ಬೆಂಗಳೂರು: ಶನಿವಾರ ನಡೆದ ಹೈವೋಲ್ಟೇಜ್ ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್ ಮಾಡಿದ್ದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್'ಗೆ ಬೆಂಗಳೂರು ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.
ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಪಿಚ್ಗೆ ನುಗ್ಗುವುದಾಗಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ನಿತಿನ್ ಸಿಕ್ವೇರಿಯಾ ಹೇಳಿಕೊಂಡಿದ್ದ.
ಈ ವಿಡಿಯೋ ವೈರಲ್ ಆಗಿದ್ದು, ಭದ್ರತೆಯನ್ನು ಉಲ್ಲಂಘಿಸಲು ಯತ್ನಿಸಿದ್ದಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
50 ಸಾವಿರ (50K) ಫಾಲೋವರ್ಸ್ ಬಂದರೆ ಆರ್ಸಿಬಿ ಪಂದ್ಯದ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಓಡುವುದಾಗಿ ತಮ್ಮ ಫಾಲೋವರ್ಸ್ಗೆ ನಿತಿನ್ ಭರವಸೆ ನೀಡಿದ್ದ.
50 ಸಾವಿರ ಫಾಲೋವರ್ಸ್ ಪಡೆದ ಬಳಿಕ, ನಿತಿನ್ ಮೇ 18 ರಂದು ಕ್ರೀಡಾಂಗಣಕ್ಕೆ ಹೇಗೆ ಜಿಗಿಯಲಿದ್ದಾರೆ ಎಂಬುದರ ಕುರಿತು ವೀಡಿಯೊಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಕ್ತವಾದ ಸ್ಟ್ಯಾಂಡ್ಗಳಿಗೆ ಟಿಕೆಟ್ ಪಡೆದಿದಿರುವುದಾಗಿಯೂ, ಅಲ್ಲಿಂದ ಅವರು ಸುಲಭವಾಗಿ ಫೀಲ್ಡ್ಗೆ ಜಿಗಿಯಬಹುದು ಎಂದು ಹೇಳಿಕೊಂಡಿದ್ದ.
ನಿತಿನ್ ಸಿಕ್ವೇರಿಯಾ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬೆಂಗಳೂರು ಪೊಲೀಸರು ಕ್ರೀಡಾಂಗಣದಲ್ಲಿ ಭದ್ರತಾ ಲೋಪವನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದರು. ಇದರಂತೆ ನಿತಿನ್ ನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬೆಂಗಳೂರು ಪೊಲೀಸರು, ಒಳ್ಳೆಯ ಪ್ರಯತ್ನ, ಗೆಳೆಯ. ಆದರೆ, ಐಪಿಎಲ್ ಪಂದ್ಯದ ಸಮಯದಲ್ಲಿ ಭದ್ರತೆಯನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ನೇರವಾಗಿ ಹೊಡೆಯುವ ಸಿಕ್ಸ್ ನಮ್ಮ ಕಸ್ಟಡಿಗೆ ಬರಲಿದೆ ಎಂಬುದು ಗ್ಯಾರಂಟಿ. ಕ್ಷಮಿಸು ಗೆಳೆಯ, ನೀನು ಸ್ಟಂಪ್ ಆಗಿದ್ದೀಯಾ ಎಂದು ಟ್ರೋಲ್ ಶೈಲಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಪೊಲೀಸರ 30 ಸೆಕೆಂಡ್ನ ವಿಡಿಯೋ ಪೋಸ್ಟ್ ಈಗ ವೈರಲ್ ಆಗಿದೆ.
ಬೆಂಗಳೂರು ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಹಲವು ಮಂದಿ ಶ್ಲಾಘಿಸಿದ್ದು, ಭದ್ರತೆಗೆ ಸವಾಲೆಸೆಯುವವರಿಗೆ ತಕ್ಕಪಾಠ ಕಲಿಸಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
Advertisement