
ಬೆಂಗಳೂರು: ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಯತ್ನ, ರೈಲು ಮಾರ್ಗಗಳಲ್ಲಿ ಇಳಿಯುವ ಹಾಗೂ ದೃಷ್ಟಿ ವಿಶೇಷಚೇತನರು ಹಳಿಗಳ ಮೇಲೆ ಬಿದ್ದ ಘಟನೆ ಬೆನ್ನಲ್ಲೇ ‘ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ಪ್ಲಾಟ್ಫಾರಂ ಅಂಚಿಗೆ ಸ್ವಯಂಚಾಲಿತ ತೆರೆದುಕೊಳ್ಳುವ ಬಾಗಿಲು ‘ಪ್ಲಾಟ್ಫಾರಂ ಸ್ಕ್ರೀನ್ ಡೋರ್’ (ಪಿಎಸ್ಡಿ) ಅಳವಡಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ಪ್ಲಾಟ್ಫಾರಂ ಸ್ಕ್ರೀನ್ ಡೋರ್ ರೈಲ್ವೆ ಟ್ರ್ಯಾಕ್ ಹಾಗೂ ನಿಲ್ದಾಣದ ನಡುವೆ ಕಾಂಪೌಂಡ್ನಂತಿರಲಿದ್ದು, ಮೆಟ್ರೋ ನಿಲ್ದಾಣಕ್ಕೆ ರೈಲು ಬಂದಾಗ ಪ್ರವೇಶ ದ್ವಾರದ ಬಳಿ ಬಾಗಿಲು ತೆರೆದುಕೊಳ್ಳಲಿವೆ. ಇಂತಹ ವ್ಯವಸ್ಥೆ ಅಳವಡಿಸಿದರೆ ಅವಘಡಗಳನ್ನು ತಪ್ಪಿಸಬಹುದಾಗಿದೆ. ಆದರೆ, ಈವರೆಗೆ ಯಾವ ನಿಲ್ದಾಣಗಳಲ್ಲೂ ಪಿಎಸ್ಡಿ ಅಳವಡಿಕೆಯಾಗಿಲ್ಲ. ನಗರದಲ್ಲಿ ನೇರಳೆ, ಹಸಿರು ಮಾರ್ಗ ಸೇರಿ ಒಟ್ಟೂ 73.81 ಕಿಲೋ ಮೀಟರ್ ಉದ್ದಕ್ಕೆ ಮೆಟ್ರೋ ಸಂಚರಿಸುತ್ತಿದ್ದು, ಒಟ್ಟು 65 ನಿಲ್ದಾಣಗಳಿವೆ. ಪ್ರಸ್ತುತ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್ಫಾರಂ ಹಳದಿ ಗೆರೆ ದಾಟದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಆರಂಭದಲ್ಲೇ ಮೆಟ್ರೋದ ಎಲ್ಲ ನಿಲ್ದಾಣಗಳಲ್ಲೂ ಪಿಎಸ್ಡಿ ಅಳವಡಿಸಬೇಕಿತ್ತು. ಆತ್ಮಹತ್ಯೆ ಯತ್ನ ಘಟನೆಗಳು ಹಲವರಿಗೆ ಪ್ರೇರಣೆ ಎನಿಸುವ ಅಪಾಯವಿದೆ. ಹೀಗಾಗಿ ತಕ್ಷಣ ಬಿಎಂಆರ್ಸಿಎಲ್ ಕ್ರಮ ವಹಿಸಬೇಕು. ಈಗ ಕೆಲವೊಮ್ಮೆ ಮೆಟ್ರೋ ರೈಲುಗಳು ಪ್ರಯಾಣಿಕರು ಪ್ರವೇಶಿಸಬೇಕಾದ ಹಳದಿ ಗೆರೆ ದಾಟಿ ಮುಂದಕ್ಕೆ ಹೋಗಿ ನಿಲ್ಲುತ್ತಾರೆ. ಆದರೆ, ಪಿಎಸ್ಡಿ ಅಳವಡಿಸಿದ ಬಳಿಕ ನಿಗದಿತ ಸ್ಥಳದಲ್ಲೇ ರೈಲು ನಿಲ್ಲಿಸಬೇಕಾಗುತ್ತದೆ. ಹಾಗಾಗಿ ಬಿಎಂಆರ್ಸಿಎಲ್ ಪಿಎಸ್ಡಿ ಅಳವಡಿಸುವಂತೆ ಆಗ್ರಹಗಳು ಹೆಚ್ಚಾಗಿದೆ.
ಪ್ಲಾಟ್ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ 450ರಿಂದ 500 ಕೋಟಿ ರೂ. ವೆಚ್ಚವಾಗಲಿದೆ. ಒಟ್ಟು 65 ನಿಲ್ದಾಣಗಳಿದ್ದು, ಒಂದೊಂದು ಮೆಟ್ರೋ ನಿಲ್ದಾಣದಲ್ಲೂ ಹೆಚ್ಚುವಜಿ ಜಿಎಸ್ಟಿ ಜೊತೆಗೆ 7 ಕೋಟಿ ರೂ.ವರೆಗೆ ವೆಚ್ಚವಾಗಬಹುದು. ಕೆಂಪೇಗೌಡ ನಿಲ್ದಾಣದಲ್ಲಿ ಒಟ್ಟು 4 ಪ್ಲಾಟ್ ಫಾರ್ಮ್ ಗಳಿದ್ದು, ಅಲ್ಲಿ ದುಪ್ಪಟ್ಟು ವೆಚ್ಚವಾಗಲಿದೆ ಎಂದು ಮೆಟ್ರೋ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡರೆ ಈ ವೆಚ್ಚ ದೊಡ್ಡ ವಿಚಾರವೆನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿರ್ಧಾರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ತಿಳಿಸಿದರು.
BMRCL ಕಾರ್ಯಾಚರಣೆಯ ಲಾಭದ ಪೈಕಿ ಸುಮಾರು 90 ಕೋಟಿ ಹಣ ವಾರ್ಷಿಕ ಬಡ್ಡಿ ಪಾವತಿಗೆ ಹೋಗುತ್ತದೆ. ಸಿಎಸ್ಆರ್ ಉಪಕ್ರಮದ ಅಡಿಯಲ್ಲಿ ಯೋಜನೆ ಕೈಗೆತ್ತಿಕೊಂಡರೆ ಸಹಾಯವಾಗುತ್ತದೆ. ಬಾಗಿಲುಗಳು ಗಟ್ಟಿಮುಟ್ಟಾಗಿರಬೇಕು ಮತ್ತು ದೀರ್ಘಾವಧಿಯಲ್ಲಿ ಉಳಿಸಿಕೊಳ್ಳಲು ಅತ್ಯುತ್ತಮ ಗುಣಮಟ್ಟದ ಅಗತ್ಯವಿರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ ಎಂದರು.
ಚೆನ್ನೈ ಮತ್ತು ಅಹಮದಾಬಾದ್ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಈ ವ್ಯವಸ್ಥೆಗಳಿವೆ. ದೆಹಲಿಯಲ್ಲಿ ಎತ್ತರ ಮೆಟ್ರೋ ನಿಲ್ದಾಣಗಳಲ್ಲಿ ಅರ್ಧ ಪರದೆಯ ಬಾಗಿಲುಗಳನ್ನು ಹಾಕಿದ್ದರೆ, ಭೂಗತ ನಿಲ್ದಾಣಗಳಿಲ್ಲಿ ಪೂರ್ಣ ಪರದೆಯುಳ್ಳ ಬಾಗಿಲುಗಳನ್ನು ಹಾಕಲಾಗಿದೆ. ನಮ್ಮಲ್ಲಿ ದೈನಂದಿನ ಆದಾಯ ರೂ.2 ಕೋಟಿ ಆಗಿದ್ದು, ಅವರದ್ದು 12 ಕೋಟಿ ರೂ ಆಗಿದೆ ಎಂದು ಮಾಹಿತಿ ನೀಡಿದರು.
ಸ್ಕ್ರೀನ್ ಡೋರ್ ಅಳವಡಿಕೆಗೆ ಮುಂದಾದರೂ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ವ್ಯವಸ್ಥೆ ಅಳವಡಿಕೆಗೆ ಕಾರ್ಮಿಕರು ಉಪಕರಣಗಳು, ಮೂಲಸೌಕರ್ಯಗಳ ಅಗತ್ಯವಿದೆ. ರೈಲು ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಸಿಂಕ್ರೊನೈಸೇಶನ್ ಕೂಡ ದೊಡ್ಡ ಸಮಸ್ಯೆಯಾಗಿದೆ. ಸ್ಕ್ರೀನ್ ಡೋರ್ ಹಾಗೂ ರೈಲಿನ ಬಾಗಿಲು ಏಕಕಾಲದಲ್ಲಿ ತೆರೆಯುವಂತೆ ಮಾಡಬೇಕು. ಅದು ಅಸಾಧ್ಯವಲ್ಲ. ಆದರೆ, ರೈಲುಗಳು ಕಾರ್ಯಾಚರಣೆ ಪ್ರಗತಿಯಲ್ಲಿರುವಾಗ ಮಾಡುವುದು ಅತ್ಯಂತ ಕಠಿಣ ಕೆಲಸ ಎಂದು ಹೇಳಿದ್ದಾರೆ.
ಈ ನಡುವೆ ಪ್ರಾಯೋಗಿಕವಾಗಿ ಮೊದಲು ಕೆಂಪೇಗೌಡ ಮತ್ತು ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆ ಅಳವಡಿಸಲು ಯೋಜಿಸಲಾಗಿದೆ ಎಂದು ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಹೇಳಿದ್ದಾರೆ.
ಪಿಂಕ್ ಲೈನ್ ಹಂತ-2, ವಿಮಾನ ನಿಲ್ದಾಣದ ಟರ್ಮಿನಲ್ ಸ್ಟೇಷನ್ ಮತ್ತು ವಿಮಾನ ನಿಲ್ದಾಣದ ಮೆಟ್ರೋ ನಿಲ್ದಾಣದಲ್ಲಿ ಸ್ಕ್ರೀನ್ ಡೋರ್ ಅಳವಡಿಕೆಗೆ ಅಲ್ಸ್ಟೋಮ್ಗೆ ಟೆಂಡರ್ ನೀಡಲಾಗಿದೆ ಎಂದು ನಮ್ಮ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ತಿಳಿಸಿದ್ದಾರೆ.
Advertisement