾಯಕ ಎಂಜಿನಿಯರ್, ಪ್ರೀಡ್ ಉಪವಿಭಾಗ, ಶಿರಾ, ತುಮಕೂರು. ಐದು ಸ್ಥಳಗಳಲ್ಲಿ ತಪಾಸಣೆ. 97.18 ಲಕ್ಷ ರೂ. ಮೌಲ್ಯದ ಚರಾಸ್ತಿ, 1.64ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು 2.61 ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯ. ಶೇ.220 ಆದಾಯ ಮೀರಿ ಆಸ್ತಿ ಪತ್ತೆ.
  • ಶರಣಪ್ಪ ಪಟ್ಟೆದ್ - ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಶಕ್ತಿನಗರ, ರಾಯಚೂರು. ಐದು ಕಡೆ ಶೋಧ.40.21 ಲಕ್ಷ ರೂ. ಮೌಲ್ಯದ ಚರಾಸ್ತಿ, 1.9 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು 2.30 ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯ. ಶೇ.129.6 ಆದಾಯ ಮೀರಿದ ಆಸ್ತಿ ಲಭ್ಯವಾಗಿದೆ.
  • ತಿಪ್ಪಣ್ಣಗೌಡ ಅನ್ನದಾನಿ - ಕಾರ್ಯನಿರ್ವಾಹಕ ಇಂಜಿನಿಯರ್, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕಲಬುರಗಿ. 4 ಸ್ಥಳಗಳ ಮೇಲೆ ಶೋಧ ಕಾರ್ಯ. 92.95 ಲಕ್ಷ ರೂ. ಚರಾಸ್ತಿ, 1.21 ಕೋಟಿ ರೂ. ಸ್ಥಿರಾಸ್ತಿ ಪತ್ತೆ. ಒಟ್ಟು 2.14 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. ಶೇ. 161.7ರಷ್ಟು ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ.
  • ಕೆ.ಮಂಜುನಾಥ - ಕಂದಾಯ ಅಧಿಕಾರಿ, ತಹಶೀಲ್ದಾರ್ ಕಚೇರಿ ಬಳ್ಳಾರಿ. ಮೂರು ಸ್ಥಳಗಳಲ್ಲಿ ತಪಾಸಣೆ ಕಾರ್ಯ.30.79 ಲಕ್ಷ ರೂ.ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಸ್ಥಿರಾಸ್ತಿ ಇನ್ನು ಲೆಕ್ಕ ಹಾಕಲಾಗುತ್ತಿದೆ. ಶೇ. 122.28 ಆದಾಯ ಮೀರಿದ ಆಸ್ತಿ ಗಳಿಕೆ ಪತ್ತೆ.
  • ಬಸವರಾಜ್ - ವಲಯ ಅರಣ್ಯಾಧಿಕಾರಿ, ಬೀದರ್. 4 ಸ್ಥಳಗಳ ಮೇಲೆ ಶೋಧ ಕಾರ್ಯ. 43 ಲಕ್ಷ ರೂ. ಮೌಲ್ಯದ ಚರಾಸ್ತಿ, 2.05 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು 2.48 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.155.8 ಆಸ್ತಿ ಪತ್ತೆಯಾಗಿದೆ.
  • ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ - ಜಂಟಿ ನಿರ್ದೇಶಕರು, ನಗರ ಯೋಜನೆ, ಕಲಬುರಗಿ. 6 ಸ್ಥಳಗಳ ಮೇಲೆ ಶೋಧ ಕಾರ್ಯ. 23 ಲಕ್ಷ ರೂ. ಮೌಲ್ಯದ ಚರಾಸ್ತಿ, 1.54 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು 1.87 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.71.79 ರಷ್ಟು ಆಸ್ತಿ ಪತ್ತೆಯಾಗಿದೆ.
  • ಮಹಾದೇವ - ಎಇಇ, ತಾಲೂಕು ಪಂಚಾಯತ್, ಕಲಬುರಗಿ. 3 ಸ್ಥಳಗಳ ಮೇಲೆ ಶೋಧ ಕಾರ್ಯ. 1.85 ಕೋಟಿ ರೂ. ಮೌಲ್ಯದ ಚರಾಸ್ತಿ, 36 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 2.39 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.60 ಆಸ್ತಿ ಪತ್ತೆಯಾಗಿದೆ.
  • ಎಚ್.ಇ ನಾರಾಯಣ - ಕಿರಿಯ ಇಂಜಿನಿಯರ್, ಕೆಪಿಟಿಸಿಎಲ್, ಗೊರೂರ್, ಹಾಸನ. 2 ಸ್ಥಳಗಳ ಮೇಲೆ ಶೋಧ ಕಾರ್ಯ. 27.81 ಲಕ್ಷ ರೂ. ಮೌಲ್ಯದ ಚರಾಸ್ತಿ, 1.13 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 1.41 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.88.73 ಆಸ್ತಿ ಪತ್ತೆಯಾಗಿದೆ.
  • ಪರಮೇಶಪ್ಪ - ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ. 7 ಸ್ಥಳಗಳ ಮೇಲೆ ಶೋಧ ಕಾರ್ಯ. 27.81 ಲಕ್ಷ ರೂ.ಮೌಲ್ಯದ ಚರಾಸ್ತಿ, 1.13 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 2.32 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.170.22 ಆಸ್ತಿ ಪತ್ತೆಯಾಗಿದೆ.
  • ಮಹಾಂತೇಶ ಸದಾನಂದ - ನ್ಯಾಮತಿ ವಲಯ ಅರಣ್ಯಾಧಿಕಾರಿ, ಹಾವೇರಿ. 3 ಸ್ಥಳಗಳ ಮೇಲೆ ಶೋಧ ಕಾರ್ಯ. 50 ಲಕ್ಷ ರೂ. ಮೌಲ್ಯದ ಚರಾಸ್ತಿ, 1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು 1.50 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.98.75 ಆಸ್ತಿ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com