ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಆಗ್ರಹಿಸುತ್ತಿರುವ ತಮಿಳುನಾಡು ರಾಜ್ಯದ ಮನವೊಲಿಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ INDIA ಮೈತ್ರಿಕೂಟವನ್ನು ಬಳಕೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಸಿಟಿ ರವಿ ಅವರು, INDIA ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಮೆಚ್ಚಿಸಲು ಕಾಂಗ್ರೆಸ್, ರಾಜ್ಯದ ಜನರ ಹಿತಾಸಕ್ತಿಗಳನ್ನು ತ್ಯಾಗ ಮಾಡಿದೆ. ಮೋದಿ ಹಠಾವೋ ಬದಲಿಗೆ ಕರ್ನಾಟಕ ಬಚಾವೋ ಮಾಡಲು ರಾಜ್ಯ ಸರ್ಕಾರ ಇಂಡಿಯಾ ಮೈತ್ರಿಕೂಟವನ್ನು ಬಳಕೆ ಮಾಡಬಹುದಲ್ಲವೇ? ಬೆಂಗಳೂರಿನ ಪರಿಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬೆಂಗಳೂರು ಬಂದ್ ನಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆಂದು ಹೇಳಿದರು.
ಬಳಿಕ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಮೇಕೆದಾಟು ಯೋಜನೆಗಾಗಿ ಡಿಕೆ.ಶಿವಕುಮಾರ್ ಅವರು ಪಾದಯಾತ್ರೆ ನಡೆಸಿದ್ದರು. ಆದರೆ, ಇದೀಗ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿದ್ದರೂ ಮೌನವಾಗಿದ್ದಾರೆಂದು ಹೇಳಿದರು.
ಈ ನಡುವೆ ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಬಂದ್ ನಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ನಮ್ಮಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುವಂತ ಆದೇಶ ನೀಡಲಾಗಿದೆ. ನಮ್ಮ ಕಾನೂನು ತಂಡ ಸಿಡಬ್ಲ್ಯೂಎಂಎ ಹಾಗೂ ಸುಪ್ರೀಂಕೋರ್ಟ್ ನಲ್ಲಿ ವಾದ ಮಾಡುತ್ತಿದ್ದಾರೆ. ಆದರೆ, ಕಾನೂನು ವ್ಯವಸ್ಥೆ ಯಾವುದರ ಪರವಾಗಿ ಹೋಗುತ್ತಿದೆ ಎಂಬುದನ್ನು ಊಹಿಸಲು ಸಾಧ್ಯವಾಗಲಿಲ್ಲ. ಬಂದ್ ನಡೆಸದಂತೆ ಸಂಘಟನೆಗಳಿಗೆ ಈಗಾಗಲೇ ಮನವಿ ಮಾಡಿದ್ದೇನೆ. ರಾಜ್ಯದ ಹಿತಾಸಕ್ತಿಗಾಗಿ ಪ್ರತಿಭಟನೆ ನಡೆಸಬಹುದು. ಆದರೆ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದಾರೆಂದು ಹೇಳಿದರು.
ರಾಜ್ಯ ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಅವರು ಮಾತನಾಡಿ, ಕರ್ನಾಟಕ ಜಲ ರಕ್ಷಣಾ ಸಮಿತಿಯ ಅಡಿಯಲ್ಲಿ ವಿವಿಧ ಸಂಘಟನೆಗಳ ಒಕ್ಕೂಟವು ಬೆಂಗಳೂರು ಬಂದ್ ನಡೆಸಲಿದೆ ಎಂದು ಹೇಳಿದರು.
ಇದೇ ವೇಳೆ ಬಂದ್ನಿಂದ ಬೆಂಗಳೂರು ವರ್ಚಸ್ಸಿಗೆ ಧಕ್ಕೆಯುಂಟಾಗಲಿದೆ ಹಾನಿಯಾಗಲಿದೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಮತ್ತು ನಗರದ ಹಿತಾಸಕ್ತಿ ಕಾಪಾಡಲು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಬೆಂಗಳೂರು ವರ್ಚಸ್ಸಿಗೆ ಧಕ್ಕೆ ಹೇಗೆ ಆಗುತ್ತದೆ?” ಎಂದು ಪ್ರಶ್ನಿಸಿದರು.
ಐಟಿ ಉದ್ಯೋಗಿ ಶಿವಾನಂದ ಗುಂಡನೂರು ಮಾತನಾಡಿ, ನಗರದಲ್ಲಿ 3,500 ಐಟಿ ಕಂಪನಿಗಳಿದ್ದು, ಬೆಂಗಳೂರಿಗೆ ಹಂಚಿಕೆಯಾಗಿರುವ 15 ಟಿಎಂಸಿ ಅಡಿ ನೀರಿನಲ್ಲಿ ಅರ್ಧದಷ್ಟು ನೀರು ನಮಗೆ ಬೇಕಾಗುತ್ತದೆ. ಬಂದ್'ಗೆ ನಮ್ಮ ಬೆಂಬಲವಿದೆ. ಕಂಪನಿಯ 350 ಜನರು ಬಂದ್ ನಲ್ಲಿ ಭಾಗವಹಿಸುತ್ತಿದ್ದಾರೆಂದು ಹೇಳಿದ್ದಾರೆ.
Advertisement