ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಯಾವುದೇ ಮೂಲಸೌಕರ್ಯ ಶುಲ್ಕವನ್ನು ವಿಧಿಸದೆ ಬಡಾವಣೆಗಳಿಗೆ ಕಾವೇರಿ ನೀರು ಸಂಪರ್ಕವನ್ನು ನೀಡಿದೆ. ಆದರೆ, ಜೆಪಿ ನಗರದ 8ನೇ ಹಂತದ ರಾಯಲ್ ಲೇಕ್ಫ್ರಂಟ್ ನಿವಾಸಿಗಳಿಗೆ (ಆರ್ಎಲ್ಎಫ್) ನೀರಿನ ಸಂಪರ್ಕ ಕಲ್ಪಿಸಲು ಬಿಡಬ್ಲ್ಯುಎಸ್ಎಸ್ಬಿ 2.3 ಕೋಟಿ ರೂ. ಬೇಡಿಕೆಯಿಟ್ಟಿದೆ. ಹೀಗಾಗಿ ಅಪಾರ್ಟ್ಮೆಂಟ್ ನಿವಾಸಿಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.
ಏಪ್ರಿಲ್ 10ರಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ರಾಯಲ್ ಲೇಕ್ಫ್ರಂಟ್ ರೆಸಿಡೆನ್ಸಿ ನಿವಾಸಿಗಳು ಮತ್ತು ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದು, ಜಲಮಂಡಳಿಯ ನಿರಾಸಕ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
'BWSSB ರಾಯಲ್ ಲೇಕ್ಫ್ರಂಟ್ ರೆಸಿಡೆನ್ಸಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಯಾವುದೇ ಮೂಲಸೌಕರ್ಯ ಶುಲ್ಕ ವಿಧಿಸದೆಯೇ ರೆವಿನ್ಯೂ ಮತ್ತು 'ಬಿ-ಖಾತಾ' ಬಡಾವಣೆಗಳ ನಿವಾಸಿಗಳಿಗೆ ನೀರಿನ ಸಂಪರ್ಕ ಒದಗಿಸಿದೆ. ಆರ್ಎಲ್ಎಫ್ ಬಡಾವಣೆ ಕೂಡ ಉದ್ಯಾನವನಗಳಂತಹ ಸಾಮಾನ್ಯ ಮೂಲಸೌಕರ್ಯಗಳನ್ನು ಹೊಂದಿದೆ.
ಬಿಡಿಎ ಅನುಮೋದಿತ ಲೇಔಟ್ಗಳಾದ ರಘುವನಹಳ್ಳಿಯ ಬಿಸಿಎಂಸಿ ಲೇಔಟ್, ನಾರಾಯಣನಗರ ಹಂತ 1 ಮತ್ತು ಹಂತ 2, ದೊಡ್ಡಕಲ್ಲಸಂದ್ರ, ಬಾಲಾಜಿ ಲೇಔಟ್, ವಾಜರಹಳ್ಳಿ, ಬಿಡಿಎ ನೌಕರರ ಬಡಾವಣೆ, ದೊಡ್ಡಕಲ್ಲಸಂದ್ರ ಮತ್ತು ಬಿಸಿಸಿ ಎಚ್ಎಸ್ ಲೇಔಟ್, ವಾಜರಹಳ್ಳಿಯಲ್ಲಿ ಯಾವುದೇ ಮೂಲಸೌಕರ್ಯ ಶುಲ್ಕ ನೀಡದೆಯೇ ಮನೆಗಳಿಗೆ ವೈಯಕ್ತಿಕ ಸಂಪರ್ಕ ಶುಲ್ಕ ಪಾವತಿಸುವ ಮೂಲಕ ಬಿಡಬ್ಲ್ಯುಎಸ್ಎಸ್ಬಿಯಿಂದ ನೀರಿನ ಸಂಪರ್ಕ ಮತ್ತು ತಮ್ಮ ಬಡಾವಣೆಗೆ ಅಂಡರ್ಗ್ರೌಂಡ್ ಒಳಚರಂಡಿ (ಯುಜಿಡಿ) ಸಂಪರ್ಕಗಳನ್ನು ಪಡೆದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಸಂಘವು ಪತ್ರದಲ್ಲಿ ತಿಳಿಸಿದೆ.
ನಾವು ಯುಜಿಡಿ ಸೌಲಭ್ಯವನ್ನು ಹೊಂದಿದ್ದೇವೆ ಮತ್ತು ಈ ಪ್ರದೇಶದಲ್ಲಿ ಬೋರ್ವೆಲ್ ನೀರಿನ ಸೇವೆಗಳ ಮೂಲಕ ಸಮುದಾಯಕ್ಕೆ ನೀರು ಸರಬರಾಜು ಮಾಡುತ್ತಿದ್ದೇವೆ. ಆದರೆ, ಬೋರ್ವೆಲ್ ಬತ್ತಿ ಹೋಗಿದ್ದು, ಖಾಸಗಿ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದೇವೆ. ಇದಕ್ಕಾಗಿ ಹೆಚ್ಚಿನ ದರ ನೀಡಬೇಕಿದೆ ಎನ್ನುತ್ತಾರೆ ಸಂಘದ ಸದಸ್ಯರು.
ಕಳೆದ 20 ವರ್ಷಗಳಿಂದ ಬಿಡಬ್ಲ್ಯುಎಸ್ಎಸ್ಬಿ ನೀರಿನ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಸಂಘದ ಮೂಲಕ ಆರ್ಎಲ್ಎಫ್ ನಿವಾಸಿಗಳು ಬಿಡಬ್ಲ್ಯುಎಸ್ಎಸ್ಬಿಯ ಕಾವೇರಿ ನೀರಿನ ಸಂಪರ್ಕಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಈ ಸಂಪರ್ಕ ಪಡೆಯಲು ಹಂತ 1ಕ್ಕೆ 1.3 ಕೋಟಿ ಮತ್ತು ಹಂತ 2 ಕ್ಕೆ 1.04 ಕೋಟಿ ರೂ. ಪಾವತಿಸುವಂತೆ ನಮಗೆ ತಿಳಿಸಲಾಗಿದೆ ಎಂದು ನಿವಾಸಿಗಳು ಹೇಳಿದರು.
ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ತಮ್ಮ ಮನವಿಗಳನ್ನು ಪರಿಗಣಿಸದೆ ನಿರ್ಲಕ್ಷಿಸಿದ್ದಾರೆ. ಆದಷ್ಟು ಬೇಗ ನೀರಿನ ಸಂಪರ್ಕ ಒದಗಿಸುವಂತೆ ಮನವಿ ಮಾಡಿದರು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಮಾತ್ರವಲ್ಲದೆ ಮುಂದಿನ ಚುನಾವಣೆಗಳನ್ನೂ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ನಿವಾಸಿಗಳು ತಿಳಿಸಿದ್ದಾರೆ.
Advertisement