
ಗಂಗಾವತಿ: ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ ಎಂಬ ಆರೋಪದ ಮೇರೆಗೆ ಗಂಗಾವತಿಯ ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹನುಮನ ಗದೆ, ರಾಮನ ಧನಸ್ಸು ಹೋಲುವ ದೀಪದ ಕಂಬಗಳ ತೆರವಿಗೆ ಆದೇಶ ಹೊರಡಿಸಲಾಗಿದೆ.
ಗಂಗಾವತಿಯಿಂದ ಅಂಜನಾದ್ರಿ ಬೆಟ್ಟಕ್ಕೆ ಸಾಗುವ ರಸ್ತೆ ಮಧ್ಯೆ ಹಾಕಿರುವ ಬಿಲ್ಲು, ಬಾಣಗಳ ಮಾದರಿಯ ಆಕರ್ಷಕ ವಿದ್ಯುತ್ ಕಂಬಗಳು ಕೋಮು ಭಾವನೆಗೆ ಕಾರಣವಾಗುತ್ತಿದೆ ಎಂಬ SDPI ಆಕ್ಷೇಪಕ್ಕೆ ತಹಶೀಲ್ದಾರ್ ಸ್ಪಂದಿಸಿದ್ದು ಅವುಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದಾರೆ.
ವಿದ್ಯುತ್ ಕಂಬಗಳನ್ನು ತೆರವಿಗೆ ಸೂಚಿಸಿದ್ದಲ್ಲದೆ, ಇವನ್ನು ಹಾಕಿರುವ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್ ಐಡಿಎಲ್) ವಿರುದ್ಧವೇ ಪ್ರಕರಣ ದಾಖಲಿಸಲು ತಹಸೀಲ್ದಾರ್ ಸೂಚನೆ ನೀಡಿದ್ದಾರೆ.
ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಭಾಗವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಹಲವು ಬಾರಿ ಕೇಳಿ ಬಂದಿತ್ತು. ಜನಾರ್ದನ ರೆಡ್ಡಿ ಅವರು ಚುನಾವಣಾ ಪ್ರಚಾರದಲ್ಲೂ ಭರವಸೆ ನೀಡಿದ್ದರು. ಅದರಂತೆ ಈಗ ವಿದ್ಯುತ್ ಕಂಬಗಳಲ್ಲಿ ಬಿಲ್ಲು, ಬಾಣಗಳು ಇರುವ ಚಿತ್ರಗಳನ್ನು ಅಳವಡಿಸಲಾಗಿತ್ತು. ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಚಿತ್ರಗಳು ಐತಿಹಾಸಿಕ ಅಂಜನಾದ್ರಿ ಪರ್ವತದ ಮಾರ್ಗಸೂಚಿಗೆ ಅನುಕೂಲವಾಗಿವೆ.
ಅಂಜನಾದ್ರಿಗೆ ಬರುವ ಭಕ್ತರಲ್ಲಿ ಧಾರ್ಮಿಕ ಭಕ್ತಿ ಉಂಟಾಗುವುದರಿಂದ ಇವುಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲದೇ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲೂ ಶಾಸಕ ಜನಾರ್ದನ ರೆಡ್ಡಿ ಅವರು ವಿಷಯ ಪ್ರಸ್ತಾಪಿಸಿ ಈ ವಿಷಯದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸದೇ ಎಲ್ಲರೂ ಸಹಕಾರ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದ್ದರು.
ಪತ್ರ ಸೋರಿಕೆ
ಆಗಸ್ಟ್ 28 ರಂದು ತಹಶೀಲ್ದಾರ್ ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಿಗೆ ಬರೆದಿರುವ ಪತ್ರ ಲೀಕ್ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯ ಜುಲೈ ನಗರದಿಂದ ರಾಣಾ ಪ್ರತಾಪ್ ವೃತ್ತದ ವರೆಗಿನ ರಸ್ತೆಯಲ್ಲಿ ಕೆಐಆರ್ಡಿಎಲ್ ಸಂಸ್ಥೆ ಸ್ಥಾಪಿಸಿದ ವಿದ್ಯುತ್ ಕಂಬಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ನಿರ್ಮಾಣವಾಗಿದೆ.
ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಕಾಮಗಾರಿ ಕೈಗೊಂಡಿರುವ ಕೆಆರ್ಐಡಿಎಲ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡು ವರದಿ ನೀಡುವಂತೆ ತಹಶೀಲ್ದಾರ್ ನಾಗರಾಜ್ ಅವರು ಪೊಲೀಸ್ ಠಾಣೆಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.
ಹಿಂದೂಪರ ಸಂಘಟನೆಗಳ ಆಕ್ರೋಶ
ಇನ್ನು ತಹಶೀಲ್ದಾರ್ ರ ಈ ನಡೆ ಇದೀಗ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಆಕ್ರೋಶಕ್ಕೆ ಗುರಿಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಬೀದಿ ದೀಪಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಹೇಳಿ ಜಿಲ್ಲಾಡಳಿತಕ್ಕೆ SDPI ಮನವಿ ಮಾಡಿತ್ತು. ಜಿಲ್ಲಾಧಿಕಾರಿ ಮೌಖಿಕ ಸೂಚನೆಯಂತೆ, ತಹಸೀಲ್ದಾರ್ ಕ್ರಮ ಜರುಗಿಸಲು ಪೊಲೀಸರಿಗೆ ತಿಳಿಸಿದ್ದಾರೆ. ಪ್ರವಾಸಿ ತಾಣ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಿಯಿಂದ ಬರುತ್ತಾರೆ. ಇಂತಹ ಪವಿತ್ರ ಜಾಗದಲ್ಲಿ ಅಳವಡಿಸಿದ ಬೀದಿ ದೀಪಗಳು ಕೋಮು ಭಾವನೆ ಕೆರಳಿಸುವುದು ಹೇಗೆ ಎಂದು ಹಿಂದು ಸಂಘಟನೆ ನಾಯಕರು ಆಕ್ಷೇಪ ಎತ್ತಿದ್ದಾರೆ.
Advertisement