
ಬೆಂಗಳೂರು: ಬೆಂಗಳೂರು ಹಾಗೂ ರಾಜ್ಯದ ಉಳಿದ ಭಾಗಗಳಲ್ಲಿನ ನೀರಿನ ಸಮಸ್ಯೆ ಕುರಿತು ಕರ್ನಾಟಕ ಬಿಜೆಪಿ ಮುಖ್ಯಸ್ಥ ಮತ್ತು ಶಾಸಕ ಬಿವೈ ವಿಜಯೇಂದ್ರ ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
'ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ ನಿಭಾಯಿಸಿಲ್ಲದಿರುವುದು ಅವರ ಅಸಮರ್ಥತೆ ಮತ್ತು ಜನರ ಬಗೆಗಿನ ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ' ಎಂದು ಅವರು ಹೇಳಿದರು.
'ತಾವೇ ಸೃಷ್ಟಿಸಿರುವ ಬಿಕ್ಕಟ್ಟಿನ ವಾಸ್ತವವನ್ನು ಅರಿತುಕೊಂಡು ಬೆಂಗಳೂರಿನ ನಾಗರಿಕರಿಗೆ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ಸಿಎಂ ಮತ್ತು ಸರ್ಕಾರವನ್ನು ಒತ್ತಾಯಿಸುತ್ತೇನೆ. ಜೀವಗಳು ಅಪಾಯದಲ್ಲಿದೆ ಮತ್ತು ಅವರ ನಿರ್ಲಕ್ಷ್ಯವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ' ಎಂದು ಹೇಳಿದರು.
'ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಮೈತ್ರಿಗಳಿಗೆ ಆದ್ಯತೆ ನೀಡುವ ಮೂಲಕ ಕರ್ನಾಟಕದ ನಾಗರಿಕರನ್ನು ಅಸಹನೀಯ ದುಃಖಕ್ಕೆ ದೂಡಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ಮುಂದೆ ಮೊದಲು ನಮ್ಮ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುವಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ವೈಫಲ್ಯವಾಗಿದ್ದು, ಈಗಾಗಲೇ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಇದುವೇ ಬೆಂಗಳೂರಿನಲ್ಲಿ ಭಾರಿ ನೀರಿನ ಕೊರತೆಗೆ ಕಾರಣವಾಯಿತು' ಎಂದರು.
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಳೆಗಾಲಕ್ಕೆ ನಾಲ್ಕು ತಿಂಗಳು ಬಾಕಿ ಇದ್ದು, ನೀರಿನ ಸಂಗ್ರಹವು ಆತಂಕಕಾರಿಯಾಗಿ ಕುಸಿದಿರುವುದರಿಂದ ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ರಾಜ್ಯದಲ್ಲಿನ ಕಠಿಣ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಈ ವಿಷಯವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ನಾಯಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
Advertisement