ಬೆಂಗಳೂರು: ಹಾಕಿರುವ ಬಟ್ಟೆಯನ್ನು ನೋಡಿ ವ್ಯಕ್ತಿಯೋರ್ವನಿಗೆ BMRCL ಪ್ರವೇಶವನ್ನು ನಿರಾಕಸಿದೆ ಎಂಬ ಸುದ್ದಿ ವೈರಲ್ ಆಗತೊಡಗಿದೆ. ವ್ಯಕ್ತಿಯೋರ್ವ ಶರ್ಟ್ ಬಟನ್ ಹಾಕದೇ ಇದ್ದ ಕಾರಣ ಆತನನ್ನು ಮೆಟ್ರೋ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಎಂದು ಮಂಗಳವಾರ ವರದಿ ಪ್ರಕಟವಾಗಿತ್ತು.
ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿಗೆ ಶರ್ಟ್ ಬಟನ್ ಹಾಕಿ ಶುಭ್ರವಾಗಿ ಬರಬೇಕು ಇಲ್ಲದೇ ಇದ್ದಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಮೆಟ್ರೋ ಸಿಬ್ಬಂದಿಗಳು ಹೇಳಿದ್ದರು. ಈ ಮಧ್ಯೆ ಸಹ ಪ್ರಯಾಣಿಕರೊಬ್ಬರು ಮಧ್ಯಪ್ರವೇಶಿಸಿದ್ದಾರೆ. ಮತ್ತೋರ್ವ ಪ್ರಯಾಣಿಕ ಈ ಘಟನೆಯನ್ನು ವೀಡಿಯೋ ಮಾಡಿಕೊಂಡಿದ್ದಾರೆ.
ನನ್ನ ಕಣ್ಣೆದುರು ಮೆಟ್ರೋ ನಿಲ್ದಾಣದಲ್ಲಿ ದಿರಿಸಿಗೆ ಸಂಬಂಧಿಸಿದ ಮತ್ತೊಂದು ಘಟನೆ ನಡೆದಿದೆ. ಕಾರ್ಮಿಕನೋರ್ವನನ್ನು ತಡೆದು ಕಿತ್ತುಹೋಗಿದ್ದ ಆತನ ಶರ್ಟ್ ನ ಎರಡು ಬಟನ್ ಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಯಿತು. ನಮ್ಮ ಮೆಟ್ರೋ ಯಾವಗ ಹೀಗಾಯಿತು? ಎಂದು ಪ್ರಶ್ನಿಸಿದ್ದು ಬಿಎಂಆರ್ ಸಿಎಲ್ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ ಸಿಎಲ್ ಎಲ್ಲಾ ಪ್ರಯಾಣಿಕರನ್ನೂ ಒಂದೇ ರೀತಿ ನಡೆಸಿಕೊಳ್ಳುವುದಾಗಿ ಹೇಳಿದೆ. ಪ್ರಯಾಣಿಕ ಬಡವ, ಶ್ರೀಮಂತ, ಪುರುಷ- ಸ್ತ್ರೀ ಎಂಬ ಆಧಾರದಲ್ಲಿ ತಾರತಮ್ಯ ಮಾಡಿಲ್ಲ.
ತಪಾಸಣೆ ವೇಳೆ ಪ್ರಯಾಣಿಕ ಅಮಲೇರಿದ ಸ್ಥಿತಿಯಲ್ಲಿದ್ದಾರೆ ಎಂದು ಸಿಬ್ಬಂದಿ ಶಂಕಿಸಿದ್ದಾರೆ ಮತ್ತು ವ್ಯಕ್ತಿ ಮದ್ಯಪಾನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ. ಮೆಟ್ರೋದಲ್ಲಿ ಪ್ರಯಾಣಿಸುವಾಗ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಆತನನ್ನು ತಡೆಯಲಾಗಿತ್ತು. ಕೌನ್ಸೆಲಿಂಗ್ ಬಳಿಕ ಪ್ರಯಾಣಕ್ಕೆ ಅವಕಾಶ ನೀಡಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಈ ಹಿಂದೆ, ಬಿಎಂಆರ್ಸಿಎಲ್ ಸಿಬ್ಬಂದಿ ರೈತನಿಗೆ ಮೆಟ್ರೋ ಪ್ರವೇಶಕ್ಕೆ ಅವಕಾಶ ನೀಡದ ಬಗ್ಗೆ ಸಾರ್ವಜನಿಕರ ಆಕ್ರೋಶದ ನಂತರ ಬೆಂಗಳೂರು ಮೆಟ್ರೋ ರೈಲು ನಿಗಮವು ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಿತ್ತು.
Advertisement