ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಕೊಠಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡ ಇಬ್ಬರಿಗೆ ಉಸಿರಾಡಲು ಕಷ್ಟವಾದ ಕಾರಣ ನಸಲ್ ಕ್ಯಾತೆಟರ್ಗಳನ್ನು (nasal catheter) ಹಾಕಲಾಗಿದೆ.
ಅಪಘಾತದ ಸಮಯದಲ್ಲಿ ಆಪರೇಟರ್ ಜ್ಯೋತಿ (26) ಮತ್ತು ಮುಖ್ಯ ಎಂಜಿನಿಯರ್ ಶಿವಕುಮಾರ್ (45) ಸೇರಿದಂತೆ ಒಂಬತ್ತು ಮಂದಿ ಬೆಂಜೀನ್ ಹೊಗೆಯನ್ನು ಉಸಿರಾಡಿದ್ದರು.
ಬೆಂಜೀನ್ ಉಸಿರಾಡುವುದರಿಂದ ಶ್ವಾಸಕೋಶದ ಉರಿಯೂತಕ್ಕೆ (ಪಲ್ಮನರಿ ಎಡಿಮಾ) ಕಾರಣವಾಗುತ್ತದೆ. ಇದರಿಂದ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಇಬ್ಬರ ಪರಿಸ್ಥಿತಿ ನಿರ್ಣಾಯಕವಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಡೀನ್-ನಿರ್ದೇಶಕ ಡಾ. ರಮೇಶ್ ಕೃಷ್ಣ ಹೇಳಿದ್ದಾರೆ.
ಎಡಿಮಾ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಇಬ್ಬರು ರೋಗಿಗಳಿಗೆ ನಸಲ್ ಕ್ಯಾತಿಟರ್ಗಳನ್ನು ಅಳವಡಿಸಲಾಗಿದೆ. ಅವರ ಸ್ಥಿತಿ ಹದಗೆಟ್ಟಂತೆ ಕಾಣುತ್ತಿಲ್ಲ ಎಂದು ಅವರು ಹೇಳಿದರು.
ಕಿಡ್ನಿ ಸಮಸ್ಯೆಯಿರುವ ಮತ್ತೋರ್ವ ಗಂಭೀರ ರೋಗಿಯ ಕಿರಣ್ (37) ಅವರನ್ನು ಭಾನುವಾರ ಮತ್ತೆ ಡಯಾಲಿಸಿಸ್ಗೆ ಒಳಪಡಿಸಲಾಗಿದೆ. ಇತರ ಆರು ರೋಗಿಗಳ ಪರಿಸ್ಥಿತಿ ಸ್ಥಿರವಾಗಿದೆ. ಮುಂದಿನ 3-4 ದಿನಗಳವರೆಗೆ ಎಲ್ಲರ ಮೇಲ್ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಬಿಎಂಸಿಆರ್ಐ ಪ್ರಕಟಣೆ ತಿಳಿಸಿದೆ.
ತನಿಖೆಗೆ ಅಧಿಕಾರಿಗಳಿಗೆ ಕಾಲಾವಕಾಶ ನೀಡಬೇಕು: ಬಿಬಿಎಂಪಿ ಮುಖ್ಯಸ್ಥ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಕಿ ಅವಘಡದ ಕುರಿತು ಭಾನುವಾರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 'ತನಿಖೆ ನಡೆಯುತ್ತಿದೆ. ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಕಾಲಾವಕಾಶ ನೀಡಬೇಕು. ವಿಸ್ತೃತ ತನಿಖೆ ಮಾಡದಿದ್ದರೆ, ವರದಿ ಅರ್ಧಂಬರ್ಧ ಆಗುವ ಸಾಧ್ಯತೆಗಳಿವೆ. ಹಾಗಾಗಿ ತನಿಖೆ ನಡೆಸಲು ಸಾಕಷ್ಟು ಕಾಲಾವಕಾಶ ನೀಡಬೇಕು ಎಂದರು.
Advertisement