ಬೆಂಗಳೂರು: ಮತಗಟ್ಟೆ ಸಮೀಪ ಮರವೊಂದು ಧರೆಗುರುಳಿರುವ ಘಟನೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದಿದೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆ ಬಳಿ ಬೃಹತ್ ಮರ ಉರುಳಿದೆ. ನೋಡ ನೋಡುತ್ತಿದ್ದಂತೆಯೇ ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದೆ. ಮರವು ಬುಡ ಸಮೇತ ಕಿತ್ತು ಬಂದು ನೆಲ ಕಚ್ಚಿದೆ.
ಕಾರೊಂದರ ಪಕ್ಕದಲ್ಲೇ ಮರ ಬಿದ್ದಿದ್ದು, ಸಂಭವನೀಯ ದುರಂತವೊಂದು ತಪ್ಪಿದೆ. ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ.
ಆಗಷ್ಟೇ ಮತದಾನ ಮಾಡಲು ಮತದಾರರು ಈ ರಸ್ತೆ ಮೂಲಕ ಹಾದುಹೋಗಿದ್ದರು. ಅದೃಷ್ಟವಶಾತ್ ಮರ ಬೀಳುವ ಸಂದರ್ಭದಲ್ಲಿ ಜನರ ಓಡಾಟ ಇರಲಿಲ್ಲ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಇನ್ನು ಮರ ಬಿದ್ದ ಪರಿಣಾಮ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದ ಕಾರಿನ ಮುಂಭಾಗದ ಲೈಟ್ ಜಖಂ ಗೊಂಡಿದೆ. ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದಿದ್ದು, ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗಿದೆ.
Advertisement