ಬೆಂಗಳೂರು: ಒನ್ ವೇ ನಲ್ಲಿ ಬಂದು ನಿಂತಿದ್ದ ಬೊಲೆರೋಗೆ ಢಿಕ್ಕಿ ಹೊಡೆದ ದ್ವಿಚಕ್ರವಾಹನ ಸವಾರ ಅದನ್ನು ಪ್ರಶ್ನಿಸಿದ ವೃದ್ಧ ಚಾಲಕನನ್ನು ಕಿಮೀ ಗಟ್ಟಲೆ ಮೃಗೀಯವಾಗಿ ಎಳೆದೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೆಹಲಿಯ ಕಾಂಜಾವಾಲಾ ಯುವತಿ ಹತ್ಯೆ ಘಟನೆ ಹಸಿರಾಗಿರುವಂತೆಯೇ ಅಂತಹುದೇ ಮತ್ತೊಂದು ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದ್ದು, ವೃದ್ದ ಟಾಟಾ ಸುಮೋ ಚಾಲಕನನ್ನು ಬೈಕ್ ಸವಾರನೋರ್ವ ಅಮಾನವೀಯವಾಗಿ ಕಿಮೀ ಗಟ್ಟಲೆ ಎಳೆದೊಯ್ದಿರುವ ಘಟನೆ ಮಂಗಳವಾರ ನಡೆದಿದೆ.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಈ ಕೃತ್ಯ ನಡೆದಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರಗೆ ತೆರಳುತ್ತಿದ್ದ ಬೊಲೆರೋ ಚಾಲಕ 71 ವರ್ಷದ ಮುತ್ತಪ್ಪ ಅವರ ಕಾರಿಗೆ ಹೋಂಡಾ ಆಕ್ಟೀವಾದಲ್ಲಿ ಬಂದ ದ್ವಿಚಕ್ರ ಸವಾರ ಸೊಹೇಲ್ ಎಂಬಾತ ಗುದ್ದಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ದ್ವಿಚಕ್ರ ವಾಹನ ಚಾಲಕ ಸೊಹೇಲ್ ಬೈಕ್ ನಿಂದ ಪರಾರಿಯಾಗಲು ಯತ್ನಿಸಿದ್ದು ವೇಳೆ ಮುತ್ತಪ್ಪ ಅವರು ಆತನ ಗಾಡಿ ಹಿಡಿದುಕೊಂಡಿದ್ದಾರೆ. ಅದನ್ನು ನೋಡಿಯೂ ಕೂಡ ಆತ ಏಕಾಏಕಿ ಗಾಡಿ ಚಲಾಯಿಸಿಕೊಂಡು ಹೋಗಿದ್ದಾನೆ.
ಬೈಕ್ ಓಡಿಸುತ್ತಿದ್ದಂತೆಯೇ ಮುತ್ತಪ್ಪ ಅವರು ಕೆಳಗೆ ಬಿದ್ದಿದ್ದು, ಆದರೂ ಬೈಕ್ ಬಿಟ್ಟಿಲ್ಲ. ಅದಾಗ್ಯೂ ಆತ ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಕಂಡ ದಾರಿಹೋಕರು ಅದನ್ನು ತಮ್ಮ ವಾಹನಗಳಲ್ಲಿದ್ದುಕೊಂಡೇ ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಬಳಿಕ ಆಟೋ ಚಾಲಕ, ಮತ್ತೋರ್ವ ಬೈಕ್ ಸವಾರ ಮತ್ತು ಕ್ಯಾಬ್ ಚಾಲಕರೊಬ್ಬರು ಆತನ ಬೈಕ್ ಅನ್ನು ಬಲವಂತವಾಗಿ ನಿಲ್ಲಿಸಿದ್ದಾರೆ. ಬಳಿಕ ಗುಂಪುಸೇರಿದ ಸ್ಥಳೀಯರು ಮೃಗೀಯ ವರ್ತನೆ ತೋರಿದ ಬೈಕ್ ಚಾಲಕನನ್ನು ಥಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಾಗಡಿರಸ್ತೆ ಟ್ರಾಫಿಕ್ ಪೊಲೀಸರು ಜನರಿಂದ ಆರೋಪಿಯನ್ನು ರಕ್ಷಿಸಿದ್ದು ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂತೆಯೇ ಅಪಘಾತ ಮಾಡಿದ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಂತ್ರಸ್ಥ ಮುತ್ತಪ್ಪ ಅವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement