ವಿಐಎಸ್ಎಲ್ ಮುಚ್ಚಲು ಬಿಡುವುದಿಲ್ಲ: ಸಿಎಂ ಬೊಮ್ಮಾಯಿ

ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್‌ಎಲ್)ನ್ನು ಮುಚ್ಚಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್‌ಎಲ್)ನ್ನು ಮುಚ್ಚಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ವಿಐಎಸ್‌ಎಲ್‌ ರಾಜ್ಯದ ಪ್ರತಿಷ್ಠಿತ ಮತ್ತು ದಕ್ಷಿಣ ಭಾರತದ ಮೊದಲ ಉಕ್ಕು ಕಾರ್ಖಾನೆ. ಇದನ್ನು ಉಳಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

‘ಭಾರತೀಯ ಉಕ್ಕು ಪ್ರಾಧಿಕಾರ ತಮ್ಮಿಂದ ಇದನ್ನು ನಡೆಸಲು ಸಾಧ್ಯವಿಲ್ಲ ಎಂದು ಬಹಳ ಹಿಂದೆಯೇ ಹೇಳಿ ಬಿಟ್ಟಿದೆ. ಖಾಸಗಿಯವರು ತೆಗೆದುಕೊಳ್ಳಲು ಮುಂದೆ ಬಂದರೆ ಅವಕಾಶ ನೀಡುತ್ತೇವೆ. ಕೆಲವು ಉದ್ಯಮಿಗಳ ಜತೆ ಚರ್ಚಿಸಿದ್ದೇವೆ. ಕೆಲವರು ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದು ಒಮ್ಮೆ ಆರಂಭವಾದರೆ ರಾಜ್ಯ ಮತ್ತು ಕೇಂದ್ರಕ್ಕೆ ತೆರಿಗೆ ಬರುತ್ತದೆ. ನೌಕರರ ಕೆಲಸವೂ ಉಳಿಯುತ್ತದೆ’ ಎಂದು ತಿಳಿಸಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, ವಿಐಎಸ್‌ಎಲ್ ಬಂದ್ ಆಗಲು ಬಿಡಬಾರದು, ಕಾರ್ಖಾನೆ ಮುಚ್ಚದಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಬೊಮ್ಮಾಯಿಯವರು, ವಿಐಎಸ್ಎಲ್ ಕರ್ನಾಟಕದ ಹೆಮ್ಮೆ ಮತ್ತು ದಕ್ಷಿಣ ಭಾರತದ ಮೊದಲ ಉಕ್ಕಿನ ಕಾರ್ಖಾನೆ. "ಇಲ್ಲಿ ಉತ್ಪಾದನೆಯಾಗುವ ಉಕ್ಕಿನ ಗುಣಮಟ್ಟ ಉತ್ತಮವಾಗಿದೆ... ಅದನ್ನು ಪುನರುಜ್ಜೀವನಗೊಳಿಸಲು ಈ ಹಿಂದೆ ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ತಾನು ಕೇಂದ್ರ ಸಚಿವ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com