ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ತಲೆದೋರಿದ್ದು, ನೀರಿನ ಬಿಕ್ಕಟ್ಟು ನಡುವಲ್ಲೇ ಬಾಳೆ ಎಲೆ ಹಾಗೂ ಪೇಪರ್ ಪ್ಲೇಟ್ ಗಳ ಬೆಲೆ ಗಗನಕ್ಕೇರಿವೆ.
ನೀರಿನ ಅಭಾವ ಹಿನ್ನೆಲೆಯಲ್ಲಿ ಜನರು ಬಾಳೆಎಲೆ ಹಾಗೂ ಪೇಪರ್ ಪ್ಲೇಟ್ ಗಳ ಬಳಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಹೀಗಾಗಿ ಮಾರಾಟಗಾರರೂ ಇವುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಮಲ್ಲೇಶ್ವರಂ ಮಾರಾಟಗಾರರು ಮಾರಾಟದ ಬೆಲೆಯನ್ನು ಶೇ.30ರಷ್ಟು ಹೆಚ್ಚಳ ಮಾಡಿದ್ದಾರೆ.
ಮಲ್ಲೇಶ್ವರಂನ 10ನೇ ಕ್ರಾಸ್ನಲ್ಲಿ ವ್ಯಾಪಾರ ನಡೆಸುತ್ತಿರುವ ನೀಲಮ್ಮ ಎಂಬುವವರು ಮಾತನಾಡಿ, ಹಲವು ವರ್ಷಗಳಿಂದಲೂ ಇಷ್ಟು ಮಟ್ಟದ ವ್ಯಾಪಾರವನ್ನು ನೋಡಿರಲಿಲ್ಲ. ಓಣಂ ಸಂದರ್ಭದಲ್ಲಿ ಉತ್ತಮ ವ್ಯಾಪಾರವಾಗಿತ್ತು. ಆಗ ಒಂಗು ಬಾಳೆಎಲೆಯನ್ನು ರೂ.6-8ರವರೆಗೆ ಮಾರಾಟ ಮಾಡಲಾಗಿತ್ತು. ಈದೀಗ ಮತ್ತೆ ಬೆಲೆ ಏರಿಕೆಯಾಗಿದೆ. ಪ್ರತೀ ಎಲೆಯನ್ನು ರೂ.9-13ಕ್ಕೆ ಮಾರಾಟ ಮಾಡಲಾಗುತ್ತಿದೆ. 6 ಎಲೆಯನ್ನು ರೂ.70ಕ್ಕೆ ಮಾರಾಟ ಮಾಡುತ್ತಿದ್ದೇವೆಂದು ಹೇಳಿದ್ದಾರೆ.
ಕಳೆದ 6 ತಿಂಗಳಿನಿಂದ ಮಾರಾಟ ಸೀಮಿತವಾಗಿತ್ತು. ಹಬ್ಬದ, ಮದುವೆ, ಸಮಾರಂಭಗಳ ಸಮಯದಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿತ್ತು. ಆದರೆ, ಇದೀಗ ಜನರು ಪ್ರತಿನಿತ್ಯ ಊಟ ಮಾಡಲು ಎಲೆ ಬಳಕೆಗೆ ಮುಂದಾಗಿದ್ದಾರೆ. ಇದರಿಂದ ಬೆಲೆ ಮತ್ತೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಮಲ್ಲೇಶ್ವರಂನ 16ನೇ ಕ್ರಾಸ್ನಲ್ಲಿ ಬಾಳೆ ಎಲೆಗಳನ್ನು ಮಾರಾಟ ಮಾಡುವ ಮಾರಾಟಗಾರ ಕರುಪಸ್ವಾಮಿ ಎಂಬುವವರು ಮಾತನಾಡಿ, ಫೆಬ್ರವರಿ ತಿಂಗಳಿನಿಂದ ಅಡಿಕೆ ಪ್ಲೇಟ್, ಬಾಳೆಎಲೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯ ಹೊರತಾಗಿಯೂ, ಗ್ರಾಹಕರು ಖರೀದಿಸಲು ಸಿದ್ಧರಿದ್ದಾರೆಂದು ಹೇಳಿದ್ದಾರೆ.
ಗ್ರಾಹಕರಾಗಿರುವ ಶೇಖರ್ ಎಂಬುವವರು ಮಾತನಾಡಿ, ನಮ್ಮ ಕುಟುಂಬದವರು ಸಮಾರಂಭಗಳಲ್ಲಿ ಮಾತ್ರ ಬಾಳೆ ಎಲೆಗಳನ್ನು ಬಳಸುತ್ತಿದ್ದರು ಆದರೆ, ನೀರಿನ ಕೊರತೆಯಿಂದಾಗಿ ಪೇಪರ್ ಪ್ಲೇಟ್ಗಳನ್ನು ಬಳಕೆ ಮಾಡುವಂತಾಗಿದೆ ಎಂದು ಹೇಳಿದ್ದಾರೆ.
ಮಲ್ಲೇಶ್ವರಂ ಮತ್ತು ರಾಜಾಜಿನಗರದ ಸುತ್ತಮುತ್ತಲಿನ ಪ್ರದೇಶಗಳು ನೀರಿನ ಟ್ಯಾಂಕರ್ಗಳ ಮೇಲೆ ಹೆಚ್ಚಿನ ಅವಲಂಬನೆಯಾಗಿದೆ. ಇದರಿಂದ ಅನೇಕ ಕುಟುಂಬಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ಎಲೆಗಳನ್ನು ಬಳಕೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
Advertisement