ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು 112 ದಿನಗಳು ಕಳೆದರೂ ಇನ್ನೂ ವರ್ಗಾವಣೆ ಕುರಿತ ಮನವಿಗಳು ಮಾತ್ರ ನಿಂತಿಲ್ಲ. ವರ್ಗಾವಣೆ ವಿಚಾರವಾಗಿ ಸರ್ಕಾರದ ವಿರುದ್ಧ ಈಗಾಗಲೇ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರೋಪಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ.
ಮುಖ್ಯಮಂತ್ರಿಗಳು ಆಡಳಿತಾತ್ಮಕ ಕಾರಣಗಳಿಗಾಗಿ ಯಾವುದೇ ವರ್ಗಾವಣೆ ಕೋರಿಕೆಗಳನ್ನು ಸ್ವೀಕರಿಸಬಾರದು ಎಂದು ತಮ್ಮ ಸಂಪುಟದ ಸಚಿವರು, ಶಾಸಕರು ಮತ್ತು ಎಂಎಲ್ಸಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಕಳೆದ ಸೆಪ್ಟೆಂಬರ್ 13 ರಂದು ಏಳು ಅಧಿಕಾರಿಗಳು ಮತ್ತು ಮರುದಿನ ಸೆಪ್ಟೆಂಬರ್ 14 ರಂದು ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೆಪಿಎಸ್ಸಿ ಕಾರ್ಯದರ್ಶಿ ಕಿಶೋರ್ ವಿಕಾಸ್ ಸುರಾಳ್ಕರ್ ವರ್ಗಾವಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು.
ಈ ನಡುವೆ ಕಿಶೋರ್ ವಿಕಾಸ್ ಸುರಾಳ್ಕರ್ ಅವರನ್ನು ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಶನಿವಾರ ನಗರದಲ್ಲಿ ಪ್ರತಿಭಟನೆಗಳು ನಡೆದವು.
ಕೆಪಿಎಸ್'ಸಿ ಆಕಾಂಕ್ಷಿಯೊಬ್ಬರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, ಮಾನ್ಯ ಸಚಿವರು, ವಿಕಾಸ್ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು. ವರ್ಗಾವಣೆ ಮಾಡಿರುವುದು ಸರಿಯಲ್ಲ. ವಿಕಾಸ್ ಅವರ ಅಡಿಯಲ್ಲಿ ಕೆಪಿಎಸ್'ಸಿ ಸುಧಾರಣೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮಾಜಿ ಸಚಿವ ಹಾಗೂ ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ಕೆಪಿಎಸ್ಸಿ ಆಕಾಂಕ್ಷಿಗಳು ಆಘಾತಕ್ಕೊಳಗಾಗಿದ್ದಾರೆ. ಕೆಪಿಎಸ್ಸಿಯನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಸ್ಪಂದಿಸುವ ಪ್ರಯತ್ನದಲ್ಲಿ ವಿನೂತನ ಹೆಜ್ಜೆಗಳನ್ನು ಪರಿಚಯಿಸುತ್ತಿದ್ದ ಸುರಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಸರ್ಕಾರವು ಉತ್ತಮ ಅಧಿಕಾರಿಗಳನ್ನು ಯಾವ ರೀತಿಯಲ್ಲಿ ಗುರುತಿಸುತ್ತದೆ ಮತ್ತು ಯಾವ ರೀತಿ ಉತ್ತೇಜಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಮಾತನಾಡಿ, ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರತೀ ಸರ್ಕಾರವೂ ಒತ್ತಡ ಎದುರಿಸುವುದು ಸಹಜ. ಶಾಸಕರು ಅಥವಾ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ವಿವೇಚನೆಯಿಲ್ಲದೆ ವರ್ಗಾವಣೆ ಮಾಡಿದರೆ ಆಡಳಿತ ದುರ್ಬಲವಾಗುತ್ತದೆ ಎಂದು ಹೇಳಿದ್ದಾರೆ.
ಶಿಷ್ಟಾಚಾರದ ಪ್ರಕಾರ, ಕಂದಾಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆಯನ್ನು ಮುಖ್ಯಮಂತ್ರಿ ಮೂಲಕ ಮತ್ತು ಕೆಳ ಹಂತದ ಅಧಿಕಾರಿಗಳ ವರ್ಗಾವಣೆಯನ್ನು ಮಂತ್ರಿಗಳ ಮೂಲಕ ಮಾಡಲಾಗುತ್ತದೆ.
Advertisement