
ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದ ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರು ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರು. ಆದರೆ, ರಾಜ್ಯ ಸರ್ಕಾರ ಅವರನ್ನು ಕೊಡಗಿಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಿ ಯಡವಟ್ಟು ಮಾಡಿಕೊಂಡಿದೆ.
ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರನ್ನು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ.
ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಅಶೋಕ ಭೀಮರಾಯ ಪುಟಪಾಕ್ (54) ಸೇಡಂ ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯದ ಕಾರಣ ಅವರು ಸೇಡಂನಲ್ಲಿ ಜನವರಿ 12ರಂದು ಮೃತಪಟ್ಟಿದ್ದರು. ಜ.13ರಂದು ದಿಗ್ಗಾಂವ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಚಿತ್ತಾಪುರ, ವಾಡಿ, ಸೇಡಂ ಪುರಸಭೆಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
ಅಶೋಕ ಭೀಮರಾಯ ಪುಟಪಾಕ್ ನಿಧನರಾಗಿ ಆರು ತಿಂಗಳಾದರೂ ಅವರ ಸೇವಾ ಸೌಲಭ್ಯಗಳು ಮತ್ತು ಇತರ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಇಲಾಖೆ ಮಡಿಕೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇಲಾಖೆಯ ನೌಕರರೊಬ್ಬರು ಮೃತಪಟ್ಟಿರುವ ಬಗ್ಗೆ ಪೌರಾಡಳಿತ ವಿಭಾಗಕ್ಕೆ ಮಾಹಿತಿ ಇರಲಿಲ್ಲವೇ? ಒಂದು ವೇಳೆ ಮೃತಪಡುವ ಮುಂಚೆ ಅಶೋಕ ಅವರು ವರ್ಗಾವಣೆ ಕೋರಿದ್ದರೆ? ಅವರ ಮರಣದ ನಂತರ ವರ್ಗಾವಣೆ ಕಡತ ಮರು ಪರಿಶೀಲನೆ ಮಾಡದೇ ವರ್ಗಾವಣೆ ಮಾಡಲಾಗಿದೆಯೇ ಎಂಬ ಚರ್ಚೆ ಇದೀಗ ನಡೆಯುತ್ತಿದೆ.
Advertisement