ಮೈಸೂರು: ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಬಿಡಲು ಸೂಚನೆ ಹಿನ್ನೆಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಮಂಡ್ಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಹರಿಸುವ ಮೂಲಕ ರಾಜ್ಯ ಸರ್ಕಾರ ರೈತರ ಹಿತ ಕಡೆಗಣಿಸಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರ ಕೂಡ ರಾಜ್ಯಕ್ಕೆ ಅನ್ಯಾಯ ಮಾಡಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ ಬೆನ್ನಲ್ಲೇ ಕಾವೇರಿ ನೀರಾವರಿ ನಿಗಮ ಮಂಗಳವಾರ ರಾತ್ರಿಯಿಂದಲೇ ನದಿಗೆ ನೀರು ಹರಿಸುತ್ತಿದೆ. ಬುಧವಾರ ನದಿಗೆ 7,279 ಕ್ಯುಸೆಕ್ ನೀರು ಬಿಟ್ಟಿದ್ದು ತಮಿಳುನಾಡಿಗೆ ಹರಿದು ಹೋಗುತ್ತಿದೆ.
ಮಂಗಳವಾರ ರಾತ್ರಿ 8 ಗಂಟೆಯವರೆಗೂ 2,292 ಕ್ಯುಸೆಕ್ ನೀರು ನದಿಗೆ ಹರಿಯುತ್ತಿತ್ತು, ಬುಧವಾರ ಬೆಳಿಗ್ಗೆ 6 ಗಂಟೆ ವೇಳೆಗೆ 4,398 ಕ್ಯುಸೆಕ್ಗೆ ಏರಿಕೆಯಾಗಿತ್ತು, ರಾತ್ರಿ 8 ಗಂಟೆ ವೇಳೆಗೆ 7,279 ಕ್ಯುಸೆಕ್ಗೆ ಏರಿಸಲಾಗಿದೆ. ಜಲಾಶಯಕ್ಕೆ 2,357 ಕ್ಯುಸೆಕ್ ಒಳಹರಿವು, 7329 ಹೊರಹರಿವು ದಾಖಲಾಗಿದೆ.
Advertisement