ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಬೆಂಗಳೂರಿನಲ್ಲಿ!; ಕರ್ನಾಟಕದಲ್ಲಿ ಎಎಪಿಗೆ ಉತ್ತಮ ಭವಿಷ್ಯವಿದೆ: ದಿಲೀಪ್ ಪಾಂಡೆ

ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಕ್ಷ ಆಮ್ ಆದ್ಮಿ ಪಕ್ಷ, ಕಳೆದ 10 ವರ್ಷದಿಂದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ, ವಿಫಲವಾಗಿದೆ. ಅಲ್ಲಿನ ಜನ ಅರವಿಂದ್ ಕೇಜ್ರಿವಾಲ್ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು  ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ ಹೇಳಿದರು. 
ಎಎಪಿ ಕರ್ನಾಟಕ ಉಸ್ತುವಾರಿ ದಿಲೀಪ್ ಕುಮಾರ್ ಪಾಂಡೆ
ಎಎಪಿ ಕರ್ನಾಟಕ ಉಸ್ತುವಾರಿ ದಿಲೀಪ್ ಕುಮಾರ್ ಪಾಂಡೆ
Updated on

ಬೆಂಗಳೂರು: ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಕ್ಷ ಆಮ್ ಆದ್ಮಿ ಪಕ್ಷ, ಕಳೆದ 10 ವರ್ಷದಿಂದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ, ವಿಫಲವಾಗಿದೆ. ಅಲ್ಲಿನ ಜನ ಅರವಿಂದ್ ಕೇಜ್ರಿವಾಲ್ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು  ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ ಹೇಳಿದರು. 

ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಯನಗರದ ಎಂಇಎಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲಾ ಬಲವನ್ನು ಬಳಸಿದರೂ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಸಾಧ್ಯವಾಗಿಗಿಲ್ಲ ಎಂದರು. 

ಜನರ ಜೀವನ ಸುಧಾರಿಸಲು ಆಮ್ ಆದ್ಮಿ ಪಕ್ಷ ಕೆಲಸ ಮಾಡಿದೆ. ವಿದ್ಯುತ್, ಆರೋಗ್ಯ, ಸಾರಿಗೆ, ಶಿಕ್ಷಣದ ಬಗ್ಗೆ ನೀಡಿದ್ಧ ಭರವಸೆಗಳನ್ನು ಈಡೇರಿಸಲಾಗಿದೆ. ಕರ್ನಾಟಕದಲ್ಲಿ ಕೂಡ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. 

ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಬೆಂಗಳೂರಿನಲ್ಲಿ!

ಇದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆಲ್ಲ ಹುಟ್ಟು ಹಬ್ಬದ ದಿನವಾಗಿದೆ. 11 ವರ್ಷದಲ್ಲೇ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಕಾರಣ. ಮೊದಲ ಚುನಾವಣೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿ ಮಗಳಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ. ಜನ ಸಾಮಾನ್ಯರ ನೋವು, ಸಾಮಾನ್ಯರಿಗೆ ಮಾತ್ರ ಅರ್ಥ ಆಗುತ್ತದೆ ಎಂದು ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಹೇಳಿದರು. 

ಕರ್ನಾಟಕದಲ್ಲಿ ಹಣ, ಧರ್ಮ ಇಲ್ಲದೆ ರಾಜಕೀಯ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ, ನಾವಿಲ್ಲಿ ರಾಜಕೀಯ ಮಾಡಲು ಬಂದಿಲ್ಲ, ಬದಲಿಗೆ ಬದಲಾವಣೆ ಮಾಡಲು ಬಂದಿದ್ದೇವೆ. ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಬೆಂಗಳೂರಿನಲ್ಲೇ, ಅಂದು ಬೆಂಗಳೂರಿನ ಜಿಂದಾಲ್‌ ನೇಚರ್ ಕೇರ್‌ನಲ್ಲಿ ಪಕ್ಷ ಕಟ್ಟುವ ಬಗ್ಗೆ ಅರವಿಂದ್ ಕೇಜ್ರಿವಾಲ್, ಜಸ್ಟಿಸ್ ಹೆಗಡೆಯವರು ಚರ್ಚೆ ಮಾಡಿದ್ದರು. ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಬೆಂಗಳೂರಿನಲ್ಲಿ ಎಂದರು. 

ಕರ್ನಾಟಕದಲ್ಲಿ ಒಂದು ಸ್ಥಾನವನ್ನು ಗೆಲ್ಲದಿದ್ದರೂ ಜನ ಸಾಮಾನ್ಯರಿಗೆ ತೊಂದರೆಯಾದಾಗ ದನಿ ಎತ್ತಿದ್ದು ಆಮ್ ಆದ್ಮಿ ಪಕ್ಷ, ರಾಜ್ಯದಲ್ಲಿ ಶಾಲೆಗಳು, ಆಸ್ಪತ್ರೆಗಳ ಪರಿಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಬದಲಾವಣೆ ತರಲು ಕೆಲಸ ಆರಂಭವಾಗಿದೆ ಎಂದರು.

ಕನ್ನಡ ಕೂಡ ರಾಷ್ಟ್ರಭಾಷೆ

ಆಮ್ ಆದ್ಮಿ ಪಕ್ಷ ಇಡೀ ದೇಶವನ್ನು ಆವರಿಸಿಕೊಳ್ಳಲಿದೆ. ದೇಶದಲ್ಲಿ ಏಕವ್ಯಕ್ತಿ ಸರ್ಕಾರವನ್ನು ನೋಡಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭದ್ರವಾದ ತಳಪಾಯ ಹಾಕಲಾಗಿದೆ. ನಾವು ಮುನ್ನುಗ್ಗಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. 

ಭಾಷೆ ಎಂದರೆ ಅದು ಬದುಕು, ಕನ್ನಡ ಕೂಡ ರಾಷ್ಟ್ರಭಾಷೆಗಳಲ್ಲಿ ಒಂದು. ಆದರೆ, ಹಿಂದಿ ಒಂದನ್ನೇ ರಾಷ್ಟ್ರಭಾಷೆ ಎಂದು ಹೇಳಲಾಗುತ್ತಿರುವುದು ತಪ್ಪು. ಇಡೀ ಪ್ರಪಂಚದಲ್ಲಿ ಭಾಷೆಯ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರುವುದು ಕರ್ನಾಟಕ ಮಾತ್ರ. ನಮ್ಮ ರಾಜ್ಯದ ಸುತ್ತ ಗಡಿಯನ್ನು ಹಂಚಿಕೊಂಡಿರುವ 5 ಭಾಷಿಕರ ಹಾವಳಿಯಿಂದ ಕನ್ನಡಿಗರು ಪರಿತಪಿಸುತ್ತಿದ್ದಾರೆ. ಯಾವ ಭಾಷೆಯನ್ನು ದ್ವೇಷ ಮಾಡುವಂತಿಲ್ಲ. ಆದರೆ, ಸಂವಿಧಾನದಲ್ಲಿ ಕನ್ನಡವನ್ನು ಒಪ್ಪಿಕೊಳ್ಳಲಾಗಿದೆ. ರಾಜ್ಯದಲ್ಲಿ ಕನ್ನಡ ಅನ್ನ ಹಾಗೂ ವ್ಯಾವಹಾರಿಕ ಭಾಷೆಯಾಗಬೇಕಿತ್ತು ಆದರೆ ಅದು ಆಗಿಲ್ಲ. ಶಿಕ್ಷಣ, ಆರೋಗ್ಯ, ಉದ್ಯೋಗದಲ್ಲಿ ಕನ್ನಡ ಇರಬೇಕು ಎಂದು ಒತ್ತಾಯಿಸಿದರು. 

ಸಂವಿಧಾನ ದಿನಾಚರಣೆ ದಿನದಂದೇ ಎಎಪಿ ರಚನೆ

ಸಂವಿಧಾನ ದಿನಾಚರಣೆಯಂದೇ ಆಮ್ ಆದ್ಮಿ ಪಕ್ಷ ರಚನೆಯಾಗಿದೆ. ಇಲ್ಲಿಗೆ ಜನರನ್ನು ಕರೆದುಕೊಂಡು ಬಂದಿಲ್ಲ. ಅವರೇ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಬಂದಿದ್ದಾರೆ. ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಸಂವಿಧಾನ ಅಸ್ತ್ರವಾಗಿದೆ. ಎಲ್ಲಾ ಜಾತಿ ವರ್ಗಗಳಿಗೆ ಕೆಲಸ ಸಿಕ್ಕಿದೆ ಅಂದರೆ ಅದಕ್ಕೆ ಸಂವಿಧಾನ ಕಾರಣ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು. 

ರಾಜ್ಯದಲ್ಲಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಈ ವರದಿಯಿಂದ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಲಿದೆ. ವರದಿಯನ್ನು ಮೊದಲು ಸ್ವೀಕರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ 26/11 ಮುಂಬೈ ದಾಳಿಯಲ್ಲಿ ಮಡಿದ ಸೈನಿಕರು ಮತ್ತು ನಾಗರಿಕರ ಗೌರವ ಸಲ್ಲಿಸಲು ಮೌನಾಚರಣೆ ಮಾಡಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಆಮ್ ಆದ್ಮಿ ಪಕ್ಷ 11 ವರ್ಷಗಳ ಸಾಧನೆಗಳ ವಿಡಿಯೋ ಪ್ರಸಾರ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com