ಚಕ್ರ ಸ್ಫೋಟ: ಕುಡಿದ ಆಮಲಿನಲ್ಲಿ ರಿಮ್'ನಲ್ಲೇ ಕಾರು ಚಲಾಯಿಸಿದ ಯುವಕ, ತಪ್ಪಿದ ದುರಂತ
ಕುಡಿದ ಆಮಲಿನಲ್ಲಿದ್ದ ಯುವಕನೋರ್ವ ಅತಿವೇಗದ ಕಾರು ಚಾಲನೆ ಮಾಡಿದ ಪರಿಣಾಮ ಟಯರ್ ಸ್ಫೋಟಗೊಂಡಿದ್ದು, ಆದರೂ ರಿಮ್ ನಲ್ಲೇ ವಾಹನ ಚಲಾಯಿಸಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Published: 26th March 2023 01:11 PM | Last Updated: 26th March 2023 01:11 PM | A+A A-

ಯುವಕ ಚಲಾಯಿಸುತ್ತಿದ್ದ ಕಾರು.
ಬೆಂಗಳೂರು: ಕುಡಿದ ಆಮಲಿನಲ್ಲಿದ್ದ ಯುವಕನೋರ್ವ ಅತಿವೇಗದ ಕಾರು ಚಾಲನೆ ಮಾಡಿದ ಪರಿಣಾಮ ಟಯರ್ ಸ್ಫೋಟಗೊಂಡಿದ್ದು, ಆದರೂ ರಿಮ್ ನಲ್ಲೇ ವಾಹನ ಚಲಾಯಿಸಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದಿರಾನಗರದಿಂದ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಯುವಕನೊಬ್ಬ ಮಧ್ಯ ರಾತ್ರಿ 3 ಗಂಟೆ ಸುಮಾರಿಗೆ ಮನಸೋ ಇಚ್ಚೆ ತನ್ನ ಟಯೋಟಾ ಗ್ಲಾಂಜಾ ಕಾರು ಚಲಾಯಿಸಿದ್ದು, ತೀವ್ರ ವೇಗಕ್ಕೆ ಟಯರ್ ಬ್ಲಾಸ್ಟ್ ಆಗಿದೆ. ಆದರೂ ಸಹ ರಿಮ್ ನಲ್ಲೆ ಕಾರು ಚಲಾಯಿಸಿದ್ದಾನೆ.
ಸುಮಾರು 100-120 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಕಾರನ್ನ ಕಂಡು ಜನ ಭಯಭೀತರಾಗಿದ್ದಾರೆ. ಕಾರಿನ ವೇಗ ನೋಡಿದ ರಾತ್ರಿ ಪಾಳಿ ಪೊಲೀಸರು ಸುಮಾರು 2-3 ಕಿ.ಮೀ ದೂರು ಸಹ ಕಾರನ್ನ ಫಾಲೋ ಮಾಡಿದ್ದಾರೆ. ಕೊನೆಗೆ ಕಾರಿನ ಆಕ್ಸೆಲ್ ಕಟ್ ಆಗಿದ್ದಕ್ಕೆ ಮುನಿಯಪ್ಪ ಸರ್ಕಲ್ ಬಳಿ ಕಾರು ನಿಂತಿದೆ. ಇದನ್ನು ಗಮನಿಸಿದ ಪೊಲೀಸರು ತಕ್ಷಣವೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ.
ಯುವಕನನ್ನು ನಿತಿನ್ ಯಾದವ್ ಎಂದು ಗುರ್ತಿಸಲಾಗಿದ್ದು, ಈತ ಹೆಚ್ಆರ್'ಬಿಆರ್ ಲೇಔಟ್ ನಿವಾಸಿ ಎಂದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿದ್ದ ಯಾದವ್'ಗೆ ಕಾರಿನ ಟಯರ್ ಸ್ಫೋಟಗೊಂಡಿರುವುದು ತಿಳಿದಿಲ್ಲ. ಹೀಗಾಗಿ ರಿಮ್ ನಲ್ಲಿಯೇ ಕಾರು ಚಲಾಯಿಸಿದ್ದಾನೆ. ಕಾರನ್ನು ಸುಮಾರು 120 ಕಿಮೀ ಓಡಿಸಲಾಗಿದ್ದು, ಓವರ್ ಹೀಟ್ ನಿಂದಾಗಿ ಟಯರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವಕನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅದೃಷ್ಟವಶಾತ್ ಯಾರಿಗೂ ಡಿಕ್ಕಿಯನ್ನೂ ಹೊಡಿದಿಲ್ಲ. ರಸ್ತೆ ಖಾಲಿಯಿದ್ದ ಕಾರಣ ವೇಗವಾಗಿ ಚಲಾಯಿಸಿದ್ದಾನೆ. ಟಯರ್ ಸ್ಫೋಟಗೊಂಡ ಬಳಿಕ ಕಾರು ನಿಯಂತ್ರಣಕ್ಕೆ ಬಂದಿಲ್ಲ ಎಂದು ಶಂಕಿಸಲಾಗಿದೆ. 1.5 ಕಿಮೀ ಬಳಿಕ ಕಾರು ನಿಂತುಕೊಂಡಿತು. ಬಳಿಕ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡು ಎಂದು ತಿಳಿಸಿದ್ದಾರೆ.
ಯುವಕನನ್ನು ಬಾಣಸವಾಡಿ ಪೊಲೀಸರ ವಶಕ್ಕೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಕಾರು ಹಾಗೂ ಚಾಲನಾ ಪರವಾನಗಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕುಟುಂಬ ಸದಸ್ಯರನ್ನು ಠಾಣೆಗೆ ಕರೆ, ಮಾತನಾಡಿದ್ದಾರೆ. ಯುವಕನ ವಿರುದ್ಧ ನಿರ್ಲಕ್ಷ್ಯ ಕಾರು ಚಾಲನೆ, ಮದ್ಯಪಾನ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಯುವಕ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.