ಅಧಿಕೃತವಾಗಿ ವಾಟ್ಸಾಪ್ ಚಾನಲ್ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ವಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಈ ಮೂಲಕ ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಾಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ.
ಕಳೆದ ವಾರ ವಾಟ್ಸಪ್ ಚಾನೆಲ್ ಎಂಬ ಹೊಸ ಆವಿಷ್ಕಾರವನ್ನು ಮೇಟಾ ಕಂಪನಿ (ವಾಟ್ಸಪ್ ಸಂಸ್ಥೆ) ಪರಿಚಯಿಸಿತು. ಸೆಪ್ಟೆಂಬರ್ 12 ರಂದು ಸಿಎಂ ಸಿದ್ದರಾಮಯ್ಯ ಅವರು ಈ ಚಾನಲ್ ಆರಂಭಿಸಿದರು. ಆ ಬಳಿಕ ನಿರಂತರವಾಗಿ ಸಾರ್ವಜನಿಕರು ಚಾನೆಲ್ ಸೇರ್ಪಡೆಗೊಳ್ಳುತ್ತಿದ್ದು, ಸೆಪ್ಟೆಂಬರ್ 19ಕ್ಕೆ 54,000ಕ್ಕೂ ಅಧಿಕ ಮಂದಿ ಈ ಚಾನೆಲ್ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ https://twitter.com/siddaramaiah ಖಾತೆ ಮೂಲಕ ಟ್ವಿಟರ್ನಲ್ಲಿ, https://www.facebook.com/Siddaramaiah.Official ಖಾತೆ ಮೂಲಕ ಫೇಸ್ಬುಕ್ನಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ಕಛೇರಿ ಸಹ ತನ್ನ ಅಧಿಕೃತ ಖಾತೆ ಮೂಲಕ ಮುಖ್ಯಮಂತ್ರಿಗಳ ಕುರಿತಾದ ಅಪ್ಡೇಟ್ ನೀಡುತ್ತದೆ. ಈಗ ವಾಟ್ಸಪ್ ಚಾನಲ್ ಮೂಲಕ ಸಿದ್ದರಾಮಯ್ಯ ತಮ್ಮ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಜನರನ್ನು ಸುಲಭವಾಗಿ ತಲುಪುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ, ನಿಮ್ಮ ಮೊಬೈಲ್ನ ಒಂದೇ ಕ್ಲಿಕ್ ನಲ್ಲಿ ನಮ್ಮ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯನ್ನು ತಲುಪಿಸುವ ಉದ್ದೇಶದೊಂದಿಗೆ ವಾಟ್ಸ್ಆ್ಯಪ್ ಚಾನಲ್ ಅನ್ನು ಆರಂಭಿಸಿದ್ದೇನೆ. ಈ ಕೆಳಗಿನ ಲಿಂಕ್ ಬಳಸಿ Chief Minister of Karnataka ಚಾನಲ್ ಫಾಲೋ ಮಾಡುವ ಮೂಲಕ ನಮ್ಮೊಂದಿಗೆ ನಿರಂತರ ಸಂಪರ್ಕ ಸಾಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ