ಬೆಂಗಳೂರು/ತುಮಕೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಸ್ವಾಗತಕ್ಕೆ ಎಲ್ಲೆಡೆ ಭರ್ಜರಿ ಸಿದ್ಧತೆಗಳನ್ನು ನಡೆಸಲಾಗಿದೆ. ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿಯವರು ರಾಜ್ಯ ರಾಜಧಾನಿ ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿ ಒಂದೇ ದಿನ 6 ಪ್ರಮುಖ ಯೋಜನಗಳಿಗೆ ಚಾಲನೆ ನೀಡಲಿದ್ದಾರೆ.
ಸೋಮವಾರ ಬೆಳಿಗ್ಗೆ 8.30ಕ್ಕೆ ದೆಹಲಿವಿಮಾನ ನಿಲ್ದಾಣದಿಂದ ವಾಯುಪಡೆ ವಿಶೇಷ ವಿಮಾನದ ಮೂಲಕ ಹೊರಟು ಬೆಳಿಗ್ಗೆ 10.55ರ ವೇಳೆಗೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣ ತಲುಪಲಿರುವ ಮೋದಿಯವರು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೊದಲು ಬೆಂಗಲೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಬೆಳಿಗ್ಗೆ 11.20ಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಆಯೋಜಿಸಿರುವ ಭಾರತ ಇಂಧನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅದೇ ವೇದಿಕೆಯಲ್ಲಿಯೇ ಪೆಟ್ರೋಲ್'ಗೆ ಶೇ.20ರಷ್ಟು ಎತನಾಲ್ ಮಿಶ್ರಣ ಮಾಡಿ ಸಿದ್ಧಪಡಿಸಲಾಗಿರುವ ಇ20 ಪೆಟ್ರೋಲ್ ನ್ನು ದೇಶದ ವಿವಿಧ ರಾಜ್ಯಗಳ 67 ಪೆಟ್ರೋಲ್ ಬಂಕ್ ಗಳಲ್ಲಿ ಪ್ರಾಯೋಗಿಕವಾಗಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಒಮ್ಮೆ ಬಳಸಿ ಬಿಸಾಡುವ ಹಳೆಯ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ತಯಾರಿಸಿದ ಸಮವಸ್ತ್ರ ಅನಾವರಣ ಮಾಡಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕವೇ ತುಮಕೂರಿಗೆ ತೆರಳಲಿದ್ದಾರೆ.
ತುಮಕೂರು ಭೇಟಿ ಬಳಿಕ ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಬಳಿಯ ಬಿದರೆಹಳ್ಳ ಕಾವಲ್ ನಲ್ಲಿ ಹೆಚ್ಎಎಲ್'ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ಮತ್ತೊಂದು ಹೆಜ್ಜೆಯಾಗಿ ಪ್ರಧಾನಿ ಮೋದಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟಿಡ್'ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಈ ಗ್ರೀನ್ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯು 615 ಎಕರೆ ಪ್ರದೇಶದಲ್ಲಿದೆ. ದೇಶದ ಎಲ್ಲಾ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಒಂದೇ ಕಡೆ (ಒನ್ ಸ್ಟಾಪ್) ಪರಿಹಾರ ಒದಗಿಸುವ ದೃಷ್ಟಿಕೋನದಲ್ಲಿ ಯೋಜಿಸಲಾಗಿದೆ. ಇದು ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕವಾಗಿದೆ. ಈ ಕಾರ್ಖಾನೆಯ ಅಡಿಪಾಯವನ್ನು 2016ರಲ್ಲಿ ಪ್ರಧಾನಮಂತ್ರಿಯವರು ಹಾಕಿದ್ದರು. ಈ ಕಾರ್ಖಾನೆಯು ಭಾರತವು ತನ್ನ ಸಂಪೂರ್ಣ ಹೆಲಿಕಾಪ್ಟರ್ ಅಗತ್ಯತೆಗಳನ್ನು ಆಮದು ಮಾಡಿಕೊಳ್ಳದೆಯೇ ಪೂರೈಸಲು ಅನುವು ಮಾಡಿಕೊಡುತ್ತದೆ ಮತ್ತು ಹೆಲಿಕಾಪ್ಟರ್ ವಿನ್ಯಾ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಅಗತ್ಯವಿರುವ ಒತ್ತು ನೀಡುತ್ತದೆ.
ಸುಮಾರು 3 ಸಾವಿರ ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 80-90 ಸಾವಿರ ಜನರು ಸೇರುವ ಸಾಧ್ಯತೆ ಇದೆ. ತುಮಕೂರು ಸೇರಿದಂತೆ ಗುಬ್ಬಿ ತಾಲೂಕಿನಾದ್ಯಂತ ಬಿಜೆಪಿ ಬಾವುಟದ ಅಬ್ಬರ ಜೋಪರಾಗಿದೆ. ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.
ಇಂದು ಮಧ್ಯಾಹ್ನ 3.30ಕ್ಕೆ ಹೆಚ್ಎಎಲ್ ಹೆಲಿಪ್ಯಾಡ್'ಗೆ ಮೋದಿ ಬಂದಿಳಿಯಲಿದ್ದಾರೆ. ಹೆಲಿಕಾಪ್ಟರ್ ಬಳಿಯೇ ಇರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಅದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ಲೋಕಾರ್ಪಣೆ ಕೂಡ ನಡೆಯಲಿದೆ.
4.30ಕ್ಕೆ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಗೃಹ ಸಚಿವ ಹಾಗೂ ತುಮಕೂರು ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಜಿ.ಎಸ್.ಬಸವರಾಜ್, ಹಿರಿಯ ಪೊಲೀಸ್ ಅಧಿಕಾರಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಚ್ಎಎಲ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ನಡುವೆ ತುಮಕೂರು ಭೇಟಿ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಫೆಬ್ರವರಿ 6 ರಂದು ನಾನು ಕರ್ನಾಟಕದಲ್ಲಿ ಇರಲು ಎದುರು ನೋಡುತ್ತಿದ್ದೇನೆ. ಬೆಂಗಳೂರು ತಲುಪಿದ ನಂತರ, ನಾನು ಭಾರತ ಇಂಧನ ಸಪ್ತಾಹ 2023ರಲ್ಲಿ ಭಾಗವಹಿಸುತ್ತೇನೆ. ನಂತರ, ನಾನು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲು ತುಮಕೂರಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವವರು ಮಧ್ಯಾಹ್ನ 1 ಗಂಟೆಯಿಂದ 2.30ರ ಒಳಗೆ ಕಾರ್ಯಕರ್ತರು ವೇದಿಕೆ ಮುಂಭಾಗ ಆಸೀನರಾಗಬೇಕಿದೆ. ಭದ್ರತಾ ದೃಷ್ಟಿಯಿಂದ ನೀರಿನ ಬಾಟಲ್, ಪ್ಲಾಸ್ಟಿಕ್ ಪೇಪರ್, ಊಟದ ಬಾಕ್ಸ್, ಇತರೆ ವಸ್ತುಗಳನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ.
ಸಿಎಂ ಬೊಮ್ಮಾಯಿ, ರಾಜ್ಯಪಾಲರು, ಸಚಿವರು, ಕೇಂದ್ರ ಸಚಿವರು, ಜಿಲ್ಲೆಯ ಶಾಸಕರು ಮುಖಂಡರು ಸೇರಿದಂತೆ ಒಂದೂವರೆ ಸಾವಿರ ವಿವಿಐಪಿಗಳಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಆಗಿದೆ. ಹಾಗೇ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಲಿದ್ದು ಮಾರ್ಗ ಬದಲಾವಣೆಯನ್ನೂ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಿಪಟೂರು ಕಡೆಯಿಂದ ಬರುವವರು ಕೆಬಿ ಕ್ರಾಸ್,ತುರುವೇಕೆರೆ ಟಿಬಿ ಕ್ರಾಸ್ ಹಾಗೂ ನಿಟ್ಟೂರು ಮೂಲಕ ತುಮಕೂರು ಕಡೆ ಹೋಗಬೇಕು.
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬಾರಿ ಬಂದೋಬಸ್ತ್ ಮಾಡಲಾಗಿದ್ದು, ತುಮಕೂರು ಎಸ್.ಪಿ ರಾಹುಲ್ ಕುಮಾರ್ ಸೇರಿದಂತೆ ಒಟ್ಟು 5 ಜನ ಎಸ್.ಪಿಗಳ ನೇತೃತ್ವದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.
Advertisement