ಲೋಕಸಭೆ ಚುನಾವಣೆ: ಗಡಿ ಭಾಗಗಳಲ್ಲಿ ಸಾರಿಗೆ ಇಲಾಖೆಯಿಂದ ವಾಹನ ತಪಾಸಣೆ ಹೆಚ್ಚಳ
ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಯಾವುದೇ ಅಕ್ರಮಗಳು ನಡೆಯದಂತೆ ಸಾರಿಗೆ ಇಲಾಖೆಯು ರಾಜ್ಯದಾದ್ಯಂತ ವಾಹನ ತಪಾಸಣೆಯನ್ನು ತೀವ್ರಗೊಳಿಸಿದೆ.
ಗಡಿಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿರುವ ಸಾರಿಗೆ ಅಧಿಕಾರಿಗಳು, ವಾಹನಗಳ ದಾಖಲೆಗಳು ಹಾಗೂ ಸರಕುಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಕರ್ನಾಟಕವು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇಲಾಖೆಯು ಕೇವಲ 15 ಚೆಕ್ಪೋಸ್ಟ್ಗಳನ್ನು ಹೊಂದಿದೆ, ಆದರೆ ಇತರ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಸಾರಿಗೆ, ಪೊಲೀಸ್, ಅಬಕಾರಿ, ವಾಣಿಜ್ಯ ತೆರಿಗೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ವಾಹನಗಳನ್ನು ತಪಾಸಣೆ ನಡೆಸಲವಾಗುತ್ತಿದೆ ಎಂದು ಸಾರಿಗೆ ಆಯುಕ್ತ ಯೋಗೀಶ್ ಅವರು ಹೇಳಿದ್ದಾರೆ.
ಚೆಕ್ ಪೋಸ್ಟ್ಗಳಲ್ಲಿ, ಸಾರಿಗೆ ಅಧಿಕಾರಿಗಳು ಮೋಟಾರು ವಾಹನ ಕಾಯ್ದೆಯಡಿ ವಾಹನ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅಕ್ರಮವಾಗಿ ಹಣ ಅಥವಾ ಮದ್ಯ ಸಾಗಣೆ ಅಥವಾ ಅನುಮಾನಾಸ್ಪದವಾಗಿ ಏನಾದರೂ ಕಂಡುಬಂದಲ್ಲಿ ಕೂಡಲೇ ಅಬಕಾರಿ, ವಾಣಿಜ್ಯ ತೆರಿಗೆ, ಆದಾಯ ತೆರಿಗೆ ಮತ್ತು ಇತರ ಇಲಾಖೆಗಳಿಗೆ ಮಾಹಿತಿ ನೀಡುತ್ತೇವೆ. ಇದುವರೆಗೂ ಯಾವುದೇ ಅಕ್ರಮ ಹಣ ಅಥವಾ ಮದ್ಯ ಸಾಗಾಟಗಳು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.