ಬೆಂಗಳೂರು: ದೇಶದ ಪ್ರಜಾಸತ್ತಾತ್ಮಕ ಮನೋಭಾವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯು ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ 25 ರಿಂದ 103 ವರ್ಷದೊಳಗಿನ 41 ರೋಗಿಗಳು ಮತಹಕ್ಕು ಚಲಾಯಿಸಲು ಅನುಕೂಲ ಮಾಡಿಕೊಟ್ಟಿದೆ.
ಸಂಸತ್ ಚುನಾವಣೆಯ ಎರಡನೇ ಹಂತದಲ್ಲಿ, ಬೆಂಗಳೂರಿನ ಮೂರು ಕ್ಷೇತ್ರ ಸೇರಿದಂತೆ ರಾಜ್ಯ 14 ಕ್ಷೇತ್ರಗಳಿಗೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನೆರವಿನೊಂದಿಗ 41 ಮಂದಿ ಒಳರೋಗಿಗಳು ಮತಹಕ್ಕು ಚಲಾಯಿಸಲು ಮಣಿಪಾಲ್ ಆಸ್ಪತ್ರೆ ಅವಕಾಶ ಮಾಡಿಕೊಟ್ಟಿದೆ.
ಕ್ಯಾನ್ಸರ್ನಿಂದ ಬದುಕುಳಿದ 103 ವರ್ಷದ ನಂಜುಂಡ ಸ್ವಾಮಿ, ಕ್ಯಾನ್ಸರ್ ನಿಂದ ಬಳಲುತ್ತಿರುವ ಕಲಾವತಿ (78), ನ್ಯುಮೋನಿಯಾದಿಂದ ಬಳಲುತ್ತಿರುವ ಶ್ರೀನಿವಾಸ ರಾವ್ (76), ಅಪಘಾತ ಸಂತ್ರಸ್ತ ಹಾಗೂ ಯೂರೋ ಶಸ್ತ್ರಚಿಕಿತ್ಸೆಗೊಳಗಾಗಿರುವ ಮಧನ್ (25) ತಮ್ಮ ಹಕ್ಕು ಚಲಾಯಿಸಿದ್ದಾರೆಂದು ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ಅವರು ಹೇಳಿದ್ದಾರೆ.
ರೋಗಿಗಳು ವೈದ್ಯಕೀಯ ಪ್ರತಿಕೂಲತೆಯ ಹೊರತಾಗಿಯೂ ತಮ್ಮ ಮತಹಕ್ಕು ಚಲಾಯಿಸಿದ್ದಾರೆ. ಆಸ್ಪತ್ರೆಯು ನಾಗರಿಕ ಕರ್ತವ್ಯ ಅರಿತು ವೈದ್ಯಕೀಯ ಸಹಾಯವನ್ನು ಒದಗಿಸುವುದರ ಜೊತೆಗೆ ಪ್ರತಿಯೊಬ್ಬ ನಾಗರಿಕನಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
Advertisement