ಗಣೇಶ ಚತುರ್ಥಿಗೆ BBMP ಸಿದ್ಧತೆ: PoP ಗಣೇಶ ಮೂರ್ತಿಗಳ ವಶಪಡಿಸಿಕೊಳ್ಳಲು ಪಾಲಿಕೆ ಮುಂದು; ಆದರೆ ವಿಲೇವಾರಿ ಹೇಗೆ?

ಇಲ್ಲಿಯವರೆಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಜಿಲ್ಲಾಡಳಿತಗಳು ಮತ್ತು ಮಹಾನಗರ ಪಾಲಿಕೆಗಳು ರಾಜ್ಯದಲ್ಲಿ ಸುಮಾರು 5,000 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಂಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಹಬ್ಬಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ಆರಂಭಿಸಿದೆ. ಇದರಂತೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯುತ್ತಿದೆ. ಆದರೆ, ವಶಕ್ಕೆ ಪಡೆದ ಈ ಪಿಒಪಿ ಗಣೇಶ ಮೂರ್ತಿಗಳು ಯಾವ ರೀತಿ ವಿಲೇವಾರಿಯಾಗುತ್ತಿದೆ ಎಂಬುದರ ಕುರಿತ ಪ್ರಶ್ನೆ ಹಲವರಲ್ಲಿ ಕಾಡತೊಡಗಿದೆ.

ಇಲ್ಲಿಯವರೆಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಜಿಲ್ಲಾಡಳಿತಗಳು ಮತ್ತು ಮಹಾನಗರ ಪಾಲಿಕೆಗಳು ರಾಜ್ಯದಲ್ಲಿ ಸುಮಾರು 5,000 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಂಡಿವೆ, ಈ ಪೈಕಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಮೂರ್ತಿಗಳ ಸರಬರಾಜು ಮಾಡುವ ರಾಮನಗರದಿಂದಲೇ ಅತೀ ಹೆಚ್ಚು ಮೂರ್ತಿಗಳ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಈ ಹಿಂದೆಯೂ ಪಿಒಪಿ ಗಣೇಶ ಮೂರ್ತಿಗಳ ವಶಪಡಿಸಿಕೊಳ್ಳಲಾಗಿತ್ತು, ಆದರೆ ಅವುಗಳನ್ನು ಹೇಗೆ ವಿಲೇವಾರಿ ಮಾಡಲಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಫ್ರೆಂಡ್ಸ್ ಆಫ್ ಲೇಕ್‌ನ ಸ್ವಯಂಸೇವಕ ರಾಮ್ ಪ್ರಸಾದ್ ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆಗೆ ಕಲ್ಯಾಣಿಗಳಲ್ಲಿ ಸಿದ್ಧತೆಗಳು ಸಿದ್ಧಗೊಂಡಿಲ್ಲ. ಮೂರ್ತಿಗಳ ಗಾತ್ರಕ್ಕೆ ಅನುಗುಣವಾಗಿ ಕಲ್ಯಾಣಿಗಳ ಕುರಿತು ಮಾಹಿತಿ ನೀಡಬೇಕು. 2016 ರಿಂದ ಗಣೇಶ ಮೂರ್ತಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ. ಮೂಲಸೌಕರ್ಯ ಅಥವಾ ನಾಗರಿಕ ಸಂಸ್ಥೆಗಳು ಅನುಸರಿಸುವ ಕಾರ್ಯವಿಧಾನಗಳು ಮಾತ್ರ ಬದಲಾಗಿಲ್ಲ. ಮಣ್ಣಿನ ವಿಗ್ರಹಗಳು 3 ಅಡಿಗಿಂತ ಹೆಚ್ಚು ಇರುವಂತಿಲ್ಲ, ಆದರೆ, ಕಲ್ಯಾಣಿಗಳಲ್ಲಿ ಮುಳುಗಿಸಿದ ವಿಗ್ರಹಗಳು ದೊಡ್ಡದಾಗಿರುತ್ತವೆ. 2016 ರಲ್ಲಿ, ವಿಗ್ರಹ ತಯಾರಕರು ಮತ್ತು ಮಾರಾಟಗಾರರು ಪಿಒಪಿ ವಿಗ್ರಹಗಳನ್ನು ತಯಾರಿಸುವುದಿಲ್ಲ ಅಥವಾ ಮಾರಾಟ ಮಾಡಬಾರದು ಎಂದು ಲಿಖಿತ ಭರವಸೆ ನೀಡಿದ್ದರು. ಆದರೂ ಇಂತಹ ವಿಗ್ರಹಗಳನ್ನು ವಶಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ವಶಪಡಿಸಿಕೊಂಡ ಈ ಮೂರ್ತಿಗಳು ಹೇಗೆ ವಿಲೇವಾರಿ ಮಾಡಲಾಗುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ವಿನಾಯಕ ಚತುರ್ಥಿ: PoP ಗಣೇಶ ಮೂರ್ತಿಗಳ ಮೇಲೆ ಪಾಲಿಕೆ ಹದ್ದಿನ ಕಣ್ಣು; ಸಮಿತಿ ರಚನೆಗೆ ಆದೇಶ

ಪರಿಸರ ನಿಯಮಗಳ ಪ್ರಕಾರ, PoP ಉತ್ಪನ್ನಗಳನ್ನು ಸಂಸ್ಕರಣೆಗಾಗಿ (C&D) ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕಳುಹಿಸಬೇಕು.

ಕಣ್ಣೂರಿನ ಸಿ & ಡಿ ತ್ಯಾಜ್ಯ ಸಂಸ್ಕರಣಾ ಘಟಕದ ರಾಕ್ ಕ್ರಿಸ್ಟಲ್‌ನ ಮುಖ್ಯಸ್ಥ ರಾಜೇಶ್ ಕೆ ಅವರು ಮಾತನಾಡಿ, ಕೋವಿಡ್‌ಗೆ ಮೊದಲು ಕಚ್ಚಾ ವಸ್ತುಗಳು ಮರುಬಳಕೆಗೆ ಬಂದಿದ್ದವು. ಆದರೆ, ಈಗ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ಮಾತನಾಡಿ, 2023 ರಲ್ಲಿ ಆದೇಶ ಹೊರಡಿಸಿದ್ದ ನ್ಯಾಯಾಲಯವು ಪಿಒಪಿ ಮೂರ್ತಿಗಳನ್ನು ನಾಶಪಡಿಸಬೇಕೆಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಅದು ಹೇಗೆ ಎಂದು ನಮಗೆ ತಿಳಿದಿಲ್ಲ. ಅದೊಂದು ಧಾರ್ಮಿಕ ವಿಚಾರವಾಗಿದ್ದು, ಮೂರ್ತಿಗಳನ್ನು ಸ್ವೀಕರಿಸಲು ಯಾವುದೇ ಕ್ರಷಿಂಗ್ ಘಟಕ ಸಿದ್ಧವಿಲ್ಲ. ಹೀಗಾಗಿ ಮೂರ್ತಿಗಳನ್ನು ವಿವಿಧ ಸುಸಜ್ಜಿತ ಸ್ಥಳಗಳಲ್ಲಿ ಇರಿಸಲಾಗಿದೆ. ಯಾವುದೇ ಅಧಿಕಾರಿಗಳೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಅಲ್ಲದೆ, ವಿಗ್ರಹ ವಿಸರ್ಜನೆ ಕಾರ್ಯದಲ್ಲಿ ಯಾವ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತಂತೆಯೂ ಸ್ಪಷ್ಟ ಮಾಹಿತಿಗಳಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಇಲಾಖೆಗಳು ಇದನ್ನು ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ) ವಿಜಯ್ ಕುಮಾರ್ ಮಾತನಾಡಿ, ನಗರದಲ್ಲಿ 40 ಕಲ್ಯಾಣಿಗಳಿದ್ದು, ಮೂರ್ತಿಗಳನ್ನು ವಿಸರ್ಜನೆ ಮಾಡಬಹುದಾಗಿದೆ. ದೊಡ್ಡ ವಿಗ್ರಹಗಳು ಯಡಿಯೂರು, ಸ್ಯಾಂಕಿ ಮತ್ತು ಹಲಸೂರು ಕೆರೆಗಳಿಗೆ ಹೋಗಬೇಕು. ಉಳಿದ ಮೂರ್ತಿಗಳ ವಿಸರ್ಜನೆಯನ್ನು ವಲಯ ಎಂಜಿನಿಯರ್‌ಗಳು ವ್ಯವಸ್ಥೆ ನೋಡಿಕೊಳ್ಳುತ್ತಾರೆ. ತ್ಯಾಜ್ಯ ನಿರ್ವಹಣೆ ಘನತ್ಯಾಜ್ಯ ನಿರ್ವಹಣಾ ಇಲಾಖೆಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ವಿಕಾಸ್ ಸುರಳಕರ್ ಮಾತನಾಡಿ, ದೊಡ್ಡ ವಿಗ್ರಹಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com