Karnataka Cabinet: ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ಗೆ ಹೆಚ್ಚುವರಿ ಖಾತೆ ನೀಡಿದ ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಮ್ಮ ಕ್ಯಾಬಿನೆಟ್ ಸಚಿವರಾದ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಎಂ.ಬಿ.ಪಾಟೀಲ್ (MB Patil) ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ.
Published: 01st June 2023 01:36 AM | Last Updated: 01st June 2023 01:38 AM | A+A A-

ಪ್ರಿಯಾಂಕ್ ಖರ್ಗೆ-ಎಂಬಿ ಪಾಟೀಲ್
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಮ್ಮ ಕ್ಯಾಬಿನೆಟ್ ಸಚಿವರಾದ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಎಂ.ಬಿ.ಪಾಟೀಲ್ (MB Patil) ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ.
ಈ ಕುರಿತು ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಮಾಹಿತಿ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಜೊತೆಗೆ ಹೆಚ್ಚುವರಿಯಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ ಮತ್ತು ಬಿಟಿ) ಖಾತೆ ಹಂಚಿಕೆ ಮಾಡಲಾಗಿದೆ. ಎಂಬಿ ಪಾಟೀಲ್ ಅವರಿಗೆ ಈ ಹಿಂದೆ ಮಂಜೂರು ಮಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಜೊತೆಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಈ ಎರಡೂ ಖಾತೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದವು.
ಇದನ್ನೂ ಓದಿ: ಡಿಕೆ ಸುರೇಶ್ ಜೊತೆಗೆ ಜಟಾಪಟಿ ವಿಚಾರ: ಯಾರಿಂದರೂ ವಾರ್ನಿಂಗ್ ತೆಗೆದುಕೊಳ್ಳುವಷ್ಟು ದುರ್ಬಲ ನಾನಲ್ಲ ಎಂದ ಎಂಬಿ ಪಾಟೀಲ್
ವರದಿಗಳ ಪ್ರಕಾರ, ಖಾತೆ ಹಂಚಿಕೆಯ ಕರಡು ಪಟ್ಟಿಯಲ್ಲಿ ಐಟಿ ಮತ್ತು ಬಿಟಿಯನ್ನು ಖರ್ಗೆ ಅವರಿಗೆ ನೀಡಲಾಗಿತ್ತು. ಆದರೆ ಈ ಖಾತೆಗಾಗಿ ಪಾಟೀಲ್ ಅವರು ಲಾಬಿ ಮಾಡಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಆ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಅವರು ಐಟಿ ಮತ್ತು ಬಿಟಿ ಖಾತೆಯನ್ನು ಪ್ರಿಯಾಂಕ್ ಖರ್ಗೆ ಅವರಿಗೇ ನೀಡಿದ್ದಾರೆ. ಸದ್ಯ ಪಾಟೀಲ್ ಅವರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸಲಹೆಗಾರರಾಗಿ ಸುನೀಲ್ ಕನುಗೋಲು ನೇಮಕ?
ರಾಮಲಿಂಗಾ ರೆಡ್ಡಿ ಮತ್ತು ಕೆ.ಎಚ್.ಮುನಿಯಪ್ಪ ಅವರಂತಹ ಹಲವು ಸಚಿವರು ಖಾತೆ ಹಂಚಿಕೆ ಬಗ್ಗೆ ಅತೃಪ್ತರಾಗಿದ್ದರು. ಆದರೆ ಅವರ ಖಾತೆಗಳಲ್ಲಿ ಮುಖ್ಯಮಂತ್ರಿಗಳು ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಶನಿವಾರ ಕರ್ನಾಟಕ ಸಚಿವ ಸಂಪುಟವನ್ನು ಭರ್ತಿ ಮಾಡಲಾಗಿತ್ತು. ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಅದಾದ ಒಂದು ದಿನದ ನಂತರ ಅವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು.