ಕೆ.ಆರ್.ಪುರಂ ರಾಜಕಾಲುವೆ ಉದ್ದಕ್ಕೂ ತಡೆಗೋಡೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದು!
ಅತಿಕ್ರಮಣ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕೆಆರ್ ಪುರಂನ ಹೊರಮಾವು ಬಳಿಯಿರುವ ರಾಜಕಾಲುವೆ ಉದ್ದಕ್ಕೂ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.
Published: 26th May 2023 01:47 PM | Last Updated: 26th May 2023 01:47 PM | A+A A-

ಕೆಆರ್ ಪುರಂನಲ್ಲಿ ನೆಲಸಮವಾಗುತ್ತಿರುವ ಮನೆಯೊಂದರ ಭಾಗ.
ಬೆಂಗಳೂರು: ಅತಿಕ್ರಮಣ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕೆಆರ್ ಪುರಂನ ಹೊರಮಾವು ಬಳಿಯಿರುವ ರಾಜಕಾಲುವೆ ಉದ್ದಕ್ಕೂ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಹೊರಮಾವು ಕೆರೆಗೆ ಒಳಚರಂಡಿ ಸಂಪರ್ಕವನ್ನು ಕಲ್ಪಿಸಲಾಗುತ್ತಿದ್ದು, ಇದರಿಂದಾಗಿ ಒತ್ತುವರಿ ತೆರವು ಕಾರ್ಯಾಚರಮೆ ಪೂರ್ಣಗೊಂಡ ಬಳಿಕ ಹೊಯ್ಸಳನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ವರ್ಷದಂತೆ ಪ್ರವಾಹ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯನಿರ್ವಾಹಕ ಇಂಜಿನಿಯರ್ (ಕೆಆರ್ ಪುರಂ) ಸೈಯದ್ ರೆಹಮಾನ್ ಅವರು ಮಾತನಾಡಿ, ಮಳೆಯ ಸಂದರ್ಭದಲ್ಲಿ ಸ್ಥಳದಲ್ಲಿ ಪ್ರವಾಹ ಪರಿಸ್ಥಿತಿಗಳು ಎದುರಾಗದಂತೆ ಮಾಡಲು ಶೀಘ್ರಗತಿಯಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಒತ್ತುವರಿ ವೇಳೆ ಗೊಂದಲಗಳು ಸೃಷ್ಟಿಯಾಗದಂತೆ ಮಾಡಲು ಕಂದಾಯ ಇಲಾಖೆಯ ನಕ್ಷೆಯಂತೆಯೇ ಭೂಮಾಪಕರ ಮೂಲಕ ಗುರುತು ಮಾಡಲಾಗಿದೆ. ಈ ಗುರುತುಗಳ ಅನ್ವಯವೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಯಾವುದೇ ಅತಿಕ್ರಮಣಗಳ ತಡೆಯಲು ರಾಜಕಾಲುವೆ ಉದ್ದಕ್ಕೂ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೆಆರ್ ಪುರಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್ ಮಾತನಾಡಿ, ಈ ಕಾರ್ಯಾಚರಣೆಯಲ್ಲಿ ನಮ್ಮದೇನೂ ಪಾತ್ರವಿಲ್ಲ. ಗುರುತುಗಳನ್ನು ಭೂಮಾಪಕರು ಮಾಡಿದ್ದಾರೆ. ಇನ್ನು ತಡೆಗೋಡೆ ನಿರ್ಧಾನವನ್ನು ಇಲಾಖೆ ಕೈಗೊಂಡಿದೆ ಎಂದು ಹೇಳಿದ್ದಾರೆ.