ರಾಮನಗರ: ರೇಷ್ಮೆ ನೂಲು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿರುವಂತಹ (death) ಘಟನೆ ರಾಮನಗರದ ಟಿಪ್ಪುಬಡಾವಣೆಯ ಕಾರ್ಖಾನೆಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಸನಾವುಲ್ಲಾ ಖಾನ್(63 ವರ್ಷ) ಎಂದು ಗುರುತಿಸಲಾಗಿದೆ. ಬಾಯ್ಲರ್ಗೆ ಸೌದೆ ಹಾಕುವಾಗ ಏಕಾಏಕಿ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಕಾರ್ಖಾನೆಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಉಳಿದ ಕಾರ್ಮಿಕರು ದೂರವಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಜೆ 4 ಗಂಟೆಗೆ ಈ ಘಟನೆ ಸಂಭವಿಸಿದ್ದು, ಮೃತ ಸನಾವುಲ್ಲಾ ಖಾನ್ ಬಾಯ್ಲರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ರೆಗ್ಯುಲೇಟರ್ ಸ್ವಿಚ್ ಆನ್ ಆಗಿತ್ತು. ಕಾರ್ಖಾನೆಯ ರೇಷ್ಮೆ ಗೂಡಿನಿಂದ ರೇಷ್ಮೆ ದಾರವನ್ನು ಬೇರ್ಪಡಿಸುವ ಕೆಲಸ ಮುಗಿದ ನಂತರ ಟಿಪ್ಪುನಗರದ ನಿವಾಸಿ ಖಾನ್ ಅವರು ಬಾಯ್ಲರ್ ಅನ್ನು ಸ್ವಚ್ಛಗೊಳಿಸಲು ಹೋಗಿದ್ದರು. ಈ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ.
ಬಾಯ್ಲರ್ ಅನಲಾಗ್ ಮೀಟರ್ ಮತ್ತು ಒತ್ತಡವನ್ನು ಸೂಚಿಸುವ ಉಗಿ ನಿಯಂತ್ರಕವನ್ನು ಒಳಗೊಂಡಿರುತ್ತದೆ. ಸನಾವುಲ್ಲಾ ಖಾನ್ ಇದನ್ನು ಪರಿಶೀಲಿಸಲು ವಿಫಲರಾಗಿದ್ದು, ರೆಗ್ಯುಲೇಟರ್ ಸ್ವಿಚ್ ಆಫ್ ಆಗಿದೆ ಎಂದು ಭಾವಿಸಿ ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ಬಾಯ್ಲರ್ ಅದಾಗಲೇ ಹೆಚ್ಚು ಬಿಸಿಯಾಗಿರುವುದರಿಂದ, ಖಾನ್ ಉಗಿ (ಪ್ರೆಶರ್) ಬಿಡುಗಡೆ ಮಾಡುತ್ತಿದ್ದಂತೆಯೇ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಖಾನೆಯು 18 ಕಾರ್ಮಿಕರನ್ನು ನೇಮಿಸಿಕೊಂಡಿದೆ, ಆದರೆ ಘಟನೆಯ ಸಮಯದಲ್ಲಿ ಖಾನ್ ಒಬ್ಬನೇ ಕೆಲಸ ಮಾಡುತ್ತಿದ್ದನು, ಸ್ಫೋಟದ ಶಬ್ದವನ್ನು ಕೇಳಿದ ನೆರೆಹೊರೆಯ ನಿವಾಸಿಗಳಲ್ಲಿ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅಕ್ರಂ ಪಾಷಾ ಎಂಬುವವರಿಗೆ ನೂಲಿನ ಯಂತ್ರದ ಕಾರ್ಖಾನೆ ಸೇರಿದ್ದು, ಅವರ ವಿರುದ್ಧ ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಕಾರ್ಖಾನೆಯ ಮಾಲೀಕ ಅಕ್ರಂ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement