
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿನ ತೆಂಕಿಲ ಬಪ್ಪಳಿಗೆಯ ಬೈಪಾಸ್ ನಲ್ಲಿ ಶುಕ್ರವಾರ ಮುಂಜಾನೆ ಗುಡ್ಡ ಕುಸಿತಗೊಂಡು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗುಡ್ಡ ಕುಸಿತ ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದ ಪರಿಣಾಮ ರಸ್ತೆ ಮುಚ್ಚಲ್ಪಟ್ಟಿದೆ.
ಗುಡ್ಡ ಕುಸಿತದ ವೇಳೆ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಆದರೆ ಗುಡ್ಡದ ಮೇಲ್ಬಾಗದಲ್ಲಿರುವ ದೇವಿ ದೇವಸ್ಥಾನ ಹಾಗೂ ಕೆಲ ಮನೆಗಳಿಗೆ ಅಪಾಯ ಎದುರಾಗಿದೆ.
ಈ ನಡುವೆ ಪುತ್ತೂರು ನಗರದಿಂದ ಬರುವ ವಾಹನಗಳಿಗೆ ತಡೆಯೊಡ್ಡಲು ಅಧಿಕಾರಿಗಳು ಎರಡೂ ಬದಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದು, ಮಡಿಕೇರಿ-ಮೈಸೂರಿಗೆ ಪ್ರಯಾಣಿಸುವವರು ಬದಲಿ ರಸ್ತೆಯಾಗಿ ಪುತ್ತೂರು ನಗರದ ಒಳಗಡೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಹೆದ್ದಾರಿ ಇಲಾಖೆಯು ಉತ್ಖನನ ಯಂತ್ರಗಳು ಮತ್ತು ಕಾರ್ಮಿಕರನ್ನು ನಿಯೋಜಿಸಿ ಬೆಳಗ್ಗೆ 8 ಗಂಟೆಯಿಂದಲೇ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ.
ಏತನ್ಮಧ್ಯೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಲ್ಲಿ ಹೆಚ್ಚುವರಿ ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಮಳೆಯಿಂದಾಗಿ ಕಾರ್ಯಾಚರಣೆ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಪುತ್ತೂರಿನ ಬೆಳ್ಳಿಪ್ಪಾಡಿ ಅಂದ್ರಿಗೇರಿ ಗ್ರಾಮದಲ್ಲಿ ಮುಂಜಾನೆ 4.30ಕ್ಕೆ ಮತ್ತೆ ಭೂಕುಸಿತ ಸಂಭವಿಸಿದ್ದು, ಎರಡು ಮನೆಗಳು ಮತ್ತು ದನದ ಕೊಟ್ಟಿಗೆಗೆ ಭಾರಿ ಹಾನಿಯಾಗಿದ್ದು, ಶೆಡ್ನಲ್ಲಿ ಕಟ್ಟಿದ್ದ ನಾಲ್ಕು ಹಸುಗಳು ಅವಶೇಷಗಳಡಿಯಲ್ಲಿ ಸಾವನ್ನಪ್ಪಿವೆ.
ಪುತ್ತೂರು ತಾಲೂಕಿನ ಪುರಂದರ ತಹಶೀಲ್ದಾರ್ ಮಾತನಾಡಿ, ಮನೆಗಳ ಹಿಂದಿನ ಗುಡ್ಡದ ಒಂದು ಭಾಗ ಮತ್ತು ದನದ ಕೊಟ್ಟಿಗೆ ಕುಸಿದು ಮಣ್ಣಿನಡಿಯಲ್ಲಿ ಕಟ್ಟಡಗಳು ನಜ್ಜುಗುಜ್ಜಾಗಿದೆ.
ಗುಡ್ಡ ಕುಸಿಯುವ ಲಕ್ಷಣಗಳು ಕಂಡುಬಂದಿದ್ದರಿಂದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮೃತದೇಹಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ.
ಅವುಗಳನ್ನು ಹೊರತೆಗೆಯಲು ಎಕ್ಸ್ ಕವೇಟರ್ ಬಳಸಲಾಯಿತು.
Advertisement