ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಮಹಾಬೋಧಿ ಸುಟ್ಟಗಾಯಗಳ ವಾರ್ಡ್'ನ್ನು ಮೇಲ್ದರ್ಜೆಗೇರಿಸಿರುವುದು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಮಹಾಬೋಧಿ ಸುಟ್ಟಗಾಯಗಳ ವಾರ್ಡ್'ನ್ನು ಮೇಲ್ದರ್ಜೆಗೇರಿಸಿರುವುದು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳ ವಾರ್ಡ್ ಮೇಲ್ದರ್ಜೆಗೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳ ವಾರ್ಡ್'ನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಇನ್ನು ಮುಂದೆ ರೋಗಿಗಳು ಗುಣಮಟ್ಟದ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿದೆ.
Published on

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳ ವಾರ್ಡ್'ನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಇನ್ನು ಮುಂದೆ ರೋಗಿಗಳು ಗುಣಮಟ್ಟದ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋದಿ ಸುಟ್ಟಗಾಯಗಳ ವಾರ್ಡ್‌ ನಲ್ಲಿ 'ಸಿಂಗಲ್ ಬೆಡ್ ಸಿಂಗಲ್ ಪೇಷಂಟ್' ಎಂಬ ಹೊಸ ಉಪಕ್ರಮವನ್ನು ಆರಂಭಿಸಲಾಗಿದ್ದು, ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಉನ್ನತ ಮಟ್ಟದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವ ಸೌಲಭ್ಯಗಲನ್ನು ಒದಗಿಸಲಾಗಿದೆ.

ಈ ಪ್ರತ್ಯೇಕ ವಾರ್ಡ್ ಗಳಲ್ಲಿ ಐಸಿಯುವಿನಲ್ಲಿ ಇರುವಂತಹ ಬೆಡ್ ಗಳನ್ನು ಒದಗಿಸಲಾಗಿದ್ದು, ಈ ಬೆಡ್ ಗಳನ್ನು ರಿಮೋಟ್ ಬಳಸಿ ನಿರ್ವಹಣೆ ಮಾಡಬಹುದಾಗಿದೆ.  

ವಾರ್ಡ್ ಗಳನ್ನು ಮೇಲ್ದರ್ಜೆಗೆ ಏರಿಸಿರುವುದರಿಂದ ಇದು ರೋಗಿಗಳು ಯಾವುದೇ ಹಿಂಜರಿಕೆಯಿಲ್ಲದಂತೆ ಚಿಕಿತ್ಸೆ ಪಡೆದುಕೊಳ್ಳಲು ಸಹಾಯ ಮಾಡುತ್ತವೆ. ರಿಮೋಟ್-ನಿಯಂತ್ರಿತ ಹಾಸಿಗೆಗಳು ರೋಗಿಗಳಿಗೆ ಚಿಕಿತ್ಸೆ ವೇಳೆ ಎದುರಾಗುವ ಅನಾನುಕೂಲತೆಯನ್ನು ನಿಯಂತ್ರಿಸುತ್ತದೆ ಎಂದು ವಾರ್ಡ್'ನ ವೈದ್ಯರು ಹೇಳಿದ್ದಾರೆ.

ಮಹಾಬೋಧಿ ಟ್ರಸ್ಟ್‌ನ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ವಾರ್ಡ್ ಅನ್ನು ಸ್ಥಾಪಿಸಲಾಗಿದ್ದು, ಹೀಗಾಗಿ ಈ ವಾರ್ಡ್'ಗೆ ಮಹಾಬೋಧಿ ಸುಟ್ಟಗಾಯಗಳ ಕೇಂದ್ರ ಎಂದು ಹೆಸರಿಡಲಾಗಿದೆ. ಇದು ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಮೀಸಲಾಗಿರುವ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ.

ಈ ಕೇಂದ್ರದಲ್ಲಿ ಮೂರನೇ ಹಂತದ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವ ಪ್ರಮುಖ ಸೌಲಭ್ಯಗಳನ್ನು ಒದಗಿಸಲಾಗಿದೆ. ಚರ್ಮದ ಬ್ಯಾಂಕ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವುದರಿಂದ ಖಾಸಗಿ ಆಸ್ಪತ್ರೆಗಳು ಕೂಡ ರೋಗಿಗಳನ್ನು ಇಲ್ಲಿಗೆ ಶಿಫಾರಸು ಮಾಡುತ್ತವೆ ಎಂದು ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟಗಾಯಗಳ ಮುಖ್ಯಸ್ಥ ಡಾ.ಕೆ.ಟಿ.ರಮೇಶ್ ಅವರು ಮಾತನಾಡಿ, ಪ್ರತಿ ತಿಂಗಳು ವಾರ್ಡ್'ಗೆ ಸರಾಸರಿ 200 ರೋಗಿಗಳು ಬರುತ್ತಾರೆ. ನಮ್ಮಲ್ಲಿ ವಿಶೇಷ ಆರೈಕೆ ಕೇಂದ್ರ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಮತ್ತು ನೆರೆಯ ರಾಜ್ಯಗಳಿಂದಲೂ ರೋಗಿಗಳನ್ನು ಇಲ್ಲಿಗೆ ಶಿಫಾರಸು ಮಾಡಲಾಗುತ್ತದೆ. ಪ್ರತಿದಿನ ನಮ್ಮಲ್ಲಿ 50ಕ್ಕೂ ಹೆಚ್ಚು ರೋಗಿಗಳು ಡ್ರೆಸ್ಸಿಂಗ್‌ಗಾಗಿ ಬರುತ್ತಾರೆಂದು ಹೇಳಿದ್ದಾರೆ.

"ಸುಟ್ಟ ಗಾಯಗಳಿಗೆ ಒಳಗಾದ ಜನರು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಗುತ್ತದೆ ಏಕೆಂದರೆ ಗಾಯಗಳು ವಾಸಿಯಾಗು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ರೋಗಿಯ ಆರೋಗ್ಯವೂ ಸುಧಾರಿಸುತ್ತದೆ. ಅವರ ವಾಸ್ತವ್ಯದ ಸಮಯದಲ್ಲಿ, ಅವರಿಗೆ ಕ್ರಾಸ್-ಇನ್ಫೆಕ್ಷನ್ ಆಗದಂತೆ, ಯಾವುದೇ ಅನಾನುಕೂಲತೆ ಇಲ್ಲದೆ ಹಾಸಿಗೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ನಾವು ಸುಟ್ಟಗಾಯಗಳ ವಾರ್ಡ್‌ನಲ್ಲಿನ ಹಾಸಿಗೆಗಳನ್ನು ಸರ್ಕಾರ ಮತ್ತು ಸಿಎಸ್‌ಆರ್ ನಿಧಿಯಿಂದ ಮೇಲ್ದರ್ಜೆಗೇರಿಸಿದ್ದೇವೆಂದು ತಿಳಿಸಿದ್ದಾರೆ.

ತೀವ್ರ ನಿಗಾ ಘಟಕದಲ್ಲಿರುವ ಹಾಸಿಗೆಗಳಂತೆಯೂ ಈ ಹಾಸಿಗೆಗಳೂ ಇವೆ. ರೋಗಿಗಳು ಚಲಿಸದೆ, ಹಾಸಿಗೆಯಲ್ಲಿರುವಾಗಲೇ ರಿಮೋಟ್ ಬಳಸಿ ಹಾಸಿಗೆಯನ್ನು ನಿಯಂತ್ರಿಸಬಹುದು. ರೋಗಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಒದಗಿಸಲಾಗಿದ್ದು, 54 ಹಾಸಿಗೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಸೋಂಕಿನ ಸಾಧ್ಯತೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಆಸ್ಪತ್ರೆಯಲ್ಲಿ ತಜ್ಞರಿಂದ ಸಲಹೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ರಮೇಶ್ ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com