ಬೆಂಗಳೂರು: ತಮಾಷೆ ತಂದ ಆಪತ್ತು; ಗುದದ್ವಾರಕ್ಕೆ ಏರ್ ಪ್ರೆಷರ್ ಗಾಳಿ ಹಾಕಿದ ಸ್ನೇಹಿತ, ಯುವಕ ಸಾವು

ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯಲ್ಲಿಯ ಕರುಳು ತುಂಡರಿಸಿ ಆರ್. ಯೋಗೇಶ್ (24) ಎಂಬಾತ ಮೃತ ಪಟ್ಟಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಮಾಷೆ ಮಾಡಲು ಹೋಗಿ ತನ್ನ ಸ್ನೇಹಿತನ ಪ್ರಾಣವನ್ನೇ ತೆಗೆದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯಲ್ಲಿಯ ಕರುಳು ತುಂಡರಿಸಿ ಆರ್. ಯೋಗೇಶ್ (24) ಎಂಬಾತ ಮೃತ ಪಟ್ಟಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೇವನಹಳ್ಳಿ ತಾಲ್ಲೂಕಿನ ಯೋಗೇಶ್, ಬೆಂಗಳೂರಿನ ಥಣಿಸಂದ್ರದಲ್ಲಿ ತಂದೆ–ಅಕ್ಕನ ಜೊತೆ ವಾಸವಿದ್ದರು. ಈವೆಂಟ್ ಮ್ಯಾನೇಜ್ ಮೆಂಟ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಾವಿನ ಬಗ್ಗೆ ಐಪಿಸಿ 304 (ಕೊಲೆ ಉದ್ದೇಶವಿಲ್ಲದೆ ನಡೆದ ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಮುರುಳಿಯನ್ನು ಬಂಧಿಸಲಾಗಿದೆ ಎಂದು ಸಂಪಿಗೆಹಳ್ಳಿ ಪೊಲೀಸರು ಹೇಳಿದರು.

ಥಣಿಸಂದ್ರದಲ್ಲಿರುವ ‘ಸಿಎನ್‌ಎಸ್ ಕಾರು ಸ್ಪಾ’ ಸರ್ವೀಸ್ ಮಳಿಗೆಯಲ್ಲಿ ಆರೋಪಿ ಮುರುಳಿ ಕೆಲಸ ಮಾಡುತ್ತಿದ್ದ. ಯೋಗೇಶ್, ಆಗಾಗ ಮಳಿಗೆಗೆ ಹೋಗಿ ಸ್ನೇಹಿತ ಮುರುಳಿಯನ್ನು ಮಾತನಾಡಿಸಿಕೊಂಡು ಬರುತ್ತಿದ್ದರು ಎಂದು ಪೊಲೀಸರು ಹೇಳಿದರು. ಬೈಕ್ ಸರ್ವೀಸ್ ಮಾಡಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿದ್ದ ಯೋಗೇಶ್, ಮಾರ್ಚ್ 25ರಂದು ಸಂಜೆ 7 ಗಂಟೆ ಸುಮಾರಿಗೆ ಮಳಿಗೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಯೋಗೇಶ್, ಚಡ್ಡಿ ಧರಿಸಿದ್ದರು ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮಂಗನ ಕಾಯಿಲೆಗೆ ಮತ್ತೊಂದು ಬಲಿ, ಚಿಕಿತ್ಸೆ ಫಲಿಸದೆ ವೃದ್ಧೆ ಸಾವು

ಯೋಗೇಶ್‌ ಅಲ್ಲಿಗೆ ಹೋದಾಗ, ಮುರುಳಿ ಕಾರೊಂದನ್ನು ಏರ್ ಪ್ರೆಷರ್ ಪೈಪ್ ಮೂಲಕ ಸ್ವಚ್ಛಗೊಳಿಸುತ್ತಿದ್ದರು. ಯೋಗೇಶ್‌ ಅವರನ್ನು ನೋಡಿದ್ದ ಆತ, ಪೈಪ್‌ ಹಿಡಿದುಕೊಂಡೇ ಮಾತನಾಡಿಸಲು ಬಂದಿದ್ದ.

ಸ್ನೇಹಿತನೆಂಬ ಕಾರಣಕ್ಕೆ ಆತ್ಮೀಯತೆಯಿಂದ ಮಾತನಾಡಿಸಿದ್ದ ಮುರುಳಿ, ಯೋಗೇಶ್‌ ಅವರನ್ನು ಹಿಂದಿನಿಂದ ಬಿಗಿದಪ್ಪಿಕೊಂಡು ಗುದದ್ವಾರಕ್ಕೆ ಪೈಪ್ ಹಿಡಿದು ಒತ್ತಿದ್ದ. ಇದೇ ಸಂದರ್ಭದಲ್ಲಿ ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಅತೀ ವೇಗದಲ್ಲಿ ಗಾಳಿ ನುಗ್ಗಿತ್ತು.

ಗಾಳಿಯ ಒತ್ತಡ ಹೆಚ್ಚಿದ್ದರಿಂದ ಕರುಳು ತುಂಡರಿಸಿ, ಹೊಟ್ಟೆಯೊಳಗೆ ರಕ್ತಸ್ರಾವವಾಗಿತ್ತು. ಯೋಗೇಶ್‌ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾರ್ಚ್ 27ರಂದು ಬೆಳಿಗ್ಗೆ ಅವರು ಅಸುನೀಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಾಂದರ್ಭಿಕ ಚಿತ್ರ
ತುಮಕೂರು: ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿ ಸಾವು

ಯೋಗೇಶ್ ಮನೆಗೆ ಬಾರದೆ ಇದ್ದಾಗ ಆತನ ಸಹೋದರಿ ಜಯಶ್ರೀ ಅವರಿಗೆ ಕರೆ ಮಾಡಿದ್ದಾರೆ, ಈ ವೇಳೆ ಆತ ಆಸ್ಪತ್ರೆಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಕೂಡಲೇ ಜಯಶ್ರೀ ಆಸ್ಪತ್ರೆಗೆ ದೌಡಾಯಿಸಿದಾಗ ಯೋಗೇಶ್ ನಡೆದಿದ್ದನ್ನು ಹೇಳಿದ್ದಾನೆ.

ಮಂಗಳವಾರ ಬೆಳಗ್ಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮರುದಿನ ಬೆಳಿಗ್ಗೆ 9.30 ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

‘ಗುದದ್ವಾರದೊಳಗೆ ಏರ್‌ ಪ್ರೆಷರ್‌ ಗಾಳಿ ಬಿಟ್ಟರೆ ಸಾವು ಸಂಭವಿಸುತ್ತದೆ ಎಂಬುದು ಗೊತ್ತಿದ್ದರೂ ಮುರುಳಿ ನಿರ್ಲಕ್ಷ್ಯ ವಹಿಸಿದ್ದ. ಈತನಿಂದ ಯೋಗೇಶ್ ಮೃತಪಟ್ಟಿರುವುದಾಗಿ ಸಹೋದರಿ ದೂರು ನೀಡಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿರುವುದರಿಂದ, ಸಾವಿನ ಬಗ್ಗೆ ವೈದ್ಯರಿಂದಲೂ ಹೇಳಿಕೆ ಪಡೆಯಲಾಗಿದೆ ಎಂದು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com