ಬೆಂಗಳೂರು: ನಗರದ ಕೆ.ಆರ್ ಸರ್ಕರ್ ನಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮಾಡಲು ಚಂರಡಿಗಳ ದುರಸ್ತಿ, ಸ್ವಚ್ಛತೆ ಹಾಗೂ ಸಂಪರ್ಕ ಸುಧಾರಿಸುವ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಡರ್ ಪಾಸ್ ಮುಚ್ಚಲು ಸಂಚಾರಿ ಪೊಲೀಸರ ನೆರವು ಪಡೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಸಂಚಾರ ದಟ್ಟಣೆ ಎದುರಾಗುವುದರಿಂದ ಕಾಮಗಾರಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಹೀಗಾಗಿ ನೃಪತುಂಗ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಆರ್ ಸರ್ಕಲ್ ಅಂಡರ್ಪಾಸ್ ಅನ್ನು ಕನಿಷ್ಠ 15 ದಿನಗಳ ಕಾಲ ಮುಚ್ಚುವಂತೆ ಸಂಚಾರ ಪೊಲೀಸ್ ಇಲಾಖೆಗೆ ಪತ್ರ ಬರೆಯಲು ಬಿಬಿಎಂಪಿ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನೀರು ಮುಕ್ತವಾಗಿ ಹರಿಯುವಂತೆ ಮಾಡಲು ಚಾನಲ್ಗಳನ್ನು ತೆರವುಗೊಳಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಆದರೆ ಸಂಚಾರ ದಟ್ಟಣೆಯಿಂದಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಕನಿಷ್ಠ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಅಂಡರ್ ಪಾಸ್ ಮುಚ್ಚಲು ಟ್ರಾಫಿಕ್ ಪೊಲೀಸರಿಗೆ ಮನವಿ ಮಾಡಲಾಗುವುದು. ಇದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಬಹುದು. ಮೇ 21 ರಂದು ಕೆಆರ್ ಸರ್ಕಲ್ನಲ್ಲಿ ಸಂಭವಿಸಿದ ದುರಂತದಂತೆ ಮತ್ತಾವುದೇ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲಾಗುತ್ತಿದೆ. ದುರ್ಬಲಗೊಂಡಿರುವ ಅಂಡರ್ ಪಾಸ್ ಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕಾಮಗಾರಿಗಳು ಬೇಸಿಗೆ ಮತ್ತು ಮುಂಗಾರು ಪೂರ್ವ ಅವಧಿಯಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ ಚುನಾವಣೆಯ ಕಾರಣ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಈ ಕಾಮಗಾರಿಗಳಿಗೆ ಗುತ್ತಿಗೆದಾರರಿಂದ ವರದಿಯನ್ನು ಕೂಡ ಪಡೆಯುತ್ತಿದ್ದೇವೆ. ಬಿಲ್ಗಳಲ್ಲಿ ಕಾಮಗಾರಿ ನಡೆದಿದೆ ಎಂದು ತೋರಿಸಿದರೂ ಪ್ರವಾಹ ಪರಿಸ್ಥಿತಿ ಎದುರಾದ ನಂತರವೇ ಕಾಮಗಾರಿಗಳಾಗಿಲ್ಲ ಎಂಬುದು ಬೆಳಕಿಗೆ ಬರುತ್ತದೆ. ನೀರಿನ ಚಾನಲ್ಗಳ ಸಂಪರ್ಕವನ್ನು ಮುಂಚಿತವಾಗಿ ಪರಿಶೀಲಿಸಿದ್ದರೆ, ಪ್ರವಾಹ ಪರಿಸ್ಥಿತಿಗಳು ಉದ್ಭವಿಸುತ್ತಿರಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆಂದು ಹೇಳಿದ್ದಾರೆ.
Advertisement