Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆ, ರಸ್ತೆಗಳು ಜಲಾವೃತ್ತ, ಮೇಲ್ಸೇತುವೆ ಕೆಳಗೆ ಆಶ್ರಯ ಪಡೆದ ಸವಾರರು!

ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಆರಂಭವಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಇಂದು ಭಾರಿ ಮಳೆ ಸುರಿಯಲಾರಂಭಿಸಿದೆ.
Heavy rains in Bengaluru
ಬೆಂಗಳೂರಿನಲ್ಲಿ ಭಾರಿ ಮಳೆ
Updated on

ಬೆಂಗಳೂರು: ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಆರಂಭವಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಇಂದು ಭಾರಿ ಮಳೆ ಸುರಿಯಲಾರಂಭಿಸಿದೆ.

ವೀಕೆಂಡ್ ಮೂಡ್ ನಲ್ಲಿದ್ದ ಬೆಂಗಳೂರಿಗರಿಗೆ ಸಂಜೆ ಸುರಿದ ಭಾರಿ ಮಳೆ ಕೊಂಚ ಕಿರಿಕಿರಿಯನ್ನುಂಟು ಮಾಡಿದ್ದು, ನಗರದ ಬಹುತೇಕ ಪ್ರದೇಶಗಳಲ್ಲಿ ಇಂದು ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ಬೆಂಗಳೂರಿನ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮೈಸೂರು ರಸ್ತೆ, ಚಾಮರಾಜಪೇಟೆ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ ಹಾಗೂ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ.

Heavy rains in Bengaluru
ಮೇ 30ಕ್ಕೆ ಮುಂಗಾರು ಕೇರಳ ಪ್ರವೇಶ; ರಾಜ್ಯದಲ್ಲಿ ಮುಂದಿನ ಎರಡ್ಮೂರು ದಿನ ಮಳೆ ಸಾಧ್ಯತೆ

ರಾಜಧಾನಿ ಬೆಂಗಳೂರಲ್ಲಿ ಬಿಡುವು ನೀಡಿದ್ದ ವರುಣ ವಾರದ ನಂತರ ಮತ್ತೆ ಅಬ್ಬರಿಸಿದ್ದು. ಕೇವಲ ಒಂದೂವರೆ ಗಂಟೆಯ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡು ನದಿಯಂತಾಗಿವೆ. ಒಂದೆಡೆ ಭಾರಿ ಮಳೆ ಮತ್ತೊಂದೆಡೆ ರಸ್ತೆಗಳು ಜಲಾವೃತ್ತವಾದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಹೆಬ್ಬಾಳದಲ್ಲಿ ಸವಾರರು ಮೇಲ್ಸೇತುವೆ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರೆ, ಅಲ್ಲಿಯೇ ಇದ್ದ ಬೃಹತ್ ಹೋರ್ಡಿಂಗ್ ನ ಜಾಹಿರಾತು ಪರದೆ ಪ್ರಬಲ ಗಾಳಿಗೆ ಸಿಲುಕಿ ಹರಿದು ಹೋಯಿತು.

ಹೆಬ್ಬಾಳದ ಬಿಇಎಲ್ ಸರ್ಕಲ್ ನ ಸುರಂಗ ಮಾರ್ಗದಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಒಂದೆಡೆ ಜಲಾವೃತ್ತಗೊಂಡ ರಸ್ತೆಗಳಿಂದ ಸವಾರರು ಅವಸ್ಥೆ ಪಟ್ಟರೆ ಮತ್ತೊಂದೆಡೆ ರಸ್ತೆಗುಂಡಿಗಳು ವಾಹನ ಸವಾರರಿಗೆ ಮತ್ತೊಂದಷ್ಟು ಸವಾಲೆಸೆಯ ತೊಡಗಿವೆ.

ಮಳೆ ನೀರು ನಿಂತು ರಸ್ತೆಗುಂಡಿ ಕಾಣದೇ ವಾಹನ ಸವಾರರು ಜೀವ ಪಣಕ್ಕಿಟ್ಟು ವಾಹನ ಚಲಾಯಿಸಬೇಕಿದೆ. ಮಾರತ್ ಹಳ್ಳಿ ಜಂಕ್ಷನ್ ನಲ್ಲಿ ಸವಾರರು ನೀರಿನಲ್ಲಿ ಮುಳುಗಿದ ರಸ್ತೆ ಗುಂಡಿ ದಾಟಲು ಹರಸಾಹಸವನ್ನೇ ಪಟ್ಟ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಸರ್ಜಾಪುರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಇಡೀ ಪ್ರದೇಶ ನದಿಯಂತಾಗಿದೆ.

ಇತ್ತ ಭಾರಿ ಮಳೆಯಿಂದಾಗಿ ಯಲಚೇನಹಳ್ಳಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ನೀರಿನ ರಭಸಕ್ಕೆ ವಾಹನಗಳೇ ಕೊಚ್ಚಿ ಹೋಗುತ್ತಿವೆ. ಸ್ಥಳೀಯ ನಿವಾಸಿಗಳು ಇಂದು ಬೀದಿಗಿಳಿದು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಳೆದ 12 ವರ್ಷಗಳಿಂದ ಈ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಇದ್ದು ಕೂಡಲೇ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸುತ್ತಿದ್ದಾರೆ.

ಕೋಣನಕುಂಟೆಯಲ್ಲಿ ಆಲಿಕಲ್ಲು ಮಳೆ

ಇತ್ತ ಕೋಣನಕುಂಟೆ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಆಲಿಕಲ್ಲು ಸಹಿತ ಮಳೆಯಾಗಿದೆ. ಸ್ಥಳೀಯರು ಮಳೆ ನೀರಿನಲ್ಲಿ ಆಲಿಕಲ್ಲುಗಳನ್ನು ಹೆಕ್ಕುತ್ತಿರುವ ವಿಡಿಯೋ ಹರಿದಾಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com