ನಿಯಮಗಳು ಜನಸಾಮಾನ್ಯರಿಗೆ ಮಾತ್ರವೇ?: ವಿಧಾನಸೌಧ-ವಿಕಾಸಸೌಧ ಸೇವಾ ಶುಲ್ಕ 7 ಕೋಟಿ ರು. ಪಾವತಿ ಇನ್ನೂ ಬಾಕಿ!

2008-09 ರಿಂದ 2015-16 ರವರೆಗೆ ವಿಧಾನಸೌಧ ವಾರ್ಷಿಕವಾಗಿ 11,10,876 ರೂ.ಗಳನ್ನು ಪಾವತಿಸಬೇಕಾಗಿತ್ತು, ನಂತರ 2016-17 ರಿಂದ 2020-21 ರವರೆಗೆ ದಂಡದೊಂದಿಗೆ 13,88,595 ರೂ.ಗೆ ಪರಿಷ್ಕರಿಸಲಾಯಿತು.
ವಿಧಾನಸೌಧ (ಸಂಗ್ರಹ ಚಿತ್ರ)
ವಿಧಾನಸೌಧ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯ ರಾಜಧಾನಿಯ ಎರಡು ಪ್ರಮುಖ ಕಟ್ಟಡಗಳು ಇನ್ನೂ ಸೇವಾ ಶುಲ್ಕದ ಬಾಕಿಯನ್ನು ಪಾವತಿಸಬೇಕಾಗಿದೆ.

ಮಂತ್ರಿಗಳು ಮತ್ತು ಅಧಿಕಾರಿಗಳು ಕುಳಿತು ಎಲ್ಲಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಕಟ್ಟಡಗಳ ಸೇವಾಶುಲ್ಕವನ್ನೇ ಪಾವತಿಸದಿರುವುದು ನಗೆಪಾಟಲಿಗೀಡಾಗುವಂತೆ ಮಾಡಿದೆ. ಎರಡು ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕಳೆದ 15 ವರ್ಷಗಳಿಂದ ಸೇವಾ ಶುಲ್ಕವಾಗಿ 7 ಕೋಟಿ ರೂ. ಹಣ ಪಾವತಿಸಬೇಕಾಗಿದೆ. ಆದರೆ ಇದುವರೆಗೂ ಒಂದು ನಯಾ ಪೈಸೆ ಪಾವತಿ ಮಾಡಿಲ್ಲ. ವಿಧಾನಸೌಧ 2.29 ಕೋಟಿ ಹಾಗೂ ವಿಕಾಸ ಸೌಧ 5.32 ಕೋಟಿ ರು, ಸೇವಾ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿದೆ.

2008-09 ರಿಂದ 2015-16 ರವರೆಗೆ ವಿಧಾನಸೌಧ ವಾರ್ಷಿಕವಾಗಿ 11,10,876 ರೂ.ಗಳನ್ನು ಪಾವತಿಸಬೇಕಾಗಿತ್ತು, ನಂತರ 2016-17 ರಿಂದ 2020-21 ರವರೆಗೆ ದಂಡದೊಂದಿಗೆ 13,88,595 ರೂ.ಗೆ ಪರಿಷ್ಕರಿಸಲಾಯಿತು. ನಂತರ 2021-22 ರಿಂದ 2023-24 ರವರೆಗೆ 19,9,704 ರೂ. ಹಣ ಬಾಕಿ ಉಳಿಸಿಕೊಂಡಿದೆ. 2008-09 ರಿಂದ 2015-16 ರವರೆಗೆ 27,74,984 ರೂ.ಗಳ ಬಾಕಿಯನ್ನು ಸರ್ಕಾರ ಪಾವತಿಸಬೇಕಾಗಿತ್ತು, ಇದು ನಂತರ 2020-21 ರವರೆಗೆ 34,68,730 ರೂ.ಗಳಿಗೆ ಏರಿಕೆಯಾಯಿತು. ಆದಾದ ನಂತರ 2021-22 ರಿಂದ 2023-24ಕ್ಕೆ ರೂ.34,96,480 ಕ್ಕೆ ಏರಿದೆ ಎಂದು ತಿಳಿದು ಬಂದಿದೆ.

ವಿಧಾನಸೌಧ (ಸಂಗ್ರಹ ಚಿತ್ರ)
ವಿಧಾನಸೌಧ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆ: 'ಶಕ್ತಿಸೌಧ' ನವೀಕರಣ ವಿಚಾರದಲ್ಲಿ ಹೊರಟ್ಟಿ-ಖಾದರ್ ನಡುವೆ ಜಟಾಪಟಿ

ವಿಕಾಸ ಸೌಧಕ್ಕೆ ಸರಕಾರದಿಂದ ಬಾಕಿ ಉಳಿದಿರುವ ಮೊತ್ತ 5,00,32,962 ಮತ್ತು ವಿಧಾನಸೌಧಕ್ಕೆ 2,00,29,095 ರೂ. ವಿಶೇಷ ನಿಬಂಧನೆಗಳ ಅಡಿಯಲ್ಲಿ, ಎಲ್ಲಾ ಸರ್ಕಾರಿ (ಕೇಂದ್ರ ಮತ್ತು ರಾಜ್ಯ) ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಯಿತು. ಆದರೆ ಅವರು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳು ಪಾವತಿಸುತ್ತಿರುವಾಗ, ನಾವು ಯಾವುದೇ ಸರ್ಕಾರಿ ಏಜೆನ್ಸಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ಜುಲೈ 31 ಕೊನೆಯ ದಿನವಾಗಿದ್ದು, ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿ ಸರ್ಕಾರಕ್ಕೆ ಹಲವು ಬಾರಿ ಜ್ಞಾಪನೆ ಸೂಚನೆಗಳನ್ನು ಕಳುಹಿಸಿದೆ, ಆದರೆ ಬಾಕಿಯನ್ನು ತೆರವುಗೊಳಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 29, 2024 ರಂದು, ಸಿಬ್ಬಂದಿ ಆಡಳಿತ ಮತ್ತು ಸುಧಾರಣಾ ಇಲಾಖೆಯು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಒಂದು ಬಾರಿ ವಿನಾಯಿತಿ ಕೋರಿ ಪತ್ರ ಬರೆದಿದೆ. "ನಾವು ವಿನಾಯಿತಿ ನೀಡಲಾಗುವುದಿಲ್ಲ ಎಂದು ಉತ್ತರಿಸಿದ್ದೇವೆ. ಸರ್ಕಾರ ಮತ್ತು ಬಿಬಿಎಂಪಿಗೆ ಹಣದ ಅವಶ್ಯಕತೆ ಇರುವುದರಿಂದ ಪಾವತಿ ಮಾಡಬೇಕಾಗಿದೆ' ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com