ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಯುವಕನೋರ್ವ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರೇಯಸಿಯ ಕೊಲೆ ಬಳಿಕ ಪ್ರಿಯಕರ ಪೊಲೀಸರಿಗೆ ಶರಣಾಗಿದ್ದಾನೆ. ಕೋಲ್ಕತ್ತಾ ಮೂಲದ ಫರೀದಾ ಖಾನುಂ (42) ಕೊಲೆಯಾದವರು. ಆರೋಪಿ ಗಿರೀಶ್ ಅಲಿಯಾಸ್ ರೆಹಾನ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನಿದು ಘಟನೆ?
ರಾತ್ರಿ 7.45ರ ಸುಮಾರಿಗೆ ಶಾಲಿನಿ ಮೈದಾನದ ಮೆಟ್ಟಿಲುಗಳ ಮೇಲೆ ಕುಳಿತು ಮಾತನಾಡುತ್ತಿದ್ದ ಗಿರೀಶ್ ಹಾಗೂ ಫರೀದಾ ಜೋರಾಗಿ ಕೂಗಾಡುತ್ತಾ ಜಗಳ ಆಡಲಾರಂಭಿಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಗಿರೀಶ್, ಚಾಕುವಿನಿಂದ ಫರೀದಾ ಅವರ ಕಿಬ್ಬೊಟ್ಟೆ, ಎದೆಭಾಗಕ್ಕೆ ಹಲವು ಬಾರಿ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಫರೀದಾ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಈ ಘಟನೆ ಕಂಡು ಬೆಚ್ಚಿಬಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಫರೀದಾ ಅವರನ್ನು ಕೊಲೆ ಮಾಡಿದ ಗಿರೀಶ್ ನಂತರ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬರ್ತ್ ಡೇಗೆ ಕರೆಸಿ ಕೊಲೆಗೈದ
ಪೊಲೀಸ್ ಮೂಲಗಳ ಪ್ರಕಾರ ಕೋಲ್ಕತ್ತಾದ ಫರೀದಾ ಈ ಹಿಂದೆ ನಗರದ 'ಸ್ಪಾ' ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗಿರೀಶ್ಗೆ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಗಿರೀಶ್ ತನ್ನ ಹೆಸರನ್ನು ರೆಹಾನ್ ಎಂದು ಬದಲಿಸಿಕೊಂಡಿದ್ದ. ಕೆಲ ತಿಂಗಳ ಹಿಂದೆ ಫರೀದಾ, ತಮ್ಮ ಸ್ವಂತ ಊರಿಗೆ ವಾಪಸ್ಸಾಗಿದ್ದರು. ಆನಂತರ ಗಿರೀಶ್ನೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ.
ಒಂದು ವಾರದ ಹಿಂದೆ ತನ್ನ ಹುಟ್ಟುಹಬ್ಬಕ್ಕೆ ಬರಬೇಕೆಂದು ಗಿರೀಶ್ ಒತ್ತಾಯ ಮಾಡಿ ಫರೀದಾರನ್ನು ಕರೆಸಿಕೊಂಡಿದ್ದ. ಫರೀದಾ ಅವರು ಜೆ.ಪಿ.ನಗರದ ಹೋಟೆಲ್ವೊಂದರಲ್ಲಿ ತಂಗಿದ್ದರು. ಶುಕ್ರವಾರ ಸಂಜೆ ಮಾತನಾಡುವ ಸಲುವಾಗಿ ಶಾಲಿನಿ ಮೈದಾನಕ್ಕೆ ಕರೆಸಿಕೊಂಡಿದ್ದ ಗಿರೀಶ್, ಮದುವೆಯಾಗುವಂತೆ ಒತ್ತಾಯಿಸಿದ್ದ. ಆದರೆ, ಮದುವೆಯಾಗಲು ಫರೀದಾ ನಿರಾಕರಿಸಿದ್ದರಿಂದ ಕೋಪಗೊಂಡ ಗಿರೀಶ್, ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
Advertisement