
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಭಾರೀ ಹಾಹಾಕಾರ ಉಂಟಾಗಿದ್ದು, ಅಂತರ್ಜಲ ಹೆಚ್ಚಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಾಕಷ್ಟ ಕಡೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಮಾಡಿ, ಮೈಲಿಗಲ್ಲು ಸಾಧಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಮುಂಗಾರು ಮಳೆ ಆರಂಭವಾಗಲು ತಿಂಗಳು ಬಾಕಿ ಇರುವಾಗಲೇ ಜಲಮಂಡಳಿಯು ನಗರಾದ್ಯಂತ ಒಟ್ಟು 986 ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಾದರಿ ಆಗಿದೆ.
ಹೊಂಡ ಒಂದನ್ನು ಪರಿಶೀಲಿಸಿದ ನಂತರ ಅಧಿಕಾರಿಗಳನ್ನು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ನಗರದಲ್ಲಿ ನೀರು ಪೂರೈಕೆ ಕೊರತೆಗೆ ಕಾವೇರಿ ನದಿಯಲ್ಲಿ ನೀರು ಇಲ್ಲದಿರುವುದು ಕಾರಣವಲ್ಲ. ಇದಕ್ಕೆ ಕಾರಣ ನಗರದಲ್ಲಿ ಅಂತರ್ಜಲ ಬತ್ತಿ ಹೋಗಿರುವುದಾಗಿದೆ. ಮಳೆ ನೀರು ಕೊಯ್ಲು ಅಳವಡಿಸಿಕೊಂಡಿರುವ ಹಲವಾರು ಕಟ್ಟಡಗಳಲ್ಲಿ ಮಳೆ ನೀರಿನ ಇಂಗುಗುಂಡಿಗಳನ್ನು ರಚಿಸದೇ ಇರುವ ಕಾರಣ ಅಂತರ್ಜಲ ಮರುಪೂರಣ ಸರಿಯಾಗಿ ಆಗುತ್ತಿಲ್ಲ. ಮರುಪೂರಣ ಆಗದೇ ಇರುವ ಕಾರಣ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಹೀಗಾಗಿ, ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದ್ದು, ಇದನ್ನು ವಲಯವಾರು ಮಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರತಿ ವಲಯದಲ್ಲಿ 250 ಇಂಗುಗುಂಡಿಗಳ ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಅಧಿಕಾರಿಗಳು ಶೇಕಡಾ 98.6 ರಷ್ಟು ದಕ್ಷತೆಯನ್ನು ತೋರಿಸಿದ್ದಾರೆ. ಇಂಗುಗುಂಡಿಗಳ ನಿರ್ಮಿಸುವಂತೆ ಜನರಿಗೆ ಹೇಳುವುದಕ್ಕೂ ಮುನ್ನ ಮೊದಲು ಮಂಡಳಿ ಅದನ್ನು ಅನುಸರಿಸಲು ಮುಂದಾಗಿದೆ. ನಾವು ಅನುಸರಿಸಿದ ಕ್ರಮವನ್ನು ಜನರಿಗೂ ತಿಳಿಸುತ್ತೇವೆಂದು ತಿಳಿಸಿದರು.
ಮಳೆನೀರು ಕೊಯ್ಲು ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ. ಅಂತರ್ಜಲ ಮಟ್ಟವು ಮರುಪೂರಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮನೆ ಮತ್ತು ಜಮೀನುಗಳಲ್ಲಿ ಇಂಗುಗುಂಡಿಗಳ ನಿರ್ಮಿಸುವಂತೆ ಜನರಿಗೂ ಮನವಿ ಮಾಡುತ್ತೇವೆ. ಸಮುದಾಯ ಮಳೆನೀರು ಕೊಯ್ಲು ಯೋಜನೆಗೆ ಮಂಡಳಿಯ ಪ್ರಸ್ತಾವನೆಯನ್ನು ಜನರು ಸ್ವಾಗತಿಸಿದ್ದಾರೆ. ಈ ಪ್ರಸ್ತಾವನೆಯು ಕೆರೆಗಳು ಮತ್ತು ಟ್ಯಾಂಕ್ಗಳನ್ನು ತುಂಬುವುದನ್ನು ಖಚಿತಪಡಿಸುತ್ತದೆ. ಮಂಡಳಿಯು 74 ಪ್ರಸ್ತಾವನೆಗಳನ್ನು ನೀಡಿದ್ದು, ಈಗ ಹಂತಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ 986 ಇಂಗುಗುಂಡಿಗಳ ನಿರ್ಮಿಸಲಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಅಂತರ್ಜಲ ಹೆಚ್ಚಿಸುವುದು ನಮ್ಮ ಒಟ್ಟಾರೆ ಉದ್ದೇಶವಾಗಿದೆ ಎಂದು ಹೇಳಿದರು.
Advertisement