ಬೆಂಗಳೂರು: ಮಾಲೀಕನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಹೋಟೆಲ್ ಸಹಾಯಕನೊಬ್ಬ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕದ್ದು, ಇದೀಗ ಜೈಲು ಪಾಲಾಗಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಕೇರಳದ ತಲಶ್ಶೇರಿ ಮೂಲದವರಾದ ಶಹೀಮ್ ಸಿ ಅಲಿಯಾಸ್ ಶಾಜ್, ಮಡಿವಾಳದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಬಾಕಿ ಉಳಿಸಿಕೊಂಡಿದ್ದ ತನ್ನ ಸಂಬಳವನ್ನು ಪಾವತಿಸುವಂತೆ ತನ್ನ ಶಹೀಮ್ ಮಾಲೀಕರನ್ನು ಕೇಳಿದ್ದಾನೆ. ಬಾಕಿ ಸಂಬಳ ನೀಡಿದರೆ ತಾನು ಕೇರಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾನೆ. ಆದರೆ, ಮಾಲೀಕರು ಆತನಿಗೆ ಸಂಬಳ ನೀಡಲು ನಿರಾಕರಿಸಿದ್ದಾರೆ. ಬದಲಿಗೆ ಶಹೀಮ್ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕಿನ ಬೀಗವನ್ನು ಒಡೆದು ಕೇರಳಕ್ಕೆ ಪ್ರಯಾಣಿಸುವಂತೆ ಸೂಚಿಸಿದ್ದಾರೆ.
ಹತ್ತೊಂಬತ್ತು ವರ್ಷದ ಶಹೀಮ್ ತನ್ನ ಮಾಲೀಕರು ನೀಡಿದ ಸಲಹೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾನೆ. ಬೈಕಿನ ಲಾಕ್ ಅನ್ನು ಹೇಗೆ ಒಡೆಯುವುದು ಎನ್ನುವುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹುಡುಕಲು ಪ್ರಾರಂಭಿಸಿದ್ದಾನೆ. ನಂತರ ಆತ ಯಶಸ್ವಿಯಾಗಿ ಬೈಕ್ನ ಬೀಗ ಮುರಿದು, ಕಳವು ಮಾಡಿದ ಬೈಕ್ನಲ್ಲಿಯೇ ತಲಶ್ಶೇರಿ ತೆರಳಿದ್ದಾನೆ.
ಬೈಕ್ ಮಾಲೀಕರು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೋಟೆಲ್ ಸಮವಸ್ತ್ರ ಧರಿಸಿದ್ದಾತ ಬೈಕ್ನ ಬೀಗ ಒಡೆದು ತೆಗೆದುಕೊಂಡು ಹೋಗುತ್ತಿರುವುದನ್ನು ಪೊಲೀಸರು ಸಿಸಿಟಿವಿ ದೃಶ್ಯಗಳ ಮೂಲಕ ಕಂಡುಕೊಂಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಶಹೀಮ್ ಕೇರಳಕ್ಕೆ ಹೋಗಿರುವುದಾಗಿ ಹೋಟೆಲ್ನವರು ತಿಳಿಸಿದ್ದಾರೆ.
ಪೊಲೀಸರು ಆತನ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ್ದು, ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ಆತನನ್ನು ಬಂಧಿಸಿ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಘಟನೆಯಲ್ಲಿ ನಗರದಾದ್ಯಂತ ನಾಲ್ಕು ವಾಹನಗಳನ್ನು ಕಳ್ಳತನ ಮಾಡಿದ್ದ ಹೆಡ್ಗೆನಗರ ನಿವಾಸಿ ಮುಬಾರಕ್ (25) ಎಂಬಾತನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 2.5 ಲಕ್ಷ ಮೌಲ್ಯದ ನಾಲ್ಕು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement