ಎಲ್ಲೆಲ್ಲೂ ಸಾವು-ನೋವುಗಳೇ ಕಾಣಿಸುತ್ತಿತ್ತು: ಒಡಿಶಾ ರೈಲು ದುರಂತದ ಭೀಕರತೆ ವಿವರಿಸಿದ ಸಚಿವ ಸಂತೋಷ್ ಲಾಡ್

ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಒಡಿಶಾಕ್ಕೆ ತೆರಳಿದ್ದ ಸಚಿವ ಸಂತೋಷ್ ಲಾಡ್ ಅವರು, ಇದೀಗ ರಾಜ್ಯಕ್ಕೆ ವಾಪಸ್ಸಾಗಿದ್ದು, ದುರಂತದ ಭೀಕರತೆಯನ್ನು ವಿವರಿಸಿದ್ದಾರೆ.
ಸಂತೋಷ್ ಲಾಡ್
ಸಂತೋಷ್ ಲಾಡ್

ಬೆಂಗಳೂರು: ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಒಡಿಶಾಕ್ಕೆ ತೆರಳಿದ್ದ ಸಚಿವ ಸಂತೋಷ್ ಲಾಡ್ ಅವರು, ಇದೀಗ ರಾಜ್ಯಕ್ಕೆ ವಾಪಸ್ಸಾಗಿದ್ದು, ದುರಂತದ ಭೀಕರತೆಯನ್ನು ವಿವರಿಸಿದ್ದಾರೆ.

ರಾಜ್ಯದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಗಿ ಸುರಕ್ಷಿತವಾಗಿದೆ ಎಂಬ ಮಾಹಿತಿ ತಿಳಿದು ನಿರಾಳವಾಗಿತ್ತು. ಆದರೆ, ಸುತ್ತಲೂ ಇದ್ದ ಸಾವು-ನೋವುಗಳು ಸಾಕಷ್ಟು ದುಃಖವನ್ನು ತಂದಿತು ಎಂದು ಸಂತೋಷ್ ಲಾಡ್ ಅವರು ಹೇಳಿದ್ದಾರೆ.

ರಾಜ್ಯಕ್ಕೆ ವಾಪಸ್ಸಾದ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಜೊತೆಗೆಮಾತನಾಡಿದ ಅವರು, ಶವಗಳ ಹೆಚ್ಚಾಗಿದ್ದರಿಂದ ಶವಾಗಾರದಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ವಿರೂಪಗೊಂಡ 200ಕ್ಕೂ ಹೆಚ್ಚು ದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಶವಾಗಾರದಲ್ಲಿ ಹೆಚ್ಚು ಮೃತದೇಹಗಳ ಇರಿಸಲು ಐಸ್ ಬಾಕ್ಸ್ (ಕೋಲ್ಡ್ ಸ್ಟೋರೇಜ್) ಸೌಲಭ್ಯಗಳಿರಲಿಲ್ಲ. ಮೃತರ ಕುಟುಂಬಸ್ಥರು ತಮ್ಮವರಿಗಾಗಿ ಗೋಳಾಡುತ್ತಾ ಹುಡುಕಾಡುತ್ತಿದ್ದರು. ಅವರ ನೋವು ನೋಡಲಾಗದೆ ಸ್ವತಃ ನಾನೇ ಶವಾಗಾರದ ಒಳಗೆ ಹೋಗಿದ್ದೆ. ಯಾವುದಾದರೂ ವ್ಯಕ್ತಿಯ ಮೃತದೇಹವನ್ನು ಗುರ್ತಿಸಲಾಗುತ್ತದೆಯೇ ಎಂದು ನೋಡಿದೆ. ಅಲ್ಲಿನ ಪರಿಸ್ಥಿತಿ ವಿವರಿಸಲು ಸಾಧ್ಯವೇ ಇಲ್ಲ. ದುರಂತ ಸಂಭವಿಸಿ 4 ದಿನಗಳಾಗಿತ್ತು. ಮೃತದೇಹಗಳು ಕೊಳೆತ ಸ್ಥಿತಿಗೆ ತಲುಪಿತ್ತು. ಐಸ್ ಕರಗಿ ಸ್ಥಳದಲ್ಲಿ ನೀರು ತುಂಬಿತ್ತು ಎಂದು ಹೇಳಿದ್ದಾರೆ.

ಮೃತದೇಹಗಳನ್ನು ಸೂಕ್ಷ್ಮವಾಗಿ ಹೊರ ತೆಗೆಯಲಾಗಿದೆ ಎಂದು ಹೇಳಲಾಗಿತ್ತು. ಆದರೆ, ರಕ್ಷಣಾ ಕಾರ್ಯಾಚರಣೆ ಉಪಕರಣಗಳ ಕೊರತೆ ಎದುರಾಗಿದ್ದಾಗಿ ತಿಳಿದುಬಂದಿತ್ತು. ರಕ್ಷಣಾ ಕಾರ್ಯಾಚರಣೆಗೆ ಗ್ಯಾಸ್ ಕಟ್ಟರ್ ಗಳ ಬಳಸಬಹುತಿತ್ತು. ಬೋಗಿಗಳಲ್ಲಿ ಸಿಲುಕಿರುವವರ ರಕ್ಷಣೆ ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅಪಘಾತ ಪ್ರದೇಶಗಳಿಗೆ ವಿವಿಐಪಿಗಳು ಭೇಟಿ ನೀಡಬಾರದು ಎಂಬ ನಿಯಮದ ಕುರಿತು ಪ್ರತಿಕ್ರಿಯಿಸಿ, ವಿವಿಐಪಿಗಳು ಅಥವಾ ಪ್ರಧಾನಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಬಾರದು ಎಂಬುದು ನಿಜ. ಏಕೆಂದರೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗುವ ಸಾಧ್ಯತೆಗಳಿಂದ ಅನುಮತಿ ನಿರಾಕರಿಸಲಾಗುತ್ತದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಜಖಂಗೊಂಡಿರುವ ಬೋಗಿಗಳ ಬಳಿ ಹೋಗದಂತೆ ತಿಳಿಸಿದ್ದರು. ಹೀಗಾಗಿ ಆ ಸ್ಥಳದಿಂದ ದೂರ ಉಳಿದಿದ್ದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com