ಬೆಂಗಳೂರು: ರೈಲ್ವೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ತನ್ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, UPI ಮೂಲಕ ಕಾಯ್ದಿರಿಸದ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಿದೆ.
ಕೆಎಸ್ಆರ್ ರೈಲು ನಿಲ್ದಾಣದ ಕೌಂಟರ್ಗಳಲ್ಲಿ ಒಂದರಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಕಾಯ್ದಿರಿಸದ ಟಿಕೆಟ್ ಗಳನ್ನು ನಗದು ರೂಪದಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡಲಾಗಿತ್ತು. ಇದೀಗ ಡಿಜಿಟಲ್ ಪಾವತಿಗೂ ಅವಕಾಶ ನೀಡಲಾಗಿದೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊನೆ ಕ್ಷಣದಲ್ಲಿ ಟಿಕೆಟ್ ಖರೀದಿಗೆ ಜನರು ಸರತಿ ಸಾಲುಗಳಲ್ಲಿ ನಿಂತಿರುತ್ತಾರೆ. ಟಿಕೆಟ್ ಖರೀದಿಗೆ ನಗದು, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೂಲಕ ಪಾವತಿಗೆ ಅವಕಾಶ ನೀಡಲಾಗಿತ್ತು. ಪಾವತಿ ಸ್ವೀಕಾರಕ್ಕೆ ಇರುವ ಪ್ರಕ್ರಿಯೆಗಳು ವಿಳಂಬವಾಗುವಂತೆ ಮಾಡುತ್ತಿತ್ತು. ಹೀಗಾಗಿ ಮುಖ್ಯಪ್ರವೇಶದಲ್ಲಿರುವ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (UTS) ಕಚೇರಿಯ ಕೌಂಟರ್ ನಂ.8 ರಲ್ಲಿ ಮಾರ್ಚ್ 2 ರಂದು ಸೇವೆಯನ್ನು ಆರಂಭಿಸಲಾಗಿತ್ತು. ಇದಕ್ಕೆ ಜನರಿಂದ ಉತ್ತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಕೈಯಲ್ಲಿ ಹಣ ಇಟ್ಟುಕೊಳ್ಳದ ಹಾಗೂ ನಿಲ್ದಾಣದ ಒಳಗೆ ಟಿಕೆಟ್ ಖರೀದಿ ಮಾಡಲು ಬರುವವರಿಗೆ ಇದು ನಿಜಯವಾಗಿಯೂ ಸಹಾಯ ಮಾಡುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಮುಂಬೈನ ಕ್ಲೆವರ್ಟಾಪ್ಸ್ಟಾರ್ಟ್ಅಪ್ನ ನಿರ್ದೇಶಕ ಪ್ರಸಾದ್ ಕಾಮತ್ ಅವರು ಮಾತನಾಡಿ. ಈ ಸೇವೆ ನಿಜಕ್ಕೂ ಪ್ರಯಾಣಿಕರಿಗೆ ಉಪಯುಕ್ತವಾಗಿದೆ. ಪ್ರಸ್ತುತ ನನ್ನ ಜೇಬಿನಲ್ಲಿ ಕೇವಲ 100 ರೂ ಇದೆ. ಡಿಜಿಟಲ್ ಪಾವತಿ ವಿಧಾನವನ್ನು ಸಕ್ರಿಯಗೊಳಿಸಿರುವುದರಿಂದ ಟಿಕೆಟ್ ಖರೀದಿ ಸುಲಭವಾಯಿತು. ಈ ಪ್ರಕ್ರಿಯೆಯು ತುಂಬಾ ವೇಗವಾಗಿತ್ತು ಎಂದು ಹೇಳಿದ್ದಾರೆ.
ಬಾಗಲಕೋಟೆಗೆ ತೆರಳುತ್ತಿದ್ದ ಟೆಕ್ಕಿ ಸಜ್ಜನಕುಮಾರ್ ಮಾತನಾಡಿ, ಇಲ್ಲಿ ಈ ಸೌಲಭ್ಯ ಇದೆ ಎಂಬುದು ಗೊತ್ತಿರಲಿಲ್ಲ. ತಿಳಿದ ಕೂಡಲೇ ಪ್ರಯತ್ನ ಮಾಡಿದೆ. ಪ್ರಕ್ರಿಯೆ ತ್ವರಿತವಾಗಿತ್ತು. ಮತ್ತೊಂದು ಚಿಲ್ಲರೆ ಸಮಸ್ಯೆ ಕೂಡ ದೂರಾಗುವಂತಾಗಿದೆ ಎಂದು ಹೇಳಿದ್ದಾರೆ.
Advertisement