ಬೆಂಗಳೂರು: ಪತ್ನಿ ಓಡಿಹೋಗಲು ಸಹಾಯ ಮಾಡಿದನೆಂದು ಸ್ನೇಹಿತನ ಕೊಲೆ; ಆರೋಪಿ ಬಂಧನ

ತನ್ನ ಪತ್ನಿ ಮತ್ತೋಬ್ಬನ ಜತೆ ಓಡಿ ಹೋಗಲು ಸಹಾಯ ಮಾಡಿದ ಎಂದು ಸ್ನೇಹಿತನನ್ನು ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಪತ್ನಿ ಮತ್ತೋಬ್ಬನ ಜತೆ ಓಡಿ ಹೋಗಲು ಸಹಾಯ ಮಾಡಿದ ಎಂದು ಸ್ನೇಹಿತನನ್ನು ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಿರಣ್ (32) ಮತ್ತು ಆತನ ಸ್ನೇಹಿತ ಅಕ್ಷಯ್ (31) ಬಂಧಿತರು. ಇವರು ಬಾಗಲಗುಂಟೆ ನಿವಾಸಿಗಳು ಎಂದು ಗುರುತಿಸಲಾಗಿದೆ.

ಬಂಧಿತ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್‌ಗಳ ಮಾರಾಟಗಾರನಾಗಿದ್ದನು. ಈತನಿಗೆ ಹತ್ಯೆಯಾದ ಕೆಂಗೇರಿಯ ಹೇಮಂತ್‌ನ ಪರಿಚಯವಿತ್ತು. ಕಿರಣ್‌ನ ಹೆಂಡತಿ ಹೇಮಾ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಳು ಎನ್ನಲಾಗಿದೆ.

ಹೇಮಂತ್ ಆಗಾಗ ಕೆಂಗೇರಿಯಿಂದ ಬಾಗಲಗುಂಟೆಗೆ ಕಿರಣ್ ಮತ್ತು ಅಕ್ಷಯ್ ಅವರನ್ನು ಭೇಟಿಯಾಗಲು ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿಯಲ್ಲಿ ಹೇಮಂತ್ ಇದ್ದ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಮರಿಸ್ವಾಮಿ, ಕಿರಣ್ ಮನೆಗೆ ಬಂದಾಗಲೆಲ್ಲ ಹೇಮಂತ್ ಜೊತೆ ಬರುತ್ತಿದ್ದ. ಮರಿಸ್ವಾಮಿ ಎರಡು ತಿಂಗಳಿನಿಂದ ಕಿರಣ್ ಪತ್ನಿಗೆ ಹತ್ತಿರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮರಿಸ್ವಾಮಿ ಮೃತ ಹೇಮಂತ ಸ್ನೇಹಿತ್. ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದ ತನ್ನ ಪತ್ನಿಯನ್ನು ಕಿರಣ್ ಹುಡುಕುತ್ತಿದ್ದಾಗ ಹತ್ಯೆಯಾದ ಹೇಮಂತ ಕರೆ ಮಾಡಿ ‘ನಿನ್ನ ಹೆಂಡತಿ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದನು.

ತನ್ನ ಹೆಂಡತಿ ಓಡಿ ಹೋಗಲು ಹೇಮಂತ್ ಸಹಾಯ ಮಾಡಿದ್ದಾನೆ ಎಂದು ಅನುಮಾನ ಪಟ್ಟ ಆರೋಪಿ ಕಿರಣ್ ಅಕ್ಷಯ್ ಜತೆ ಸೇರಿ ಫೆಬ್ರವರಿ 4ರಂದು ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿಗೆ ತೆರಳಿ ಹೇಮಂತ್‌ಗೆ ಕರೆ ಮಾಡಿ ತಮ್ಮ ಬಳಿಗೆ ಕರೆಸಿಕೊಂಡಿದ್ದರು.

ನಂತರ ಹೇಮಂತ್‌ನನ್ನು ಕರೆದುಕೊಂಡು ಬಾರ್‌ನಲ್ಲಿ ಮದ್ಯ ಸೇವಿಸಿ, ನಂತರ ಬಾಗಲಗುಂಟೆಯ ಪಾಪಣ್ಣ ಲೇಔಟ್‌ಗೆ ಹೇಮಂತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಹೇಮಂತ್​ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೊಣ್ಣೆ ಹಾಗೂ ಕಬ್ಬಿಣದ ವಸ್ತುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಾಯಗೊಂಡ ಹೇಮಂತ್​ನನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಫೆ.5ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಹೇಮಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com