ಚಿಕ್ಕಮಗಳೂರು: ತಾಲೂಕಿನ ಮೂಡಿಗೆರೆಯಲ್ಲಿರುವ ತನ್ನ ಸ್ನೇಹಿತನ ಮನೆಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಕಾಫಿ ತೋಟದ ಮಾಲೀಕರೊಬ್ಬರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಮಕರವಳ್ಳಿ ಗ್ರಾಮದ ಆಕಾಶ್ (21) ಮೃತ ಯುವಕ ಎಂದು ಗುರುತಿಸಲಾಗಿದೆ .ತಂದೆಯ ಮರಣದ ನಂತರ ಆಕಾಶ್ ತನ್ನ ತಾಯಿ ಮತ್ತು ಸಹೋದರನೊಂದಿಗೆ ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ವಾಸವಿದ್ದ ಎನ್ನಲಾಗಿದೆ.
ಆಕಾಶ್ ತನ್ನ ಸಹೋದರ ಕುಶಾಲ್, ಸ್ನೇಹಿತರಾದ ಭರತ್ ಮತ್ತು ಶ್ರೇಯಸ್ ಅವರೊಂದಿಗೆ ಮೂಡಿಗೆರೆಯ ಗೋಣಿಬೆಟ್ಟು ಕೊಪ್ಪಲು ಎಂಬಲ್ಲಿನ ರಾಜಗೋಪಾಲ್ ಅವರ ಎಸ್ಟೇಟ್ಗೆ ಏಪ್ರಿಲ್ 27 ರಂದು ಪ್ರವಾಸಕ್ಕೆಂದು ಭೇಟಿ ನೀಡಿದ್ದ.
ನಾಲ್ವರು ಯುವಕರು ಭಾನುವಾರ ಸಂಜೆ ರಾಜಗೋಪಾಲ್ ಎಸ್ಟೇಟ್ನಲ್ಲಿರುವ ಕೃಷಿ ಹೊಂಡದಲ್ಲಿ ಈಜಲು ತೆರೆಳಿದ್ದ. ಹೊಂಡದ ಆಳದ ಅರಿವಿಲ್ಲದ ಆಕಾಶ್ ಆಳಕ್ಕೆ ಹೋಗಿ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಬಳಿಕ ಸ್ನೇಹಿತರು ಹುಡುಕಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಸ್ಥಳಕ್ಕೆ ಬಂದ ಮುಳುಗು ತಜ್ಞ ಸ್ನೇಕ್ ಆರಿಫ್, ಗೋಣಿಬೀಡು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕಾಗಿ ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದಾರೆ. ಆದರೆ, ಪತ್ತೆಯಾಗಿಲ್ಲ.
ಬಳಿಕ ಸೋಮವಾರ ಬೆಳಗ್ಗೆ ಮತ್ತೊಬ್ಬ ಮುಳುಗುತಜ್ಞ ಈಶ್ವರ್ ಮಲ್ಪೆ ಸ್ಥಳಕ್ಕೆ ಆಗಮಿಸಿದ್ದು, ಸ್ನೇಕ್ ಆರಿಫ್ ಅವರೊಂದಿಗೆ ಕೈಜೋಡಿಸಿ ಮೃತದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಕುಶಾಲ್ ಸಹೋದರ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement