ಬಿಡಬ್ಲ್ಯೂಎಸ್ ಎಸ್ ಬಿ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ- ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ಬೆಂಗಳೂರನ್ನು ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
"ಬೆಂಗಳೂರು ಅಂದು - ಇಂದು" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಪೂರ್ವಯೋಜಿತ ನಗರವಲ್ಲ. ರಸ್ತೆಗಳು 60-80 ಅಡಿಗಳಿವೆ. 2013ರ ನಂತರ ಈ ರಸ್ತೆಗಳ ಅಗಲೀಕರಣ ಕಷ್ಟವಾಗುತ್ತಿದೆ. ಇದರಿಂದ ಟ್ರಾಫಿಕ್ ಹೆಚ್ಚಿದೆ. ಸಿಡಿಪಿ ಹಾಗೂ ಕಂದಾಯ ವಿಲೀನ ನಂತರ ಬೆಂಗಳೂರಿಗೆ ಹೊಸ ರೂಪ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಶೇ. 32 ರಷ್ಟು ನೀರು ಪೋಲಾಗುತ್ತಿದೆ. 2014ರಲ್ಲಿ ನೀರಿನ ದರ ಪರಿಷ್ಕರಣೆ ಆಗಿದ್ದು ನಂತರ ಆಗಿಲ್ಲ. ಬಿಡಬ್ಲ್ಯೂ ಎಸ್ ಎಸ್ ಬಿ ಅವರಿಗೆ ಸಿಬ್ಬಂದಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗೆ ಅನೇಕ ಆಂತರಿಕ ಸಮಸ್ಯೆಗಳು ಇವೆ. ಬೆಂಗಳೂರನ್ನು ಯಾವುದೇ ಸರ್ಕಾರ ಬೇಳೆಸುತ್ತಿಲ್ಲ. ಇಲ್ಲಿನ ವಾತಾವರಣಕ್ಕೆ ಜನ ವಲಸೆ ಬಂದು ಬೆಳೆಯುತ್ತಿದೆ. ಬೆಂಗಳೂರಿಗೆ ಬರುವ ಜನ ಮತ್ತೆ ವಾಪಸ್ ಹೋಗುವುದಿಲ್ಲ. 30 ಲಕ್ಷ ಇದ್ದ ಜನಸಂಖ್ಯೆ 1.30 ಕೋಟಿ ಆಗಿದೆ. ಕೇವಲ ಶೇ. 40 ರಷ್ಟು ಜನರಿಗೆ ಕುಡಿಯಲು ಕಾವೇರಿ ನೀರು ಪೂರೈಕೆಯಾಗುತ್ತಿದೆ. ಹವಾಮಾನ ನಮಗೆ ಬೆಂಬಲವಾಗಿ ನಿಂತಿದೆ ಎಂದು ಅವರು ವಿವರಿಸಿದರು.
ಬೆಂಗಳೂರಿನ ಪರಿವರ್ತನೆಗೆ ಸಲಹೆ ಕೇಳಿದ್ದು, 70 ಸಾವಿರ ಸಲಹೆ ಬಂದಿವೆ. ಮಕ್ಕಳ ಅಭಿಪ್ರಾಯವನ್ನು ಪಡೆಯಲಿದ್ದೇನೆ. ನಂತರ ಎಷ್ಟು ಸಾಧ್ಯವೋ ಅಷ್ಟು ಸಲಹೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ 8 ಸಾವಿರ ಕೋಟಿ ಮಾತ್ರ ಸಂಪನ್ಮೂಲ ಇದೆ. ಮೆಟ್ರೋ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗೆ ಸಾಲ ಪಡೆಯಲಾಗಿದೆ. ಈ 8 ಸಾವಿರ ಕೋಟಿಯಲ್ಲಿ ಏನೆಲ್ಲಾ ಮಾಡಬಹುದು? ಇದರಲ್ಲಿ ತೆರಿಗೆ ಮೂಲಕ 3 ಸಾವಿರ ಕೋಟಿ ಸಂಗ್ರಹವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಹೆಚ್ಚು ಇಂಜಿನಿಯರ್, ಡಾಕ್ಟರ್, ತಂತ್ರಜ್ಞರು ತಯಾರಾಗುತ್ತಿದ್ದು, ಆದರೂ ನಿರುದ್ಯೋಗ ಪ್ರಮಾಣ ಇದೆ. ಇದಕ್ಕಾಗಿ ಹಳ್ಳಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹಾಗೂ ಎರಡು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಆದ್ಯತೆ ನೀಡಲಾಗುವುದು. ಬೆಂಗಳೂರಿಗೆ ಶಿಕ್ಷಣ ಹಾಗೂ ಉದ್ಯೋಗ ಹುಡುಕಿಕೊಂಡು ಬರುತ್ತಿದ್ದಾರೆ. ಶೇ. 42 ರಷ್ಟು ಜನ ಹೊರ ರಾಜ್ಯದವರು ಇದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಹೊರಗಿನವರು ಬಹುಸಂಖ್ಯಾತರಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಚರ್ಚೆ ಮಾಡಲಾಗುವುದು. ಎಲ್ಲಾ ಸಲಹೆ ಪಡೆದ ನಂತರ ಏನು ಮಾಡಬಹುದು ಎಂದು ಘೋಷಣೆ ಮಾಡುತ್ತೇವೆ. ನಾವು ಓದಿ ಬೆಳೆದ ನಗರ ಇದು. ಇಲ್ಲಿನ ಸಮಸ್ಯೆ ಬಗ್ಗೆ ಅರಿವಿದೆ ಎಂದು ತಿಳಿಸಿದರು.
ಹಂಪ ನಾಗರಾಜಯ್ಯ ಸಲಹೆ: "ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ರಕ್ಷಣೆ ಬಗ್ಗೆ ಸಲಹೆ ಪಡೆಯಲು ಸಮಿತಿ ರಚನೆ ಮಾಡಬೇಕು. ಆ ಸಮಿತಿ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಬೇಕು" ಎಂದು ಡಾ. ಹಂಪ ನಾಗರಾಜಯ್ಯ ಸಲಹೆ ನೀಡಿದರು.
ಬರಹಗಾರರಾದ ರಾ. ನಂ ಚಂದ್ರಶೇಖರ್, ಜೋಗಿ, ಡಾ. ಡಿ.ವಿ ಗುರುಪ್ರಸಾದ್, ನಿತಿನ್ ಷಾ, ದೊಡ್ಡೇಗೌಡ, ವ.ಚ ಚನ್ನೆಗೌಡ, ಶ್ರೀಮತಿ ಸ್ಮಿತಾ ರೆಡ್ಡಿ, ರಾಕೇಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.